-

'ಎಲಾರಾ' ಬಗ್ಗೆ ಎದ್ದಿರುವ ಪ್ರಶ್ನೆಗಳು ಮತ್ತು ದೇಶದ ಭದ್ರತೆಯ ವಿಚಾರ

-

ಆರ್ಥಿಕತೆ ವಿಚಾರದಲ್ಲಿ ಆಟವಾಡಿದ್ದು ಆಯಿತು. ಈಗ ದೇಶದ ರಕ್ಷಣೆಯ ವಿಚಾರದಲ್ಲೂ ನಡೆಯುತ್ತಿರುವ ಈ ಆಟದ ಬಗ್ಗೆ ಸರಕಾರಕ್ಕೇಕೆ ಚಿಂತೆಯಾಗುತ್ತಿಲ್ಲ? ದೇಶದ ರಕ್ಷಣೆಗಿಂತ ಅದಾನಿ ಸಮೂಹವನ್ನು ರಕ್ಷಿಸುವ ಚಿಂತೆಯೇ ಹೆಚ್ಚಾಗಿದೆಯೆ? ಅದಾನಿ ಭಾರತದ ರಕ್ಷಣೆ ವಿಚಾರಕ್ಕಿಂತಲೂ ಮಹತ್ವದವರೇ? ಇಂಥ ಪ್ರಶ್ನೆಗಳು ಈಗ ಎದ್ದಿವೆ.


ಅದಾನಿ ಸಮೂಹದ ಭಾರೀ ಹಗರಣವನ್ನು ಬಯಲು ಮಾಡಿದ ಹಿಂಡನ್‌ಬರ್ಗ್, ಫೋರ್ಬ್ಸ್, ರಿಪೋರ್ಟರ್ಸ್ ಕಲೆಕ್ಟಿವ್ ವರದಿಗಳ ಬಳಿಕ ಈಗ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಮತ್ತೊಂದು ಬಹಳ ದೊಡ್ಡ ಪ್ರಶ್ನೆಯನ್ನೆತ್ತಿದೆ.

ದೇಶದ ರಕ್ಷಣಾ ವಲಯದಲ್ಲಿ ಒಪ್ಪಂದವನ್ನು ಹೊಂದಿರುವ ಅದಾನಿ ಸಮೂಹದ ಕಂಪೆನಿಯಲ್ಲಿ ಹಣ ಹಾಕಿರುವ 'ಎಲಾರಾ' ಎಂಬ ವಿದೇಶಿ ಕಂಪೆನಿ ಯಾರಿಗೆ ಸೇರಿದ್ದು? ಅದು ಹಾಕುತ್ತಿರುವ ದುಡ್ಡು ಯಾರದ್ದು ಮತ್ತು ಅಂತಿಮವಾಗಿ ಅದರ ಲಾಭ ಸೇರುತ್ತಿರುವುದು ಯಾರಿಗೆ? ಇವು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಎತ್ತಿರುವ ಮಹತ್ವದ ಪ್ರಶ್ನೆಗಳು.

ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂದೀಪ್ ಸಿಂಗ್, ರಿತು ಸರೀನ್, ಅಮ್ರಿತಾ ನಾಯಕ್ ದತ್ತಾ ಅವರ ತನಿಖಾ ವರದಿಯ ಪ್ರಕಾರ, ಎಲಾರಾ ಇಂಡಿಯಾ ಆಪರ್ಚುನಿಟೀಸ್ ಫಂಡ್ (ಎಲಾರಾ ಐಒಎಫ್), ಎಲಾರಾ ಕ್ಯಾಪಿಟಲ್ ಎಂಬ ಇಂಗ್ಲೆಂಡ್ ಮೂಲದ ಕಂಪೆನಿಗೆ ಸೇರಿದೆ. ಮಾರಿಷಸ್ ನೋಂದಾಯಿತ ಈ ಕಂಪೆನಿ, ಅದಾನಿ ಸಮೂಹದ ಕಂಪೆನಿಗಳಲ್ಲಿನ ಅತಿ ದೊಡ್ಡ ಹೂಡಿಕೆದಾರ. ಮೂರು ಅದಾನಿ ಕಂಪೆನಿಗಳಲ್ಲಿನ ಅದರ ಷೇರುಗಳು ಡಿಸೆಂಬರ್ 2022ರಲ್ಲಿ 9,000 ಕೋಟಿ ರೂ.

ಇಂಡಿಯನ್ ಎಕ್ಸ್‌ಪ್ರೆಸ್ ತನಿಖೆ ಮಾಡಿರುವ ದಾಖಲೆಗಳ ಪ್ರಕಾರ, ಇದು ಬೆಂಗಳೂರು ಮೂಲದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಎಡಿಟಿಪಿಎಲ್) ಎಂಬ ಡಿಫೆನ್ಸ್ ಕಂಪೆನಿಯಲ್ಲಿ ಅದಾನಿ ಗ್ರೂಪ್ ಜೊತೆಗೇ ತಾನೂ ಪ್ರವರ್ತಕ ಘಟಕವಾಗಿದೆ. ಅಂದರೆ, ಹೂಡಿಕೆದಾರ ಕಂಪೆನಿಯೇ ಸಹಮಾಲಕ ಕಂಪೆನಿಯೂ ಆಗಿದೆ. ಇಸ್ರೋ ಮತ್ತು ಡಿಆರ್‌ಡಿಒ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುವ ಈ ಡಿಫೆನ್ಸ್ ಕಂಪೆನಿ ಕ್ಷಿಪಣಿ ಮತ್ತು ರಾಡಾರ್ ವ್ಯವಸ್ಥೆಗಳ ನವೀಕರಣ ಮತ್ತು ಡಿಜಿಟೈಸ್ ಮಾಡಲು 2020ರಲ್ಲಿ ರಕ್ಷಣಾ ಸಚಿವಾಲಯದ ಜೊತೆ 590 ಕೋಟಿ ರೂ.ಗಳ ಒಪ್ಪಂದ ಹೊಂದಿದೆ. ಇದರ ಬಹುದೊಡ್ಡ ಪ್ರವರ್ತಕ ಕಂಪೆನಿ ವಸಾಕಾ ಪ್ರಮೋಟರ್ಸ್ ಮತ್ತು ಡೆವಲಪರ್ಸ್. ಆದರೆ ವಸಾಕಾ ಮೇಲೆ ಸಂಪೂರ್ಣ ಹಿಡಿತ ಹೊಂದಿರುವುದು, ಅದರ ಅತಿದೊಡ್ಡ ಷೇರುದಾರ ಕಂಪೆನಿಯಾಗಿರುವ ಎಲಾರಾ ಐಒಎಫ್.

ಇನ್ನೊಂದೆಡೆ, ಎಡಿಟಿಪಿಎಲ್‌ನಲ್ಲಿ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಆ್ಯಂಡ್ ಟೆಕ್ನಾಲಜೀಸ್ ಲಿಮಿಟೆಡ್ ಶೇ. 26ರಷ್ಟು ಷೇರು ಹೊಂದಿದೆ. ದಾಖಲೆಗಳ ಪ್ರಕಾರ, ಎಡಿಟಿಪಿಎಲ್‌ನ ಮಾಲಕತ್ವ, ಶೇ.56.7ರಷ್ಟು ಪಾಲು ಹೊಂದಿರುವ ವಸಾಕಾ ಪ್ರಮೋಟರ್ಸ್ ಮತ್ತು ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನದ್ದಾಗಿದೆ. ಈ ವಸಾಕಾವನ್ನೇ ಬಹುತೇಕ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎಲಾರಾ ಮತ್ತು ಅದಾನಿ ಒಟ್ಟಾಗಿ ಎಡಿಟಿಪಿಎಲ್‌ನಲ್ಲಿ ಬಹುದೊಡ್ಡ ಪಾಲನ್ನು ಅಂದರೆ ಶೇ. 51.65ರಷ್ಟನ್ನು ಹೊಂದಿರುವುದನ್ನು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಬಹಿರಂಗಪಡಿಸಿದೆ.
ಅಲ್ಲಿಗೆ, ದೇಶದ ರಕ್ಷಣಾ ವ್ಯವಸ್ಥೆಯ ಜೊತೆ ಕೆಲಸ ಮಾಡುತ್ತಿರುವುದು ಒಂದು ವಿದೇಶಿ ಕಂಪೆನಿ ಎಂಬುದು ಬಯಲಾಗಿದೆ.

ಈಗ ಪ್ರಶ್ನೆಯಿರುವುದೇ ಇಲ್ಲಿ. ಅದಾನಿ ಡಿಫೆನ್ಸ್ ಕಂಪೆನಿಯ ಪಾಲುದಾರ ಕಂಪೆನಿಯಲ್ಲಿರುವುದು ಯಾರ ದುಡ್ಡು? ಆ ಕಂಪೆನಿಯನ್ನು ನಿಯಂತ್ರಿಸುತ್ತಿರುವವರು ಯಾರು? ಅದರಲ್ಲಿ ಹೂಡಿಕೆ ಮಾಡುತ್ತಿರುವವರು ಯಾರು ಎಂಬುದೇ ಗೊತ್ತಿಲ್ಲದೆ ಹೇಗೆ ಇಂಥದೊಂದು ಹೊಣೆ ವಹಿಸಲಾಗಿದೆ? ಗೊತ್ತೇ ಇರದ ವಿದೇಶಿ ಕಂಪೆನಿಯೊಂದಕ್ಕೆ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟ ಹೊಣೆ ವಹಿಸಿದ್ದು ಯಾಕೆ? ಯಾರೆಂಬುದೇ ಗೊತ್ತಿಲ್ಲದ ವಿದೇಶಿ ಕಂಪೆನಿಯೊಂದಕ್ಕೆ ಇಸ್ರೋ, ಡಿಆರ್‌ಡಿಒ ಜೊತೆಗಿನ ಕೆಲಸ ಹೇಗೆ ಸಿಕ್ಕಿದೆ? ಅಂತಿಮವಾಗಿ ಆ ಕಂಪೆನಿಯ ಮೂಲಕ ಲಾಭ ಹೋಗುತ್ತಿರುವುದು ಯಾರಿಗೆ? ಎಂಬುದು ಈಗಿನ ಪ್ರಶ್ನೆ.

ಈ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಉತ್ತರಿಸುತ್ತಿಲ್ಲ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಬಳಿಕವೂ ಯಾವ ಕ್ರಮಕ್ಕೂ ಅದು ಮುಂದಾಗುವ ಯೋಚನೆ ಮಾಡಿದಂತಿಲ್ಲ. ಎಲ್ಲ ದಾಖಲೆಗಳ ಸಹಿತ ಹಿಂಡನ್‌ಬರ್ಗ್ ವರದಿ ಬಂದಾಗ ಅದನ್ನು ದೇಶದ ಮೇಲಿನ ದಾಳಿ ಎನ್ನಲಾಯಿತು. ಈಗ ಈ ವರದಿಯನ್ನೂ ಭಾರತದ ಮೇಲಿನ ದಾಳಿ ಎನ್ನುತ್ತದೆಯೆ? ರಕ್ಷಣಾ ಸಾಮಗ್ರಿ ಉತ್ಪಾದನೆ ವಿಚಾರದಲ್ಲಿಯೂ ಮಾರಿಷಸ್ ಕಂಪೆನಿಯ ಹೆಸರು ಕಾಣಿಸಿಕೊಂಡಿದೆ. ಮತ್ತೆ ಮತ್ತೆ ಮಾರಿಷಸ್ ಹೆಸರು ಯಾಕೆ ಬರುತ್ತಿದೆ? ಮೇಕ್ ಇನ್ ಇಂಡಿಯಾ ಎನ್ನುವ ಭಾರತ, ರಕ್ಷಣಾ ಉತ್ಪನ್ನ ವಿಚಾರದಲ್ಲಿ ಬೇರೆ ದೇಶವನ್ನೇಕೆ ನೆಚ್ಚಿದೆ? ಯಾಕೆ ಇಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ? ಅದಾನಿ ಎಂಬ ಒಂದೇ ಕಾರಣಕ್ಕೆ ಸರಕಾರ ಸುಮ್ಮನಿದೆಯೆ? ಇಂಥ ಹಲವಾರು ಪ್ರಶ್ನೆಗಳನ್ನು ಸರಕಾರ ಎದುರಿಸಬೇಕಿದೆ.

ದೇಶದ ಅರ್ಥವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸುವಂತೆ ಷೇರುಗಳ ಆಟ ಆಡಿದ ಆರೋಪ ಹೊತ್ತಿರುವ ಅದಾನಿ ಸಮೂಹದ ಹಿನ್ನೆಲೆಯಲ್ಲಿರುವುದು ಗೌತಮ್ ಅದಾನಿಯಲ್ಲ, ಅವರ ಸಹೋದರ ವಿನೋದ್ ಅದಾನಿ ಎಂಬುದು ಒಂದು ದಿನ ಬಯಲಾಗಿತ್ತು. ಅದಾದ ಮೇಲೆಯೂ ವಿನೋದ್ ಅದಾನಿ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಲಿಲ್ಲ. ಗೌತಮ್ ಅದಾನಿ ವ್ಯವಹಾರಗಳ ವಿಚಾರದಲ್ಲಿ ಏಳುತ್ತಿರುವ ಮುಗಿಯದಷ್ಟು ಪ್ರಶ್ನೆಗಳ ವಿಚಾರದಲ್ಲಿಯೂ ಸರಕಾರ ಸುಮ್ಮನಿದೆ. ವಿನೋದ್ ಅದಾನಿ ಮತ್ತು ಗೌತಮ್ ಅದಾನಿ ಈ ದೇಶದ ಕಾನೂನಿಗಿಂತಲೂ ದೊಡ್ಡವರೇ ಎಂಬ ಪ್ರಶ್ನೆಯೂ ಏಳುತ್ತದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ವಿನೋದ್ ಅದಾನಿ ಹೆಸರು ಬರುವುದಿಲ್ಲವಾದರೂ, ಅಂತಿಮ ಲಾಭ ಇಲ್ಲಿ ಹೋಗುತ್ತಿರುವುದು ಯಾರಿಗೆ ಎಂಬ ಪ್ರಶ್ನೆಯನ್ನು ಕಡೆಗಣಿಸಲಿಕ್ಕಾಗುವುದಿಲ್ಲ. ಆರ್ಥಿಕತೆ ವಿಚಾರದಲ್ಲಿ ಆಟವಾಡಿದ್ದು ಆಯಿತು. ಈಗ ದೇಶದ ರಕ್ಷಣೆಯ ವಿಚಾರದಲ್ಲೂ ನಡೆಯುತ್ತಿರುವ ಈ ಆಟದ ಬಗ್ಗೆ ಸರಕಾರಕ್ಕೇಕೆ ಚಿಂತೆಯಾಗುತ್ತಿಲ್ಲ? ದೇಶದ ರಕ್ಷಣೆಗಿಂತ ಅದಾನಿ ಸಮೂಹವನ್ನು ರಕ್ಷಿಸುವ ಚಿಂತೆಯೇ ಹೆಚ್ಚಾಗಿದೆಯೆ? ಅದಾನಿ ಭಾರತದ ರಕ್ಷಣೆ ವಿಚಾರಕ್ಕಿಂತಲೂ ಮಹತ್ವದವರೇ? ಇಂಥ ಪ್ರಶ್ನೆಗಳು ಈಗ ಎದ್ದಿವೆ.

ಹಿಂಡನ್‌ಬರ್ಗ್ ವರದಿ ವಿಚಾರವಾಗಿ ತನಿಖೆಗೆ ಸಮಿತಿಯನ್ನೇನಾದರೂ ರಚಿಸಲಾಗಿದೆಯೇ ಎಂದು ಕೇಳಿದರೆ ಸಂಸತ್ತಿನಲ್ಲಿ ಸಚಿವರಿಂದ ಇಲ್ಲ ಎಂಬ ಉತ್ತರ ಬರುತ್ತದೆ. ಸಂಸತ್ತಿನಲ್ಲೂ ಉತ್ತರವಿಲ್ಲ. ವಿಪಕ್ಷಗಳ ಪ್ರಶ್ನೆಗೂ ಉತ್ತರವಿಲ್ಲ. ಪ್ರಶ್ನಿಸಿದರೆ ಓಡಿಹೋಗಲಾಗುತ್ತದೆ. ಪ್ರಶ್ನಿಸಿದವರ ಬಾಯಿಮುಚ್ಚಿಸಲು ನೋಡಲಾಗುತ್ತದೆ. ಪ್ರಶ್ನಿಸಿದವರನ್ನು ಜೈಲಿಗೆ ಕಳಿಸಲಾಗುತ್ತದೆ. ಆದರೆ ಗೌತಮ್ ಅದಾನಿಗೊಂದು ನೋಟಿಸ್ ಕೊಡುವಷ್ಟು ಧೈರ್ಯವೂ ಸರಕಾರಕ್ಕೆ ಇಲ್ಲವೆ ಎಂದು ಜನರು ಕೇಳುವಂತಾಗಿದೆ.

ರಾಹುಲ್ ಗಾಂಧಿ ಕೂಡ ಈಗ ಎತ್ತಿರುವುದು, ಸಂಶಯಾಸ್ಪದ ವಿದೇಶಿ ಕಂಪೆನಿಗೆ ದೇಶದ ರಕ್ಷಣಾ ಸಾಧನಗಳ ನಿಯಂತ್ರಣ ನೀಡುವ ಮೂಲಕ ರಾಷ್ಟ್ರೀಯ ಭದ್ರತೆಯಲ್ಲಿ ಏಕೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆಯನ್ನೇ. ವಿದೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದರಿಂದ ದೇಶಕ್ಕೆ ಅವಮಾನವಾಗಿದೆ ಎಂದು ಬೊಬ್ಬೆ ಹೊಡೆಯುವವರಿಗೆ, ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಕೆಲಸವೊಂದರ ಗುತ್ತಿಗೆಯನ್ನು ಕೊಡಲಾಗಿರುವ ವಿದೇಶಿ ಕಂಪೆನಿಯ ಮಾಲಕರ ಬಗ್ಗೆಯೇ ತಮಗೆ ಗೊತ್ತಿಲ್ಲ ಎಂಬುದು ಅಪಮಾನದ ವಿಚಾರ ಎನ್ನಿಸುತ್ತಿಲ್ಲವೆ ಎಂದು ಸಹಜವಾಗಿಯೇ ಅನುಮಾನವೇಳುತ್ತದೆ.
ಎಲಾರಾ ಕ್ಯಾಪಿಟಲ್ ನಿರ್ದೇಶಕ ಸ್ಥಾನದಲ್ಲಿದ್ದ, ಬ್ರಿಟನ್‌ನ ಮಾಜಿ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಕಿರಿಯ ಸಹೋದರ ಲಾರ್ಡ್ ಜೋ ಜಾನ್ಸನ್ ರಾಜೀನಾಮೆ ನೀಡಿದ್ದಾರೆ. ಈ ವಿಚಾರವಾದರೂ ನಮ್ಮಲ್ಲಿನ ಸರಕಾರಕ್ಕೆ ಕೊಂಚವಾದರೂ ತಟ್ಟುವುದಿಲ್ಲವೆ? ಎಲ್ಲ ಅಧರ್ಮವನ್ನು ರಕ್ಷಿಸುವುದಕ್ಕಾಗಿ ಧರ್ಮದ ದುರ್ಬಳಕೆ ಆಗುತ್ತಿದೆ.

ರಾಷ್ಟ್ರೀಯತೆಯ ಹೆಸರಿನಲ್ಲಿ ರಾಜಕೀಯ ಮಾಡುವವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಸತ್ಯವನ್ನು ಹೇಳುವ ಸಾಹಸವನ್ನೂ ಮಾಡಬೇಕಲ್ಲವೆ ಎಂದು ಜನತೆ ಅಂದುಕೊಳ್ಳುವುದು ಸಹಜ.

ಷೇರು ಮಾರಾಟ ಪ್ರಕ್ರಿಯೆಯಲ್ಲಿ (ಎಫ್‌ಪಿಒ) ಹೂಡಿಕೆದಾರರ ಜೊತೆಗಿನ ಅದಾನಿ ನಂಟಿನ ಬಗ್ಗೆ ಸೆಬಿ ತನಿಖೆ ನಡೆಸುತ್ತಿದ್ದು, ಎಲಾರಾ ಕ್ಯಾಪಿಟಲ್ ಹಾಗೂ ಮೊನಾರ್ಕ್ ನೆಟ್ವರ್ತ್ ಕ್ಯಾಪಿಟಲ್ ಕೂಡ ಸೆಬಿ ಪರಿಶೀಲನೆಯ ವ್ಯಾಪ್ತಿಯಲ್ಲಿವೆ ಎಂಬ ವರದಿಗಳಿವೆ. ಎಲಾರಾ ಕ್ಯಾಪಿಟಲ್ ಮಾಲಕ ಯಾರೆಂಬುದು ಸೆಬಿಗೆ ಗೊತ್ತಾಗಬೇಕಿದೆ. ನಿಷ್ಪಕ್ಷ ತನಿಖೆಗೆ ಸರಕಾರ ಇನ್ನಾದರೂ ಮುಂದಾಗಲೇಬೇಕಾದ ಅಗತ್ಯವಿದೆ.

ಆ ಮೂಲಕ, ದೇಶದ ಮಾನ ಹೋಗುತ್ತಿರುವುದನ್ನು ತಡೆಯಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ದೇಶದ ರಕ್ಷಣೆಯಂಥ ಸೂಕ್ಷ್ಮ ವಿಚಾರದಲ್ಲಿ ಎಚ್ಚರಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಯಾರು ಎಲಾರಾ ಮಾಲಕ ಎಂಬುದರ ಜೊತೆಗೇ, ಎಲ್ಲದರ ಮಾಲಕನೂ ಒಬ್ಬನೇನಾ ಎಂಬ ಪ್ರಶ್ನೆಗೂ ಅವಶ್ಯವಾಗಿ ಉತ್ತರ ಕಂಡುಕೊಳ್ಳಬೇಕಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top