ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರ: ದ್ವೇಷ ರಾಜಕಾರಣ- ಅಭಿವೃದ್ಧಿ ರಾಜಕಾರಣದ ನಡುವಿನ ಪೈಪೋಟಿ
ಮಂಗಳೂರು, ಫೆ.9: ದ.ಕ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಮಂಗಳೂರು ನಗರ ಉತ್ತರ ಅಧಿಕ ಮತದಾರರಿರುವ ಕ್ಷೇತ್ರವಾ ಗಿದೆ. ಸುಮಾರು 70 ವರ್ಷಗಳ ಹಿಂದೆ ಅಂದರೆ 1952ರಲ್ಲಿ ಮದ್ರಾಸ್ ಪ್ರಾಂತದಲ್ಲಿದ್ದ ‘ಮುಲ್ಕಿ’ ವಿಧಾನಸಭೆ ಕ್ಷೇತ್ರವು ಭಾಷಾವಾರು ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ‘ಸುರತ್ಕಲ್’ ಕ್ಷೇತ್ರವಾಗಿ ಗುರುತಿಸಲ್ಪಟ್ಟಿತು. 2008ರವರೆಗೂ ಸುರತ್ಕಲ್ ಕ್ಷೇತ್ರವಾಗಿದ್ದು, ಆ ಬಳಿಕ ‘ಮಂಗಳೂರು ನಗರ ಉತ್ತರ’ ಕ್ಷೇತ್ರವಾಗಿ ಗುರುತಿಸಲ್ಪಟ್ಟಿತು. ಕ್ಷೇತ್ರದ ಹೆಸರು ಮಾತ್ರವಲ್ಲದೆ ಸ್ವರೂಪವೂ ಬದಲಾಗಿದ್ದು, ಹಿಂದಿನ ಕ್ಷೇತ್ರದ ಕೆಲವು ಗ್ರಾಮಗಳು, ವಾರ್ಡ್ಗಳು ಮಂಗಳೂರು ದಕ್ಷಿಣ, ಮುಲ್ಕಿ-ಮೂಡುಬಿದಿರೆ, ಬಂಟ್ವಾಳ ಕ್ಷೇತ್ರಗಳಿಗೂ ಹಂಚಿಕೆಯಾಗಿವೆ.
2008ರಲ್ಲಿ ಸುರತ್ಕಲ್ ಕ್ಷೇತ್ರವು ಮಂಗಳೂರು ನಗರ ಉತ್ತರ ಕ್ಷೇತ್ರವಾಗಿ ಪುನರ್ ವಿಂಗಡಣೆಯಾಯಿತು. ಈ ಹಿಂದೆ ಈ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಎಂಆರ್ಪಿಎಲ್ ಇದೀಗ ಮುಲ್ಕಿ- ಮೂಡುಬಿದಿರೆ ಕ್ಷೇತ್ರದ ಪಾಲಾಗಿದೆ. ಉಳಿದಂತೆ ಉದ್ಯಮ ರಂಗದ ಬೃಹತ್ ಕಂಪೆನಿಗಳಾದ ಎಂಸಿಎಫ್, ಎನ್ಎಂಪಿಟಿ ಈ ವ್ಯಾಪ್ತಿಯಲ್ಲೇ ಇವೆ. ಮಂಗಳೂರು ಮಹಾನಗರ ಪಾಲಿಕೆಯ 23 ವಾರ್ಡ್ಗಳು ಮತ್ತು 13 ಗ್ರಾಪಂಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿವೆೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳನ್ನು ಹೊಂದಿರುವುದು ಈ ಕ್ಷೇತ್ರದ ವೈಶಿಷ್ಟ್ಯ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರ ದ್ವೇಷ ರಾಜಕಾರಣಕ್ಕಾಗಿ ಸುದ್ದಿಯಲ್ಲಿದೆ. ಅಭಿವೃದ್ಧಿ ರಾಜಕಾರಣ ದ್ವೇಷ ರಾಜಕಾರಣವನ್ನು ಸೋಲಿಸಬಹುದೇ ಎನ್ನುವ ಪ್ರಶ್ನೆಗೆ ವಿಧಾನಸಭೆ ಚುನಾವಣೆಯ ಫಲಿತಾಂಶ ಉತ್ತರಿಸಲಿದೆ.
ಫಲಿತಾಂಶಗಳ ಹಿನ್ನೋಟ: 1952, 1957, 1959 (ಉಪ ಚುನಾವಣೆ), 1962, 1967, 1972, 1978, 1983, 1985, 1989, 1994, 1999, 2004, 2008, 2013, 2018 ಹೀಗೆ 16 ಚುನಾವಣೆಗಳನ್ನು ಈ ವಿಧಾನಸಭೆ ಕ್ಷೇತ್ರ ಕಂಡಿದೆ.
1952ರಲ್ಲಿ ಮದ್ರಾಸ್ ಪ್ರಾಂತದ ಮುಲ್ಕಿ ಕ್ಷೇತ್ರವಾಗಿದ್ದಾಗ ಕಾಂಗ್ರೆಸ್ನ ಎನ್.ಎನ್.ಸುವರ್ಣ, 1957ರ ಸುರತ್ಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ನ ಬಿ.ಆರ್.ಕರ್ಕೇರ, 1959ರ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಕೆ.ಧೂಮಪ್ಪ, 1962ರಲ್ಲಿ ಸೋಶಿಯಲಿಸ್ಟ್ ಪಕ್ಷದ ಡಾ.ಸಂಜೀವನಾಥ ಐಕಳ, 1967ರಲ್ಲಿ ಸೋಶಿಯಲಿಸ್ಟ್ ಪಕ್ಷದ ಪಿ.ವಿ.ಐತಾಳ್ ಗೆದ್ದಿದ್ದರು.
1972 ಮತ್ತು 1978ರಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. ಸತತ 2 ಬಾರಿ ಸುಬ್ಬಯ್ಯ ಶೆಟ್ಟಿ ಗೆದ್ದರು. ಅವರು ಅರಸು ಸಂಪುಟದಲ್ಲಿ ಮೂರು ಖಾತೆಗಳ ಸಚಿವರಾಗಿದ್ದರು.
1983ರಲ್ಲಿ ಕಾರ್ಮಿಕ ನಾಯಕ ಲೋಕಯ್ಯ ಶೆಟ್ಟಿ ಜನತಾ ಪಾರ್ಟಿಯಿಂದ ಗೆದ್ದಿದ್ದರು. 1985ರಲ್ಲಿ ಕಾಂಗ್ರೆಸ್ನ ಎನ್.ಎಂ.ಅಡ್ಯಂತಾಯ ಜಯ ಸಾಧಿಸಿದರು. 1989ರಲ್ಲಿ ಕಾಂಗ್ರೆಸ್ನ ವಿಜಯ ಕುಮಾರ್ ಶೆಟ್ಟಿ ಗೆದ್ದರು. 1994ರಲ್ಲಿ ಈ ಕ್ಷೇತ್ರ ಪ್ರಥಮ ಬಾರಿಗೆ ಬಿಜೆಪಿಯ ಪಾಲಾಯಿತು. ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ವಿಧಾನಸಭೆ ಪ್ರವೇಶಿಸಿ ಅಚ್ಚರಿ ಮೂಡಿಸಿದರು.
1999ರಲ್ಲಿ ಕಾಂಗ್ರೆಸ್ನ ವಿಜಯ ಕುಮಾರ್ ಶೆಟ್ಟಿ ಮತ್ತೆ ಗೆದ್ದರು. 2004ರಲ್ಲಿ ಉದ್ಯಮಿ ಕೃಷ್ಣ ಜೆ. ಪಾಲೆಮಾರ್ ಬಿಜೆಪಿಯಿಂದ ಗೆದ್ದರು. 2008ರಲ್ಲಿ ಕೃಷ್ಣ ಪಾಲೆಮಾರ್ ಮತ್ತೆ ಗೆದ್ದು ಸಚಿವರಾದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2013ರಲ್ಲಿ ಕಾಂಗ್ರೆಸ್ನ ಮೊಯ್ದಿನ್ ಬಾವ ಗೆದ್ದರು. 2018ರಲ್ಲಿ ಬಿಜೆಪಿಯ ಡಾ.ಭರತ್ ಶೆಟ್ಟಿ ಶಾಸಕರಾದರು. ಒಟ್ಟಿನಲ್ಲಿ ಈ ಕ್ಷೇತ್ರದಿಂದ ಗೆದ್ದ ಇಬ್ಬರು ಮೂರು ಅವಧಿಗೆ ಸಚಿವರಾಗಿದ್ದರು.
► 2023ರ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಮೇಯರ್ ಕವಿತಾ ಸನಿಲ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಪಕ್ಷದ ಮುಖಂಡ ಮುಹಮ್ಮದ್ ಅಲ್ತಾಫ್ ಅರ್ಜಿ ಸಲ್ಲಿಸಿದ್ದಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕಾದುನೋಡಬೇಕಾಗಿದೆೆ.
► ತನ್ನ ಅವಧಿಯಲ್ಲಿ ರಾಜ್ಯದಲ್ಲೇ ಪ್ರಥಮ ಹೈಟೆಕ್ ಬಸ್ ನಿಲ್ದಾಣವನ್ನು ಸುರತ್ಕಲ್ನಲ್ಲಿ ನಿರ್ಮಿಸಲಾಗಿದೆ. ಸ್ಮಾರ್ಟ್ ಆ್ಯಂಡ್ ಡಿಜಿಟಲ್ ಸುರತ್ಕಲ್ ಯೋಜನೆಯಡಿ ನಿರ್ಮಿಸಲಾದ ಈ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು, ಸಿಸಿಟಿವಿ ಕ್ಯಾಮರಾ, ತುರ್ತು ಸಂದರ್ಭ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೊಬೈಲ್ಗೆ ಸಂಪರ್ಕ ಕಲ್ಪಿಸುವ ಎಮರ್ಜೆನ್ಸಿ ಕರೆ ವ್ಯವಸ್ಥೆಯನ್ನು ಕಲ್ಪಿಸಿರುವುದು ವಿಶೇಷ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿಕೊಂಡಿದ್ದಾರೆ.
► ಈ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರು ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗಾಗಿ ಸ್ಪರ್ಧಿಸುವ ಮುಸ್ಲಿಮ್ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಪ್ರಮುಖ ರಾಜಕೀಯ ಪಕ್ಷಗಳಲ್ಲದೆ ಪಕ್ಷೇತರರಾಗಿ ಸ್ಪರ್ಧಿಸುವಲ್ಲೂ ಪೈಪೋಟಿ ಇದೆ. 1985ರಲ್ಲಿ ಪಕ್ಷೇತರರಾಗಿ ಟಿ. ಮುಹಮ್ಮದ್ ಇಕ್ಬಾಲ್ (334 ಮತ), 1994ರಲ್ಲಿ ಪಕ್ಷೇತರರಾಗಿ ಹೈದರಲಿ (97), 1999ರಲ್ಲಿ ಬಿಎಸ್ಪಿಯಿಂದ ಅಬೂಬಕರ್ ಕೆಂಜಾರ್ (891), ಜೆಡಿಎಸ್ನಿಂದ ಇಬ್ರಾಹೀಂ ಸುರತ್ಕಲ್(647), 2004ರಲ್ಲಿ ಕನ್ನಡನಾಡು ಪಕ್ಷದಿಂದ ಅಬೂಬಕರ್(1,267) ಮತ್ತು ಪಕ್ಷೇತರರಾಗಿ ಸುರೈಯಾ (978), 2008ರಲ್ಲಿ ಕಾಂಗ್ರೆಸ್ನಿಂದ ಮೊಯ್ದಿನ್ ಬಾವ (55,631), 2013ರಲ್ಲಿ ಕಾಂಗ್ರೆಸ್ನಿಂದ ಮೊಯ್ದಿನ್ ಬಾವ (69,897-ಶಾಸಕರಾದರು) ಎಸ್ಡಿಪಿಐಯಿಂದ ಅಬೂಬಕರ್ (3,323), ಜೆಡಿಎಸ್ನಿಂದ ಗುಲಾಂ ಅಹ್ಮದ್ (1,808), 2018ರಲ್ಲಿ ಕಾಂಗ್ರೆಸ್ನಿಂದ ಮೊಯ್ದಿನ್ ಬಾವ (72,000), ಸಿಪಿಎಂ ಪಕ್ಷದಿಂದ ಮುನೀರ್ ಕಾಟಿಪಳ್ಳ (2,472), ಎಂಇಪಿ ಪಕ್ಷದ ಪಿಎಂ ಅಹ್ಮದ್ (900) ಸ್ಪರ್ಧಿಸಿದ್ದರು.
► ಒಟ್ಟು ಮತದಾರರ ಸಂಖ್ಯೆ
ಈ ಕ್ಷೇತ್ರದಲ್ಲಿ 1,17,500 ಪುರುಷ ಮತ್ತು 1,24,675 ಮಹಿಳೆ, 11 ಮಂಗಳಮುಖಿ ಮತದಾರರು ಸೇರಿದಂತೆ ಒಟ್ಟು 2,42,186 ಮತದಾರರಿದ್ದಾರೆ.
►► ಶಾಸಕರ ವಿಶೇಷತೆಗಳು
► ಕೇಂದ್ರ ಸರಕಾರದ ಇಂಟೆಲಿಜಿಯನ್ಸ್ ಬ್ಯೂರೋದ ಅಧಿಕಾರಿಯಾಗಿದ್ದ ಬಿ.ಸುಬ್ಬಯ್ಯ ಶೆಟ್ಟಿ (ಬಾಕ್ರಬೈಲ್ ಕೊಡ್ಲಮೊಗರು ಸುಬ್ಬಯ್ಯ ಶೆಟ್ಟಿ) ಬಳಿಕ ವಕೀಲರಾಗಿ ಕಾರ್ಯನಿರ್ವಹಿಸಿ, 1969ರಲ್ಲಿ ಕಾಂಗ್ರೆಸ್ ಸೇರಿದರು. ಪಕ್ಷ ಇಬ್ಭಾಗವಾದಾಗ ಅರಸು ಪಾಳಯ ಸೇರಿದ ಅವರು, 1972, 1977 ಹೀಗೆ ಎರಡು ಬಾರಿ ಶಾಸಕರಾದರು. ಎರಡು ಅವಧಿಯಲ್ಲಿ ಮೂರು ಖಾತೆಗಳ ಸಚಿವರೂ ಆದರು. ಬಳಿಕ ಇಂದಿರಾ ಪಾಳಯ ಸೇರಿದರು. 1983ರಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ. 1989ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಸೋತರು. ಬಳಿಕ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
► ಯಕ್ಷಗಾನ ಕಲಾವಿದರಾಗಿದ್ದ ಕುಂಬ್ಳೆ ಸುಂದರ ರಾವ್ಗೆ ಸಂಘ ಪರಿವಾರದ ಜೊತೆ ಒಡನಾಟವಿತ್ತು. ಜನ್ಮ ಭೂಮಿ ಕುಂಬ್ಳೆಯಾದರೂ ಕರ್ಮಭೂಮಿ ಸುರತ್ಕಲ್ ಆಗಿತ್ತು. ಅನಿರೀಕ್ಷಿತವಾಗಿ ಬಿಜೆಪಿ ಸೇರಿದ ಅವರು 1994ರಲ್ಲಿ ಗೆದ್ದು ಶಾಸಕರೂ ಆದರು. 1999ರಲ್ಲಿ ಮತ್ತೆ ಸ್ಪರ್ಧಿಸಿದರೂ ಕಾಂಗ್ರೆಸ್ನ ವಿಜಯಕುಮಾರ್ ಶೆಟ್ಟಿಯ ಮುಂದೆ ಪರಾಭವಗೊಂಡಿದ್ದರು.
► 1959ರ ಉಪಚುನಾವಣೆಯಲ್ಲಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಕೆ.ಧೂಮಪ್ಪ ಶಾಸಕರಾದರು. 1962ರಲ್ಲಿ ಅವರು ಸೋತರೂ 1966-72ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು.
► ಮಂಗಳೂರಿನ ಲಾಲ್ಬಾಗ್-ಮಣ್ಣಗುಡ್ಡ ರಸ್ತೆಗೆ ಈ ಕ್ಷೇತ್ರದ ಶಾಸಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಕುಸ್ತಿಪಟು ಮತ್ತು ಕಾರ್ಮಿಕ ಲೋಕಯ್ಯ ಶೆಟ್ಟಿಯವರ ಹೆಸರಿಡಲಾಗಿದೆ.
► ಈ ಕ್ಷೇತ್ರದ ಶಾಸಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಬಿ.ಆರ್.ಕರ್ಕೇರ 1930ರಲ್ಲಿ ಕೆಲಸದ ನಿಮಿತ್ತ ಅಸ್ಸಾಂಗೆ ತೆರಳಿದ್ದರು. ಅಲ್ಲಿನ ಜನರ ಪ್ರೀತಿ-ವಿಶ್ವಾಸದಿಂದ ಸ್ಥಳೀಯ ನಗರಸಭೆಗೆ ಕೂಡಾ ಚುನಾಯಿತರಾಗಿದ್ದರು. ಮಂಗಳೂರಿನ ಪಾಂಡೇಶ್ವರದಿಂದ ಬೋಳಾರಕ್ಕೆ ಹೋಗುವ ರಸ್ತೆಗೆ ಬಿ.ಆರ್.ಕರ್ಕೇರರ ಹೆಸರಿಡಲಾಗಿದೆ.
► ಈ ಕ್ಷೇತ್ರದ ಶಾಸಕರಾಗಿದ್ದ ಎನ್.ಎನ್. ಸುವರ್ಣರಿಗೆ ಬ್ರಿಟಿಷ್ ಸರಕಾರವು ‘ರಾವ್ ಬಹದ್ದೂರ್’ ಬಿರುದು ನೀಡಿ ಗೌರವಿಸಿತ್ತು.
► ಈ ಕ್ಷೇತ್ರದ ಶಾಸಕರಾಗಿದ್ದ ನ್ಯಾಯವಾದಿ ಪಿ.ವಿ.ಐತಾಳ್ ರಂಗಭೂಮಿ ಕಲಾವಿದರೂ ಆಗಿದ್ದರು. ಅವರು ಪ್ರಥಮವಾಗಿ ಇಂಗ್ಲಿಷ್ನಲ್ಲಿ ಯಕ್ಷಗಾನ ಪ್ರದರ್ಶಿಸಿದ್ದರು.
►► ಈವರೆಗಿನ ಶಾಸಕರು
1952 (ಮುಲ್ಕಿ ಕ್ಷೇತ್ರ) ಎನ್.ಎನ್. ಸುವರ್ಣ (ಕಾಂಗ್ರೆಸ್)
1957 (ಸುರತ್ಕಲ್ ಕ್ಷೇತ್ರ) ಬಿ.ಆರ್.ಕರ್ಕೇರ (ಕಾಂಗ್ರೆಸ್)
1959 (ಸುರತ್ಕಲ್ ಕ್ಷೇತ್ರ) ಉಪಚುನಾವಣೆ- ಕೆ. ಧೂಮಪ್ಪ (ಕಾಂಗ್ರೆಸ್)
1962 (ಸುರತ್ಕಲ್ ಕ್ಷೇತ್ರ) ಸಂಜೀವನಾಥ ಐಕಳ (ಸೋಶಿಯಲಿಸ್ಟ್)
1967 (ಸುರತ್ಕಲ್ ಕ್ಷೇತ್ರ) ಪಿ.ವಿ.ಐತಾಳ್ (ಸೋಶಿಯಲಿಸ್ಟ್)
1972 (ಸುರತ್ಕಲ್ ಕ್ಷೇತ್ರ) ಬಿ. ಸುಬ್ಬಯ್ಯ ಶೆಟ್ಟಿ (ಕಾಂಗ್ರೆಸ್)
1978 (ಸುರತ್ಕಲ್ ಕ್ಷೇತ್ರ) ಬಿ. ಸುಬ್ಬಯ್ಯ ಶೆಟ್ಟಿ (ಕಾಂಗ್ರೆಸ್)
1983 (ಸುರತ್ಕಲ್ ಕ್ಷೇತ್ರ) ಲೋಕಯ್ಯ ಶೆಟ್ಟಿ (ಜನತಾ ಪಕ್ಷ)
1985 (ಸುರತ್ಕಲ್ ಕ್ಷೇತ್ರ) ಎನ್.ಎಂ. ಅಡ್ಯಂತಾಯ (ಕಾಂಗ್ರೆಸ್)
1989 (ಸುರತ್ಕಲ್ ಕ್ಷೇತ್ರ) ವಿಜಯ ಕುಮಾರ್ ಶೆಟ್ಟಿ (ಕಾಂಗ್ರೆಸ್)
1994 (ಸುರತ್ಕಲ್ ಕ್ಷೇತ್ರ) ಕುಂಬ್ಳೆ ಸುಂದರ ರಾವ್ (ಬಿಜೆಪಿ)
1999 (ಸುರತ್ಕಲ್ ಕ್ಷೇತ್ರ) ವಿಜಯ ಕುಮಾರ್ ಶೆಟ್ಟಿ (ಕಾಂಗ್ರೆಸ್)
2004 (ಸುರತ್ಕಲ್ ಕ್ಷೇತ್ರ) ಕೃಷ್ಣ ಜೆ. ಪಾಲೆಮಾರ್ (ಬಿಜೆಪಿ)
2008 (ಮಂಗಳೂರು ಉತ್ತರ ಕ್ಷೇತ್ರ) ಕೃಷ್ಣ ಜೆ. ಪಾಲೆಮಾರ್ (ಬಿಜೆಪಿ)
2013 (ಮಂಗಳೂರು ಉತ್ತರ ಕ್ಷೇತ್ರ) ಮೊಯ್ದಿನ್ ಬಾವ (ಕಾಂಗ್ರೆಸ್)
2018 (ಮಂಗಳೂರು ಉತ್ತರ ಕ್ಷೇತ್ರ) ಡಾ.ವೈ. ಭರತ್ ಶೆಟ್ಟಿ (ಬಿಜೆಪಿ)
►► ಬೇಡಿಕೆಗಳು...
ಸುರತ್ಕಲ್ ಜಂಕ್ಷನ್ನಲ್ಲಿ ಅರ್ಧದಲ್ಲೇ ನಿಂತಿರುವ ಮುಡಾ ಮಾರುಕಟ್ಟೆ ಕಾಮಗಾರಿ ಪೂರ್ಣಗೊಳಿಸಬೇಕು.
ಕ್ಷೇತ್ರ ವ್ಯಾಪ್ತಿಯ ಬಹುತೇಕ ರೂಟ್ಗಳಲ್ಲಿ ಸರಕಾರಿ ಬಸ್ ಆರಂಭಿಸಬೇಕು.
ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಗಳ ಕಾಂಕ್ರಿಟೀಕರಣ
ಮುಚ್ಚೂರು, ಎಡಪದವು ಪರಿಸರದಲ್ಲಿ ಐಟಿಐ, ಕೆಪಿಟಿ, ಪದವಿ ಕಾಲೇಜುಗಳನ್ನು ಸ್ಥಾಪಿಸಬೇಕು
ಸುರತ್ಕಲ್ನಲ್ಲಿ ಸರಕಾರಿ ಆಸ್ಪತ್ರೆ ನಿರ್ಮಿಸಬೇಕು ಮತ್ತು ಡಯಾಲಿಸಿಸ್ ಕೇಂದ್ರ ತೆರೆಯಬೇಕು.
ಸುರತ್ಕಲ್ನಲ್ಲಿ ಉದ್ಯಾನವನ ನಿರ್ಮಿಸಬೇಕು.
ಕೆರಗಳ ಹೂಳೆತ್ತಿ ಅಭಿವೃದ್ಧಿಪಡಿಸಬೇಕು.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
ರಾಜ್ಯದ ಎರಡನೇ ಅತೀ ದೊಡ್ಡ ಕೈಗಾರಿಕಾ ವಲಯವಾದ ಬೈಕಂಪಾಡಿಯಲ್ಲಿ ಪರಿಸರ ಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಸುರತ್ಕಲ್ನಲ್ಲಿ ಅಗ್ನಿಶಾಮಕ ಠಾಣೆ ತೆರೆಯಬೇಕು.
►► ಕ್ಷೇತ್ರದ ಹಿನ್ನೋಟ
2008: ಕೃಷ್ಣ ಜೆ. ಪಾಲೆಮಾರ್ (ಬಿಜೆಪಿ) 70,057
ಮೊಯ್ದಿನ್ ಬಾವ (ಕಾಂಗ್ರೆಸ್) 55,631
ಎಸ್.ವಿ. ಅಮೀನ್ (ಜೆಡಿಎಸ್) 2,542
ಆನಂದ ಗಟ್ಟಿ (ಪಕ್ಷೇತರ) 1,642
ಶಶಿಕಲಾ ಎಂ. (ಪಕ್ಷೇತರ) 1,322
ಸುಪ್ರೀತ್ ಕುಮಾರ್ (ಜೆಡಿಯು) 745
2013: ಮೊಯ್ದಿನ್ ಬಾವ (ಕಾಂಗ್ರೆಸ್) 69,897
ಕೃಷ್ಣ ಜೆ.ಪಾಲೆಮಾರ್ (ಬಿಜೆಪಿ) 65,524
ಅಬೂಬಕರ್ (ಎಸ್ಡಿಪಿಐ) 3,323
ರಾಮಚಂದರ್ ಬೈಕಂಪಾಡಿ (ಕೆಜೆಪಿ) 2,104
ಗುಲಾಂ ಅಹ್ಮದ್ (ಜೆಡಿಎಸ್) 1,808
ಸುಪ್ರೀತ್ ಕುಮಾರ್ ಪೂಜಾರಿ (ಎನ್ಸಿಪಿ) 1,136
ಎಚ್.ವಿನಯ ಆಚಾರ್ಯ (ಪಕ್ಷೇತರ) 1,536
ಮ್ಯಾಕ್ಸಿಂ ಪಿಂಟೊ (ಪಕ್ಷೇತರ) 878
ಮಹಾಬಲ ಶೆಟ್ಟಿ (ಪಕ್ಷೇತರ) 647
2018: ಡಾ.ವೈ.ಭರತ್ ಶೆಟ್ಟಿ (ಬಿಜೆಪಿ) 98,648
ಮೊಯ್ದಿನ್ ಬಾವ (ಕಾಂಗ್ರೆಸ್) 72,000
ಮುನೀರ್ ಕಾಟಿಪಳ್ಳ (ಸಿಪಿಎಂ) 2,472
ಸುರೇಶ್ ಬಿ. ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ)303
ಪಿ.ಎಂ.ಅಹ್ಮದ್ (ಎಂಇಪಿ) 900
ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಝ್ ದಳ) 260
ಮ್ಯಾಕ್ಸಿಂ ಪಿಂಟೊ (ಪಕ್ಷೇತರ) 355
► ಗೆಲುವಿನ ಅಂತರ: 26,648
ಒಟ್ಟು ಶೇ.74.55 ಮತದಾನ