ಅಮೃತಕಾಲದ ಕೇಂದ್ರ ಬಜೆಟ್ ಮತ್ತು ಸಮುದ್ರ ಮಥನ
-

ಬಜೆಟ್ ಒಂದು ರೀತಿಯ ಸಮುದ್ರಮಥನವೇ; ಹಾಗಾಗಿ ಅದರಿಂದ ಬರುವ ಅಮೃತಕ್ಕೂ ಪುರಾಣದಲ್ಲಿ ಇದ್ದಂತೆ ವರ್ತಮಾನದಲ್ಲಿ ಪ್ರಾಶಸ್ತ್ಯವಿದೆ. ಅಮೃತದಲ್ಲಿ ಸರ್ವರಿಗೂ ಸಮಪಾಲು ಇದೆಯೇ ಎಂಬುದು ಇಂದಿನ ಪ್ರಶ್ನೆಯೂ ಆಗುತ್ತದೆ.
ವಿಶೇಷ ಮಹತ್ವ:
ಫೆಬ್ರವರಿ ಒಂದನೇ ತಾರೀಕಿನ ತಮ್ಮ ಬಜೆಟ್ ಭಾಷಣದ ಸಂದರ್ಭದಲ್ಲಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಪುರಾಣ ಪುರುಷರಾದ ಸಪ್ತರ್ಷಿಗಳನ್ನು ಸ್ಮರಿಸಿಕೊಂಡರು. ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಭಾರತವು ಈಗ ಅಮೃತಕಾಲವನ್ನು ಎದುರು ನೋಡುತ್ತಿದೆ ಎಂದರು. ಬಜೆಟ್ ಒಂದು ರೀತಿಯ ಸಮುದ್ರಮಥನವೇ; ಹಾಗಾಗಿ ಅದರಿಂದ ಬರುವ ಅಮೃತಕ್ಕೂ ಪುರಾಣದಲ್ಲಿ ಇದ್ದಂತೆ ವರ್ತಮಾನದಲ್ಲಿ ಪ್ರಾಶಸ್ತ್ಯವಿದೆ. ಅಮೃತದಲ್ಲಿ ಸರ್ವರಿಗೂ ಸಮಪಾಲು ಇದೆಯೇ ಎಂಬುದು ಇಂದಿನ ಪ್ರಶ್ನೆಯೂ ಆಗುತ್ತದೆ.
ಈ ಪ್ರಶ್ನೆಗೆ ಉತ್ತರವನ್ನು ಶೋಧಿಸಲು, ಬಜೆಟಿನ ಮಂಡನೆಯ ಕಾಲಘಟ್ಟದ ಬಗ್ಗೆ ಗಮನ ಹರಿಸುವುದು ಅತೀ ಅಗತ್ಯ. ಪ್ರಸಕ್ತ ನರೇಂದ್ರ ಮೋದಿ ಸರಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಇದು. ಅರ್ಥವ್ಯವಸ್ಥೆಯ ದೃಷ್ಟಿಯಲ್ಲಿ ಕೋವಿಡ್ ಸಾಂಕ್ರಾಮಿಕದ ಹೊಡೆತದಿಂದ 2020-22ರಲ್ಲಿ ಜರ್ಜರಿತವಾಗಿದ್ದ ದೇಶದ ಆರ್ಥಿಕತೆಯನ್ನು ದೂರಗಾಮಿ ಕ್ರಮಗಳ ಮೂಲಕ ಭದ್ರವಾಗಿ ಹಳಿಗೇರಿಸಿ ನಿರ್ವಿಘ್ನವಾದ ಪ್ರಗತಿಯ ಹೊಸ ದಾರಿಯನ್ನು ನಿರೂಪಿಸಲು ಅವಕಾಶವಿತ್ತು. ಸ್ವಾತಂತ್ರ್ಯದ 75 ವರ್ಷದ ಆಚರಣೆಯ ಸಂದರ್ಭದಲ್ಲಿ ಜನಸಾಮಾನ್ಯರ ಅಪೇಕ್ಷೆಗಳೂ ಸಾಕಷ್ಟಿದ್ದವು. ಜಾಗತಿಕ ರಾಜಕೀಯ ಹಾಗೂ ಅರ್ಥವ್ಯವಸ್ಥೆಯಲ್ಲಿನ ಅನಿಶ್ಚಿತತೆಯ ಬಿಸಿ ನಮ್ಮ ದೇಶಕ್ಕೂ ಹರಡುವ ಸಾಧ್ಯತೆ ನಿಚ್ಚಳವಾಗಿತ್ತು.
ಪ್ರಸಕ್ತ ಅರ್ಥವ್ಯವಸ್ಥೆ ಮತ್ತು 2023ರ ಆರ್ಥಿಕ ಸಮೀಕ್ಷೆ:
ಬಜೆಟಿನ ವಿಶ್ಲೇಷಣೆಗೆ ಪೂರಕವಾಗಿ ದೇಶದ ಇಂದಿನ ಆರ್ಥಿಕ ಪರಿಸ್ಥಿತಿಯತ್ತ ಒಂದು ಸ್ಥೂಲವಾದ ನೋಟವನ್ನು ಹರಿಸುವುದೂ ಅನಿವಾರ್ಯ. ಭಾರತದ ಆರ್ಥಿಕತೆಯ ಮುಖ್ಯ ಬೆಳವಣಿಗೆಗಳನ್ನು ಮತ್ತು ಸಮಸ್ಯೆಗಳನ್ನು ಕೆಳಗೆ ಸಂಕ್ಷಿಪ್ತವಾಗಿ ಪಟ್ಟಿಮಾಡಲಾಗಿದೆ:
1. ಇನ್ನೂ ಸ್ಥಿರವಾಗದ ಆರ್ಥಿಕ ಪ್ರಗತಿ.
2. ನಿರಂತರವಾದ ಬೆಲೆಯೇರಿಕೆ.
3. ಚೇತರಿಸಿಕೊಳ್ಳದ ಬಂಡವಾಳ ಹೂಡಿಕೆ.
4. ಆಶಾದಾಯಕವಲ್ಲದ ವಿದೇಶೀ ನೇರ ಬಂಡವಾಳದ (ಎಫ್ಡಿಐ) ಒಳಹರಿವು.
5. ವಿದೇಶ ವ್ಯಾಪಾರದಲ್ಲಿ ಹೆಚ್ಚುತ್ತಿರುವ ಖೋತಾ.
6. ಚೇತರಿಸಿಕೊಳ್ಳದ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು (ಎಂಎಸ್ಎಂಇ).
7. ಆರ್ಥಿಕ ಅಭದ್ರತೆಗೆ ಬಲಿಯಾಗುತ್ತಿರುವ ಕೃಷಿರಂಗ
8. ಹಿಡಿತಕ್ಕೆ ಬಾರದ ನಿರುದ್ಯೋಗದ ಸಮಸ್ಯೆ.
9. ತೀವ್ರವಾಗುತ್ತಿರುವ ಆರ್ಥಿಕ ಅಸಮಾನತೆಗಳು ಮತ್ತು ದಾರಿದ್ರ್ಯ.
ಬಜೆಟ್ ಮಂಡನೆಯ ಪೂರ್ವಭಾವಿಯಾಗಿ ಜನವರಿ 31ರಂದು ಸಂಸತ್ತಿನಲ್ಲಿ ಮಂಡಿಸಿದ 2023ರ ಆರ್ಥಿಕ ಸಮೀಕ್ಷೆಯು ಮೇಲೆ ಹೇಳಿದ ಸಮಸ್ಯೆಗಳನ್ನು ಅಧಿಕೃತವಾಗಿ ದೃಢೀಕರಿಸುತ್ತವೆ. ಸಮೀಕ್ಷೆಯ ಪ್ರಕಾರ ಭಾರತದ ಅರ್ಥವ್ಯವಸ್ಥೆಯು 2022-23ರ ಸಾಲಿನಲ್ಲಿ ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದೆ. ಸಾಂಕ್ರಾಮಿಕದ ಹಿಂದಿನ ಮಟ್ಟಕ್ಕೆ ಅರ್ಥಾತ್ 2018-19ರ ಪ್ರಗತಿಯ ವೇಗ ತಲಪಿದೆ. ಹಾಗಿದ್ದರೂ ಬೆಲೆ ಏರಿಕೆ, ರೂಪಾಯಿಯ ಬೆಲೆಯ ಕುಸಿತ, ಹೆಚ್ಚುತ್ತಿರುವ ವಿತ್ತೀಯ ಕೊರತೆ, ಜಗತ್ತಿನಲ್ಲಿ ಆಗಬಹುದಾದ ಹಿಂಜರಿತದ ಪ್ರಭಾವ-ಇವೇ ಮುಂತಾದ ಸವಾಲುಗಳನ್ನು ಸಮೀಕ್ಷೆಯು ಉಲ್ಲೇಖಿಸಿದೆ. ಇವುಗಳ ಹೊರತಾಗಿಯೂ 2023-24ರ ಸಾಲಿನಲ್ಲಿ ಭಾರತದ ಆರ್ಥಿಕ ಪ್ರಗತಿಯು ಶೇ. 6.5ರ ಮಟ್ಟವನ್ನು ತಲಪಬಹುದು ಎಂದು ಸಮೀಕ್ಷೆಯು ಅಂದಾಜಿಸಿದೆ.
ಆದರೆ ಈ ಪ್ರಗತಿಯನ್ನು ಸಾಧಿಸಲು, ಸರಕಾರವು ನೆಚ್ಚಿಕೊಂಡಿರುವುದು ಖಾಸಗಿ ರಂಗದ ಬಂಡವಾಳ ಹೂಡಿಕೆಯನ್ನು. ಸರಕಾರದ ಪ್ರಕಾರ ಖಾಸಗಿ ಕಂಪೆನಿಗಳಲ್ಲಿ ಹೂಡಿಕೆಗೆ ಅಗತ್ಯವಾದ ಆಂತರಿಕ ಸಂಪನ್ಮೂಲಗಳಿವೆ, ಅವುಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ; ಕೈಗಾರಿಕೋತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ, ಹಣಕಾಸು ಸಂಸ್ಥೆಗಳು ಹೊಸ ಬಂಡವಾಳವನ್ನು ಹೂಡಲು ಹೆಚ್ಚುಹೆಚ್ಚು ಆಸಕ್ತಿಯನ್ನು ತೋರಿಸುತ್ತಿವೆ. ಈ ಎಲ್ಲ ಬೆಳವಣಿಗೆಗಳು ದೇಶದ ಅರ್ಥವ್ಯವಸ್ಥೆಯನ್ನು ಮತ್ತಷ್ಟು ಮೇಲೆತ್ತುವ ಸಾಧ್ಯತೆ ಇದೆ ಎಂದೂ ಸಮೀಕ್ಷೆಯು ಹೇಳಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಈ ವರ್ಷದ ಮುಂಗಡಪತ್ರದ ಕುರಿತಾಗಿ ಬಹಳಷ್ಟು ನಿರೀಕ್ಷೆಗಳು ಇದ್ದವು. ಜನಸಾಮಾನ್ಯರ ದೃಷ್ಟಿಯಿಂದ ಬೆಲೆಗಳ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗೆ ತಾತ್ಕಾಲಿಕವಾದ ಪರಿಹಾರವಾದರೂ ಸಿಗಬಹುದೆಂಬ ಆಸೆ ಇತ್ತು. ತಜ್ಞರ ದೃಷ್ಟಿಯಲ್ಲಿ ದೇಶದ ಆರ್ಥಿಕ ಪ್ರಗತಿಗೆ ಅಗತ್ಯವಾದ ವೇಗವರ್ಧಕಗಳು ಮತ್ತು ನೇರವಾದ ಉತ್ತೇಜನ ಸಿಕ್ಕಿ ಮತ್ತೆ ಅಭಿವೃದ್ಧಿಪಥದಲ್ಲಿ ದೇಶ ಸಾಗಬಹುದೇನೊ ಎಂಬ ಭಾವನೆ ಇತ್ತು. ಸಾಮಾಜಿಕ ಕಾರ್ಯಕರ್ತರಲ್ಲಿ ದೇಶದ ಆರ್ಥಿಕ ಅಸಮಾನತೆಗಳನ್ನು ಕಡಿತಗೊಳಿಸುವ ನಿರ್ದಿಷ್ಟ ಯೋಜನೆಗಳು ಹೊರಬರಬಹುದೆಂಬ ನಿರೀಕ್ಷೆಯೂ ಇತ್ತು.
ಬಜೆಟಿನ ಮುಖ್ಯ ಆದ್ಯತೆಗಳು:
ಹಣಕಾಸು ಮಂತ್ರಿ ಅವರು ತಮ್ಮ ಭಾಷಣದ ಆರಂಭದಲ್ಲಿ ಬಜೆಟಿನ ಉದ್ದೇಶಗಳನ್ನು ಸ್ಪಷ್ಟವಾದ ರೀತಿಯಲ್ಲಿ ತಿಳಿಸಿದರು. ‘ಸ್ವಾತಂತ್ರ್ಯದ ಅಮೃತಕಾಲ’ದಲ್ಲಿ ತಮ್ಮ ಆದ್ಯತೆಗಳು ಹೀಗಿವೆ ಎಂದು ಹೇಳಿದರು:
1. ಎಲ್ಲರನ್ನು ಒಳಗೊಂಡ ಪ್ರಗತಿ
2. ಮೂಲಸೌಕರ್ಯದ ಅಭಿವೃದ್ಧಿ
3. ಸಾಮರ್ಥ್ಯದ ಬಳಕೆ
4. ಹಸಿರು ಪ್ರಗತಿ
5. ಹಣಕಾಸು ರಂಗದ ಸುಧಾರಣೆಗೆ ಕ್ರಮಗಳು
6. ಯುವಶಕ್ತಿಯ ಸದುಪಯೋಗ ಮತ್ತು
7. ಕೊನೆಯ ಮೈಲಿಗೂ ತಲಪಬೇಕಾದ ಪ್ರಗತಿಯ ಫಲಗಳು(ಅಂತ್ಯೋದಯ)
ಈ ಗುರಿಗಳು ಮತ್ತು ಆದ್ಯತೆಗಳು ಅತ್ಯಂತ ಸ್ಪಷ್ಟವಾಗಿವೆ. ಇವುಗಳನ್ನು ಗಮನದಲ್ಲಿರಿಸಿಕೊಂಡು ಬಜೆಟಿನಲ್ಲಿ ಹಲವಾರು ಘೋಷಣೆಗಳನ್ನು ಮಾಡಲಾಗಿದೆ.
ಮೆಚ್ಚುವ ನಿರ್ಧಾರಗಳು
ದೇಶದ ದೀರ್ಘಕಾಲೀನ ಸುಸ್ಥಿರ ಪ್ರಗತಿಗೆ ಅಗತ್ಯವಾದ ನಾಲ್ಕು ಮುಖ್ಯ ನಿರ್ಧಾರಗಳು ಹೀಗಿವೆ:
1. ಮೂಲಸೌಕರ್ಯಗಳ ಅಭಿವೃದ್ಧಿಗೆ ರೂ.10 ಲಕ್ಷ ಕೋಟಿಯ ಬೃಹತ್ ಗಾತ್ರದ ಹೂಡಿಕೆಯ ಪ್ರಸ್ತಾವ.
2. ರೈಲ್ವೆಯ ಅಭಿವೃದ್ಧಿಗೆ ರೂ. 2.60 ಲಕ್ಷ ಕೋಟಿಯ ಮೀಸಲು.
3. ಪರ್ಯಾಯ ಇಂಧನದ (ಹಸಿರು ಇಂಧನ) ಬಳಕೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ.
4. ಕೃಷಿಯ ಸಾಲದ ಗುರಿಯನ್ನು ರೂ.20 ಲಕ್ಷ ಕೋಟಿಗೆ ಏರಿಸಿರುವುದು.
ಈ ನಾಲ್ಕೂ ಪ್ರಸ್ತಾವಗಳು ಆರ್ಥಿಕ ಪ್ರಗತಿಯಲ್ಲಿ ಮಹತ್ವವಾದ ಪಾತ್ರವನ್ನು ಪಡೆಯಬಲ್ಲವು; ಅ ಕಾರಣಕ್ಕಾಗಿ ಅವು ಸ್ವಾಗತಾರ್ಹ ನಿರ್ಧಾರಗಳು.
ದೇಶದ ಅರ್ಥವ್ಯವಸ್ಥೆಯು ಬೆಲೆ ಏರಿಕೆ ಮತ್ತು ಹಣದ ಉಬ್ಬರಗಳಿಂದಾಗಿ ಏರುಪೇರಾಗುವುದನ್ನು ನಿಯಂತ್ರಿಸಲು ಸರಕಾರದ ಆಯ-ವ್ಯಯದ ಮೇಲೆ ನಿಯಂತ್ರಣ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿತ್ತೀಯ ಕೊರತೆಯನ್ನು ಇನ್ನೆರಡು ವರ್ಷಗಳಲ್ಲಿ ಅಂದರೆ 2025-26ಕ್ಕೆ ಈಗಿನ ಶೇ. 6.5ರಿಂದ ಶೇ. 4.5ಕ್ಕೆ ಇಳಿಸುವ ಬಗ್ಗೆ ಸರಕಾರವು ಒತ್ತುಕೊಟ್ಟಿದೆ. ಇದೂ ಒಂದು ಸ್ವಾಗತಾರ್ಹ ಕ್ರಮ.
ಕೆಲವು ಕ್ಷೇತ್ರಗಳ ಪ್ರಗತಿಗೆ ಅವಶ್ಯವಾದ ಪ್ರಸ್ತಾವಗಳನ್ನು ಸರಕಾರ ಪುನರುಚ್ಚರಿಸಿದೆ. ನಗರಾಭಿವೃದ್ಧಿ, ಎಂಎಸ್ ಎಂಇ, ಸಹಕಾರಿ ರಂಗ, ಶಿಕ್ಷಣ, ಕೌಶಲಾಭಿವೃದ್ದಿ, ವಸತಿ ಸೌಕರ್ಯಕ್ಕೆ ಸಹಾಯಧನದ ಮುಂದುವರಿಕೆ, ಕುಡಿಯುವ ನೀರಿನ ಯೋಜನೆ, ಬುಡಕಟ್ಟುಗುಂಪುಗಳ ಅಭಿವೃದ್ಧಿ-ಹೀಗೆ ವಿಭಿನ್ನ ಕ್ಷೇತ್ರಗಳಿಗೆ ಅನುದಾನ ಅಥವಾ ಪ್ರೋತ್ಸಾಹ ಧನವನ್ನು ಮುಂದುವರಿಸಿದೆ, ಹೊಸ ಯೋಜನೆಗಳನ್ನು ಘೋಷಿಸಿದೆ. ಆದಾಯ ತೆರಿಗೆ ಮತ್ತು ಆಮದು ಸುಂಕದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.