-

ಕಾಂಗ್ರೆಸ್-ಜೆಡಿಎಸ್ ಪೈಪೋಟಿಯ ಮಧ್ಯೆ ಲಾಭವಾಗುವುದೇ ಬಿಜೆಪಿಗೆ?

-

ಆರ್.ವಿ.ದೇಶಪಾಂಡೆ

ಆರ್. ವಿ. ದೇಶಪಾಂಡೆ ಕಾಂಗ್ರೆಸ್‌ನ ಹಿರಿಯ ಮತ್ತು ಅತ್ಯಂತ ಪ್ರಭಾವಿ ನಾಯಕ. ಮೂಲತಃ ಜನತಾ ಪರಿವಾರದವರು. 1999ರಲ್ಲಿ ಕಾಂಗ್ರೆಸ್ ಸೇರಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯನ್ನು ಹಲವು ವರ್ಷ ನಿರ್ವಹಿಸಿದ್ದ ಹೆಗ್ಗಳಿಕೆ. ಈಗ ಶಾಸಕರಾಗಿರುವ ಹಳಿಯಾಳ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಹಿಡಿತ ಸಾಧಿಸಿದ್ದಾರೆ.

ಗೆಲ್ಲುವ ಎಲ್ಲ ಸೂತ್ರ ಬಲ್ಲ ದೇಶಪಾಂಡೆಗೆ ಈ ಬಾರಿ ಸ್ನೇಹಿತನೇ ಎದುರಾಳಿಯೆ? ಅಖಾಡದವರೆಗೂ ಬಂದಿದೆಯೆ ಇಬ್ಬರ ಹಲವು ವರ್ಷಗಳ ಮುಸುಕಿನ ಗುದ್ದಾಟ? ಜೆಡಿಎಸ್ ಎದುರು ಕಂಡಿದ್ದ ಸೋಲು ಮರುಕಳಿಸೀತೆ ಪ್ರಬಲ ನಾಯಕನ ಪಾಲಿಗೆ? ಹಳಿಯಾಳ ಕ್ಷೇತ್ರದಲ್ಲಿ ಇವರಿಬ್ಬರ ಪೈಪೋಟಿಯ ಲಾಭ ಪಡೆಯಲಿದೆಯೆ ಬಿಜೆಪಿ?

ಹಳಿಯಾಳ, ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ. ರಾಜಕೀಯವಾಗಿ ತನ್ನದೇ ಆದ ಮಹತ್ವ ಪಡೆದಿದೆ. ಹಳಿಯಾಳದಲ್ಲಿ ಒಂದೆಡೆ ಮಲೆನಾಡು, ಇನ್ನೊಂದೆಡೆ ಬಯಲುಸೀಮೆ. ಕೃಷಿಯೇ ಪ್ರಧಾನ. ಅರಣ್ಯಭೂಮಿಯ ಒಡೆತನ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯಂತಹ ಮಹತ್ವದ ಕೆಲಸಗಳು ಕಾರ್ಯರೂಪಕ್ಕೆ ಬರದೆ ಸ್ಥಳೀಯ ಮುಖಂಡರ ವಿರುದ್ಧ ಅಸಮಾಧಾನ ಮನೆ ಮಾಡಿದೆ.

ಹಳಿಯಾಳ ಕ್ಷೇತ್ರದಲ್ಲಿರುವುದು ಮರಾಠರ ಪ್ರಾಬಲ್ಯ ನಂತರ ಮುಸ್ಲಿಮರು, ಕುಣಬಿಗಳು ಬರುತ್ತಾರೆ. ಬ್ರಾಹ್ಮಣರು ಕಡಿಮೆ. ಆದರೆ ಗೆಲ್ಲುವುದು ಮಾತ್ರ ಅವರೇ. ಹಿಂದುಳಿದ ಅಭ್ಯರ್ಥಿಗೆ ಶಾಸಕನಾಗುವ ಅವಕಾಶ ಸಿಕ್ಕಿಲ್ಲ. ಶಿರಸಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ, ಹಳಿಯಾಳ 1967ರಲ್ಲಿ ಬೇರ್ಪಟ್ಟಿತು. 1983ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದ ದೇಶಪಾಂಡೆಯವರು, 1989 ಮತ್ತು 1994ರಲ್ಲಿ ಜನತಾದಳದಿಂದ ಮತ್ತೆ ಸ್ಪರ್ಧಿಸಿ ಗೆದ್ದಿದ್ದರು. 1999ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಚುನಾವಣೆಗೆ ಇಳಿದ ದೇಶಪಾಂಡೆಯವರು 2004ರಲ್ಲಿ, 2013ರಲ್ಲಿ ಮತ್ತು 2018ರಲ್ಲಿ ಜಯಗಳಿಸುತ್ತಾ ಬಂದರು. 2008ರಲ್ಲಿ ಜೆಡಿಎಸ್ ಅಭ್ಯರ್ಥಿ ಸುನೀಲ್ ವಿರುದ್ಧ ಸೋಲು ಅನುಭವಿಸಿದ್ದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದ ದೇಶಪಾಂಡೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾ ಗಲೆಲ್ಲಾ ಸಚಿವರಾಗುತ್ತಾ ಬಂದಿದ್ದಾರೆ. ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಸಣ್ಣ ಕೈಗಾರಿಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ತೋಟಗಾರಿಕೆ, ಕಂದಾಯ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಸಚಿವ ಸ್ಥಾನ ಅಲಂಕರಿಸಿದ್ದಾರೆ. 10 ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ.

ಸುದೀರ್ಘ ಕಾಲದ ಅನುಭವ, ಹಳಿಯಾಳದ ಉದ್ದಗಲವನ್ನೂ ಅರಿತಿರುವ ದೇಶಪಾಂಡೆಯವರಿಗೆ ಕ್ಷೇತ್ರವನ್ನು ಗೆಲ್ಲುವ ಸೂತ್ರ ಚೆನ್ನಾಗಿಯೇ ಗೊತ್ತು ಎನ್ನುತ್ತಾರೆ ಸ್ಥಳೀಯರು. ವಿರೋಧಿಗಳು ಅವರ ವಿರುದ್ಧ ಏನೇ ಆರೋಪ ಮಾಡಲಿ, ಅಪಪ್ರಚಾರ ಮಾಡಲಿ, ಅವರ ಲೆಕ್ಕಾಚಾರ ಬುಡ ಮೇಲು ಮಾಡಬಲ್ಲರು ಎಂದೇ ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ನಂಬಿಕೆ. ನಾಲ್ಕೂ ದಶಕಗಳು ಮೀರಿ ಹಳಿಯಾಳ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿರುವುದು ಇದಕ್ಕೆ ಸಾಕ್ಷಿ ಎಂದು ಬೇರೆ ಹೇಳಬೇಕಿಲ್ಲ.

ದೇಶಪಾಂಡೆಯವರ ದೆಸೆಯೊ? ಮತದಾರರ ಬೆಂಬಲವೊ?

ದೇಶಪಾಂಡೆಯವರು ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಲೋಪವೆಸಗಿಲ್ಲ ಎಂಬ ಮಾತಿದೆ. ಕಳೆದ ವರ್ಷ ಅತ್ಯುತ್ತಮ ಶಾಸಕ ಪುರಸ್ಕಾರಕ್ಕೂ ಪಾತ್ರರಾಗಿದ್ದು ಅವರ ಕಾರ್ಯನಿಷ್ಠೆಗೆ ಒಂದು ನಿದೆರ್ಶನ ಎಂದೇ ಹೇಳಲಾಗುತ್ತದೆ. ಇಷ್ಟು ದೀರ್ಘ ಕಾಲ ತಮ್ಮ ಕ್ಷೇತ್ರದಲ್ಲಿ ವರ್ಚಸ್ಸು, ಮತದಾರರ ವಿಶ್ವಾಸ ಉಳಿಸಿಕೊಳ್ಳುವುದು ಬರಿಯ ಮಾತಿನಿಂದ ಸಾಧ್ಯವಿಲ್ಲ ಎಂಬುದು ಸಾಮಾನ್ಯ ವಿಶ್ಲೇಷಣೆ.

ಹಾಗೆಂದ ಮಾತ್ರಕ್ಕೆ ಕ್ಷೇತ್ರದಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಹಳಿಯಾಳದ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೊನೆ ಇಲ್ಲವೆಂಬಂತಹ ಸ್ಥಿತಿ ಇದೆ. ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆರೋಗ್ಯ ಸೇವೆಯ ಲಭ್ಯತೆ ಬಹು ದೊಡ್ಡ ಸಮಸ್ಯೆ. ಕ್ಷೇತ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮತದಾರರು ಬೇಡಿಕೆ ಇಟ್ಟು ಬಹಳ ದಿನಗಳಾಗಿವೆ. ಕೃಷಿಯನ್ನೇ ಪ್ರಧಾನವಾಗಿ ನಂಬಿಕೊಂಡಿರುವ ಇಲ್ಲಿನ ಜನ ನೀರಾವರಿ ಯೋಜನೆ, ಸಹಕಾರಿ ಸಕ್ಕರೆ ಕಾರ್ಖಾನೆಗೆೆ ಆಗ್ರಹಿಸುತ್ತಲೇ ಬಂದಿದ್ದಾರೆ. ದಾಂಡೇಲಿ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹದ ನಿರೀಕ್ಷೆಯೂ ಇತ್ತು. ಆದರೆ ಯಾವುದೂ ಈಡೇರಿಲ್ಲ. ಆದರೆ ಕಳೆದ ಆರೇಳು ವರ್ಷಗಳಲ್ಲಿ ರಸ್ತೆ, ಕುಡಿಯುವ ನೀರು, ಕಾಲೇಜಿನಂತಹ ಅಭಿವೃದ್ಧಿ ಕೆಲಸಗಳ ಮೂಲಕ ಮತದಾರರ ವಿಶ್ವಾಸವನ್ನು ಮತ್ತೆ ಗಳಿಸುವ ಪ್ರಯತ್ನ ಮಾಡಿದ್ದಾರೆ. ಇದು ಈ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಕೈ ಹಿಡಿಯುತ್ತದೆ ಕಾದು ನೋಡಬೇಕಷ್ಟೆ.

ದೋಸ್ತಿಯೇ ಈಗ ಎದುರಾಳಿ

ಮತದಾರರ ಆಕ್ರೋಶ, ಅಸಮಾಧಾನವನ್ನು ಅರಗಿಸಿಕೊಂಡ ದೇಶಪಾಂಡೆಯವರಿಗೆ ಈ ಬಾರಿ ದೀರ್ಘಕಾಲದ ಸ್ನೇಹಿತ ಸವಾಲಾಗಿದ್ದಾರೆ. ಅವರೇ ಶ್ರೀಕಾಂತ್ ಎಲ್. ಘೋಟ್ನೇಕರ್. ಕಳೆದ ಕೆಲವು ವರ್ಷಗಳಿಂದ ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆದರೆ ಈಗ ಅಸಮಾಧಾನ ಬಹಿರಂಗವಾಗಿದ್ದು, ಜೆಡಿಎಸ್‌ನಿಂದ ಚುನಾವಣಾ ಕಣಕ್ಕೆ ಇಳಿಯುವುದಕ್ಕೆ ಸಜ್ಜಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿದ್ದರು ಘೋಟ್ನೇಕರ್. ಸ್ಥಳೀಯ ಸಂಸ್ಥೆಗಳ ರಾಜಕೀಯ ನಿರ್ಧಾರಗಳಲ್ಲಿ ಘೋಟ್ನೇಕರ್ ಪ್ರಭಾವ ಹೆಚ್ಚಿದ್ದು ಈ ದೀರ್ಘಕಾಲದ ದೋಸ್ತಿ ಮೇಲೆ ಕರಿನೆರಳು ಬೀಳುವುದಕ್ಕೆ ಕಾರಣವಾಗಿತ್ತು. ಇದರ ಜೊತೆಗೆ ದೇಶಪಾಂಡೆಯವರು ಗುಂಪುಗಾರಿಕೆ ಮಾಡುತ್ತಾರೆ ಎಂಬ ಆರೋಪವೂ ಇದ್ದು, ಇದು ಘೋಟ್ನೇಕರ್ ಅವರಿಗೆ ಅನುಕೂಲವಾಗಬಹುದು ಎಂಬುದು ಲೆಕ್ಕಾಚಾರ. ಆದರೆ ದೇಶಪಾಂಡೆ- ಘೋಟ್ನೇಕರ್ ತಿಕ್ಕಾಟದಲ್ಲಿ ಬಿಜೆಪಿ ಗೆಲುವನ್ನು ಎದುರು ನೋಡುತ್ತಿದೆ. ಘೋಟ್ನೇಕರ್ ಮತ್ತು ಬಿಜೆಪಿಯ ನಾಯಕ, ಮಂತ್ರಿ ಶಿವರಾಮ್ ಹೆಬ್ಬಾರ್ ನಡುವಿನ ಸ್ನೇಹವೂ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಜೆಡಿಎಸ್ ಕಣ್ಮರೆ? ಬಿಜೆಪಿಗೆ ಹೆಚ್ಚಿದ ಮತ ಪಾಲು

ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಂಚಿಕೆಯಾಗಿದ್ದ ಮತಗಳನ್ನುನಿಧಾನವಾಗಿ ಬಿಜೆಪಿ ಕಬಳಿಸುತ್ತಾ ಬಂದಿದೆ. ಈಗ ಘೋಟ್ನೇಕರ್- ಸುನೀಲ್-ದೇಶಪಾಂಡೆ ತ್ರಿಕೋನ ಸ್ಪರ್ಧೆಯಲ್ಲಿ ಮತದಾರರ ಒಲವು ಹೇಗೆ ಹಂಚಿಕೆಯಾಗಲಿದೆ ಎಂಬ ಕುತೂಹಲ ತೀವ್ರ ವಾಗಿದೆ.

ಜೆಡಿಎಸ್‌ನಿಂದ ಒಮ್ಮೆ ಗೆದ್ದಿದ್ದ ಸುನೀಲ್ ಹೆಗಡೆ, ಈಗ ಬಿಜೆಪಿಯಟಿಕೆಟ್ ನಿರೀಕ್ಷೆಯಲ್ಲಿದ್ದು, ದೋಸ್ತಿಗಳ ಜಗಳದಲ್ಲಿ ತಾವು ಲಾಭ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್ ಜಿಲ್ಲೆ ಎನಿಸಿಕೊಂಡ ಉತ್ತರ ಕನ್ನಡದಲ್ಲಿ ಬಿಜೆಪಿ ತನ್ನೆಲ್ಲಾ ತಂತ್ರಗಾರಿಕೆ ಮೂಲಕ ಮೂರು ಕ್ಷೇತ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಹಳಿಯಾಳದ ಆಸುಪಾಸು ಸುಳಿಯುವುದಕ್ಕೆ ಆಗಿಲ್ಲ. ಆದರೆ ಸುನೀಲ್ ಹೆಗಡೆ ಆಗಮನದಿಂದ ಬಿಜೆಪಿಗೆ ಹಳಿಯಾಳದ ಮೇಲೆ ಆಸೆ ಹೆಚ್ಚಿದೆ. ಹಿಂದಿನ ಎರಡೂ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿದ್ದು, ಈ ಬಾರಿಯಾದರೂ ಶಾಸಕರಾಗುವ ಕನಸನ್ನು ಸುನೀಲ್ ಜೊತೆಗೆ ಬಿಜೆಪಿಯೂ ಕಾಣುತ್ತಿದೆ. ಮರಾಠಾ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ರಣತಂತ್ರಗಳ ಮೂಲಕ ದೇಶಪಾಂಡೆಯವರ ಕೈಯಿಂದ ಕ್ಷೇತ್ರವನ್ನು ಕಸಿಯಲು ಉತ್ಸುಕವಾಗಿದೆ. ಇದಕ್ಕೆ ಪೂರಕವಾಗಿ ಮರಾಠಾ ಸಮುದಾಯದ ಘೋಟ್ನೇಕರ್ ಕಣಕ್ಕಿಳಿಯುತ್ತಿರುವುದು ಅನುಕೂಲಕರವಾಗುವ ನಿರೀಕ್ಷೆಯೂ ಬಿಜೆಪಿಗಿದೆ.

ಆದರೆ ದೇಶಪಾಂಡೆಯವರು ಆಲದ ಮರದಂತೆ ಬೆಳೆದು ನಿಂತಿದ್ದಾರೆ. ಅಲ್ಲದೆ ಈ ಬಾರಿ ತನ್ನದೇ ಆಪ್ತನ ಬಂಡಾಯ ಹಾಗೂ ಪ್ರತಿಷ್ಠೆಗೆ ಕಾರಣವಾಗಿರುವ ಚುನಾವಣೆಯ ಹಿನ್ನೆಲೆಯಲ್ಲಿ ಎಪ್ಪತ್ತೈದು ವರ್ಷದ ದೇಶಪಾಂಡೆ ಹುರುಪಿನಿಂದ ಓಡಾಡುತ್ತಿದ್ದಾರೆ. ಹಾಗಾಗಿ ಹಳಿಯಾಳದ ಹಣಾಹಣಿ ರೋಚಕವಾಗುವ ನಿರೀಕ್ಷೆ ಇದೆ. ಹಳಿಯಾಳದ ಹಳಿಯ ಮೇಲೆ ಯಾರ ಗೆಲುವಿನ ಬಂಡಿ ಓಡಲಿದೆ ಎಂಬುದೇ ಕುತೂಹಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top