ಅಂಧತ್ವಕ್ಕೆ ನಾಂದಿ ಹಾಡುವ ಗ್ಲಾಕೋಮಾ
-

ಕಣ್ಣುಗಳು ನಮ್ಮ ದೇಹದ ಸಂವೇದನೆಯ ಅಂಗಗಳಲ್ಲಿ ಅತ್ಯಮೂಲ್ಯವಾದ ಅಂಗವಾಗಿದೆ. ಕಣ್ಣುಗಳು ನಮಗೆ ಜೀವನದ ಬಾಹ್ಯ ಜಗತ್ತಿನ ವಿವಿಧ ವಿಚಾರಗಳ ಅನುಭವವನ್ನು ಹೊಂದಲು ನೆರವಾಗುತ್ತವೆ. ಭಾವೋದ್ವೇಗಗಳು, ಭಾವನೆಗಳು ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರದ ಅದ್ಭುತವಾದ ಬಣ್ಣಬಣ್ಣದ ಜಗತ್ತನ್ನು ಆಸ್ವಾದಿಸಲು ಕಣ್ಣುಗಳು ನಮಗೆ ಅತೀ ಅವಶ್ಯಕ. ದೃಷ್ಟಿ ಇಲ್ಲದ ನಮ್ಮ ಜೀವನ ಬಲು ಕಷ್ಟಕರ. ಈ ನಿಟ್ಟಿನಲ್ಲಿ ನಮ್ಮ ಕಣ್ಣುಗಳ ಸೂಕ್ತ ಆರೈಕೆ ಮತ್ತು ಪೋಷಣೆ ಅತೀ ಅಗತ್ಯ.
ಒಬ್ಬ ವ್ಯಕ್ತಿ ಯಾವುದೇ ವಸ್ತುವನ್ನು ಸ್ಪಷ್ಟವಾಗಿ ಕಾಣಲು ಕಾರ್ನಿಯಾ, ರೆಟಿನಾ ಮತ್ತು ದೃಷ್ಟಿನರ (Optic Nerve)ಗಳ ಕಾರ್ಯಕ್ಷಮತೆ ಅತೀ ಅಗತ್ಯ. ಯಾವುದಾದರೂ ಕಾರಣದಿಂದ ದೃಷ್ಟಿನರಕ್ಕೆ ತೊಂದರೆ ಅಥವಾ ಹಾನಿ ಆದಲ್ಲಿ ವಸ್ತು ಸರಿಯಾಗಿ ಕಾಣಿಸದು.
ಏನಿದು ಗ್ಲಾಕೋಮಾ?
ಗ್ಲಾಕೋಮಾ ಎನ್ನುವುದು ಕಣ್ಣುಗಳ ದೃಷ್ಟಿನರಕ್ಕೆ ಸಂಬಂಧಿಸಿದ ರೋಗವಾಗಿದ್ದು, ನಿರಂತರವಾಗಿ ದೃಷ್ಟಿನರದ ಮೇಲೆ ಉಂಟಾಗುವ ಹಾನಿಯಿಂದಾಗಿ ದೃಷ್ಟಿಯ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡಬಹುದು. ಸಾಮಾನ್ಯವಾಗಿ ಗ್ಲಾಕೋಮಾ ರೋಗದ ಆರಂಭದಲ್ಲಿ ಹೊರಭಾಗದ ದೃಷ್ಟಿ ಕುಂಠಿತವಾಗುತ್ತದೆ. ಕ್ರಮೇಣ, ಯಾವುದೇ ಚಿಕಿತ್ಸೆ ನೀಡದಿದ್ದಲ್ಲಿ ಮಧ್ಯಭಾಗದ ದೃಷ್ಟಿ ಕೂಡಾ ಕುಂಠಿತವಾಗಿ ಕುರುಡುತನ ಉಂಟಾಗಬಹುದು.
ಸಾಮಾನ್ಯವಾಗಿ ಹೆಚ್ಚಿನ ಜನರಲ್ಲಿ ಗ್ಲಾಕೋಮಾ ರೋಗವಿರುವವರಲ್ಲಿ ಕಣ್ಣಿನೊಳಗೆ ದ್ರವ್ಯದ ಒತ್ತಡ ಹೆಚ್ಚಾಗಿರುತ್ತದೆ. ಈ ಹೆಚ್ಚಿದ ಒತ್ತಡದಿಂದಾಗಿ ದೃಷ್ಟಿನರದ ಮೇಲೆ ಹೆಚ್ಚಿನ ಹಾನಿ ಆಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಕೆಲವೊಮ್ಮೆ ಸಹಜ ಕಣ್ಣಿನ ಒತ್ತಡದಲ್ಲಿಯೂ, ಗ್ಲಾಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲವೆಂದಿಲ್ಲ. ಸಹಜ ಕಣ್ಣಿನ ಒತ್ತಡದಲ್ಲಿ ಉಂಟಾಗುವ ಗ್ಲಾಕೋಮಾ ಸಾಮಾನ್ಯವಾಗಿ ಕಣ್ಣಿನ ದೃಷ್ಟಿನರಕ್ಕೆ ರಕ್ತ ಪೂರೈಕೆಯ ಅಭಾವದಿಂದ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಗ್ಲಾಕೋಮಾದಲ್ಲಿ ಎರಡು ಬಿನ್ನರೀತಿಯ ವಿಧಗಳಿವೆ. ತೆರೆದ ಕೋನದ ಗ್ಲಾಕೋಮಾ ಮತ್ತು ಮುಚ್ಚಿದ ಕೋನದ ಗ್ಲಾಕೋಮಾ ತೆರೆದ ಕೋನದ ಗ್ಲಾಕೋಮಾ ದೀರ್ಘಕಾಲದ ಕಾಯಿಲೆಯಾಗಿದ್ದು, ಹಲವಾರು ವರ್ಷಗಳಿಂದ, ಹಲವಾರು ಕಾರಣಗಳು ನಿರಂತರವಾಗಿ ಕಾಡಿಕೊಂಡು ನಿಧಾನವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಮುಚ್ಚಿದ ಕೋನದ ಗ್ಲಾಕೋಮಾ ಯಾವುದೇ ಮುನ್ಸೂಚನೆ ಇಲ್ಲದೆ ಕಾಣಿಸಿಕೊಳ್ಳಬಹುದು. ಒಟ್ಟಿನಲ್ಲಿ ಕಣ್ಣಿನೊಳಗಿರುವ ದ್ರವವಾದ ‘ಆಕ್ವಯಸ್ ಹ್ಯೂಮರ್’, ಕಣ್ಣಿನೊಳಗೆ ವಿವಿಧ ಚಾನೆಲ್ಗಳ ಮುಖಾಂತರ ಹರಿದು ಕಣ್ಣನ್ನು ಸದಾಕಾಲ ರಕ್ಷಿಸುತ್ತದೆ. ಈ ಚಾನೆಲ್ಗಳು, ಮುಚ್ಚಿಕೊಂಡಾಗ ಕಣ್ಣಿನೊಳಗಿನ ಒತ್ತಡ ಜಾಸ್ತಿಯಾಗಿ ಗ್ಲಾಕೋಮಾ ರೋಗಕ್ಕೆ ಕಾರಣವಾಗಬಹುದು. ಯಾವುದೇ ನಿರ್ದಿಷ್ಟ ಕಾರಣಗಳು ಇಲ್ಲದಿದ್ದರೂ ಆನುವಂಶಿಕ ಕಾರಣ ಬಹಳ ಪ್ರಮುಖವಾಗಿದ್ದು ಹೆತ್ತವರಿಂದ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ರೀತಿ ರಾಸಾಯನಿಕದಿಂದಾಗುವ ಗಾಯ ಅಥವಾ ಇನ್ನಿತರ ಗಾಯ ಇಲ್ಲವೇ ಸೋಂಕಿನಿಂದಾಗಿ ಈ ಚಾನೆಲ್ಗಳು ಮುಚ್ಚಿಕೊಂಡು ಕಣ್ಣಿನ ಒತ್ತಡ ಹೆಚ್ಚಲು ಕಾರಣವಾಗಬಹುದು.
ಹೇಗೆ ಪತ್ತೆ ಹಚ್ಚುವುದು?
ಗ್ಲಾಕೋಮಾ ರೋಗ ಜಾಗತಿಕವಾಗಿ ಬಹಳಷ್ಟು ಸದ್ದು ಮಾಡುತ್ತಿದ್ದು, ಕುರುಡುತನಕ್ಕೆ ಎರಡನೇ ಅತಿ ದೊಡ್ಡ ಕಾರಣವಾಗಿದೆ. ಕುರುಡುತನಕ್ಕೆ ಕಾರಣವಾಗುವ ಮೊದಲ ಸ್ಥಾನ ಕಣ್ಣಿನ ಪೊರೆಗೆ ಸಲ್ಲುತ್ತದೆ. ಗ್ಲಾಕೋಮಾ ರೋಗವನ್ನು ಸದ್ದಿಲ್ಲದ ‘ದೃಷ್ಟಿ ಕಳ್ಳ’ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ದೃಷ್ಟಿ ಮಾಂದ್ಯತೆ ಬರಲು ಬಹಳ ಸಮಯ ಹಿಡಿಯುತ್ತದೆ ಮತ್ತು ಹಲವಾರು ವರ್ಷಗಳ ಬಳಿಕ ನಿಧಾನವಾಗಿ ಬರುತ್ತದೆ. ಯಾವುದೇ ನೋವಿಲ್ಲದ ಕಾರಣ ಜನರಿಗರಿವಿಲ್ಲದೆ ನಿಧಾನವಾಗಿ ರೋಗದ ತೀವ್ರತೆ ಹೆಚ್ಚುತ್ತದೆ. ಒಮ್ಮೆ ದೃಷ್ಟಿ ಹೀನತೆ ಬಂದ ಬಳಿಕ ಏನೂ ಮಾಡಲಾಗದ ಕಾರಣದಿಂದ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. 80ವರ್ಷಕ್ಕಿಂತ ಕೆಳಗಿನವರಲ್ಲಿ ಪ್ರತೀ 10ರಲ್ಲಿ ಒಬ್ಬರಿಗೆ ಮತ್ತು 50 ವರ್ಷಕ್ಕಿಂತ ಕೆಳಗಿನವರಲ್ಲಿ ಪ್ರತೀ 200ಕ್ಕೆ ಒಬ್ಬರಲ್ಲಿ ಗ್ಲಾಕೋಮಾ ಬರುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದಲ್ಲಿ ಅಂಧತ್ವವನ್ನು ತಡೆಯಬಹುದು.
1. ತೆರೆದ ಕೋನದ ದೀರ್ಘಕಾಲಿಕ ಗ್ಲಾಕೋಮಾ
(Open angle Chronic Glaucoma)
ಇದು ಹೆಚ್ಚಾಗಿ ನೋವಿರುವುದಿಲ್ಲ. ನಿಧಾನವಾಗಿ ಕಣ್ಣಿನೊಳಗಿನ ಒತ್ತಡ ಜಾಸ್ತಿಯಾದಂತೆ ರೋಗ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು. ನಿಧಾನವಾಗಿ ಹೊರಭಾಗದ ದೃಷ್ಟಿ (Peripheral Vision) ಕಡಿಮೆಯಾಗುತ್ತಾ ಬರುತ್ತದೆ. ಈ ಕಾಯಿಲೆ ಇರುವವರು ನಡೆಯುವಾಗ ನೇರ ನಡೆಯುತ್ತಾರೆ. ಅಕ್ಕಪಕ್ಕ ಇರುವ ವಸ್ತುಗಳು ಗೋಚರಿಸುವುದಿಲ್ಲ. ಇದರಿಂದ ಅವರು ಢಿಕ್ಕಿ ಹೊಡೆಯುವ ಸಂಭವ ಇರುತ್ತದೆ. ಓದುವಾಗ ಮತ್ತು ಬರೆಯುವಾಗ ಒಂದು ಬದಿಯಲ್ಲಿನ ಅಕ್ಷರ ಗೋಚರಿಸುವುದಿಲ್ಲ. ಕ್ರಮೇಣ ಸುತ್ತಮುತ್ತಲಿನ ದೃಷ್ಟಿ ಮಾಯವಾಗಿ ಕೇವಲ 5ರಿಂದ 10ಶೇ. ನೇರ ದೃಷ್ಟಿ ಉಳಿಯುತ್ತದೆ. ಇದಕ್ಕೆ ಸುರಂಗ ದೃಷ್ಟಿ (Tunnel Vision) ಎನ್ನುತ್ತಾರೆ. ಇದು ಮುಂದುವರಿದರೆ ಪೂರ್ತಿ ಅಂಧತ್ವ ಬರುತ್ತದೆ. ಈ ರೀತಿಯ ಗ್ಲಾಕೋಮಾವನ್ನು ಔಷಧಿಗಳ ಮುಖಾಂತರ ಕಣ್ಣಿನೊಳಗಿನ ಒತ್ತಡ ಕಡಿಮೆ ಮಾಡಿ ಗುಣಪಡಿಸಲಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಮುಖಾಂತರ ಕಣ್ಣಿನ ಒತ್ತಡ ಕಡಿಮೆ ಮಾಡಿ ಗುಣಪಡಿಸಲಾಗುತ್ತದೆ. ಸಾಮಾನ್ಯವಾಗಿ ಕಣ್ಣಿನ ಒತ್ತಡ 21mm Hg or 2.8 ka pa ಇದರ ಒಳಗೆ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಒತ್ತಡ ಜಾಸ್ತಿಯಾಗಿ ಕಣ್ಣಿನ ದೃಷ್ಟಿ ನರಕ್ಕೆ ಹಾನಿಯಾಗಿ ನಿಧಾನವಾಗಿ ಅಂಧತ್ವ ಬರುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಕಣ್ಣಿನ ಒತ್ತಡ 20mm Hgಗಿಂತಲೂ ಕಡಿಮೆ ಇದ್ದರೂ ಗ್ಲಾಕೋಮಾ ಬರಬಹುದು. ಇದನ್ನು ಸಹಜ ಒತ್ತಡದ ಗ್ಲಾಕೋಮಾ ಎಂದು ಕರೆಯುತ್ತಾರೆ. ಈ ವಿಶೇಷ ಸಂದರ್ಭಗಳಲ್ಲಿ ಕಣ್ಣಿನ ದೃಷ್ಟಿನರಕ್ಕೆ ರಕ್ತ ಪೂರೈಸುವ ರಕ್ತನಾಳಕ್ಕೆ ಹಾನಿಯಾಗಿ ಕ್ರಮೇಣ ದೃಷ್ಟಿ ನರಕ್ಕೂ ಹಾನಿಯಾಗಿ, ಅಂಧತ್ವ ಬರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಕಣ್ಣಿನ ಒತ್ತಡ ಜಾಸ್ತಿ ಇದ್ದರೂ ಗ್ಲಾಕೋಮಾ ಬರದೇ ಇರಲೂಬಹುದು. ಇದನ್ನು ಕಣ್ಣಿನ ರಕ್ತದೊತ್ತಡ (Ocular Hypertensim) ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಕಣ್ಣಿನ ದ್ರವ್ಯದ ಒತ್ತಡ ಹತೋಟಿಯಲಿದ್ದಲ್ಲಿ ಗ್ಲಾಕೋಮಾ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ.
2. ಮುಚ್ಚಿದ ಕೋನದ ಗ್ಲಾಕೋಮಾ
(Closed Angle Glaucoma)
ಇದು ಒಂದು ವೈದ್ಯಕೀಯ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗವಾಗಿದ್ದು, ತಕ್ಷಣ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಅತಿಯಾದ ಕಣ್ಣು ನೋವು, ತಲೆಸುತ್ತು, ಕಣ್ಣಿನ ಸುತ್ತ ನೋವು, ವಾಕರಿಕೆ, ವಾಂತಿ ಇತ್ಯಾದಿ ಇರಬಹುದು. ಕಣ್ಣು ಕೆಂಪಾಗುವುದು, ಊದಿಕೊಳ್ಳುವುದು ಇರಬಹುದು. ಕಣ್ಣಿನ ಒತ್ತಡ ತೀವ್ರವಾಗಿ ಏರಿಕೆಯಾಗಿರುತ್ತದೆ. ತಕ್ಷಣಕ್ಕೆ ಶಸ್ತ್ರ ಚಿಕಿತ್ಸೆ ಮಾಡದಿದ್ದಲ್ಲಿ ದೃಷ್ಟಿನರಕ್ಕೆ ಹಾನಿಯಾಗಿ, ಶಾಶ್ವತ ಅಂಧತ್ವ ಬರುವ ಸಾಧ್ಯತೆ ಇರುತ್ತದೆ.
ಚಿಕಿತ್ಸೆ ಹೇಗೆ?
ನಿಮ್ಮ ದೇಹ ಸ್ಥಿತಿ, ರೋಗದ ಲಕ್ಷಣ ಮತ್ತು ತೀವ್ರತೆಯನ್ನು ಕೂಲಂಕುಷವಾಗಿ ಅಭ್ಯಸಿಸಿ ನಿಮಗೆ ನೀಡಬೇಕಾದ ಔಷಧಿ ಮತ್ತು ಶಸ್ತ್ರ ಚಿಕಿತ್ಸೆಯ ನಿರ್ಧಾರವನ್ನು ವೈದ್ಯರೇ ತೆಗೆದುಕೊಳ್ಳುತ್ತಾರೆ. ಆರಂಭಿಕ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಿದ್ದಲ್ಲಿ ಗ್ಲಾಕೋಮಾ ರೋಗವನ್ನು ಖಂಡಿತವಾಗಿಯೂ ಗುಣಪಡಿಸಬಹುದು. ಆದರೆ ಒಮ್ಮೆ ಗ್ಲಾಕೋಮಾ ರೋಗದಿಂದ ದೃಷ್ಟಿನರ ಹಾನಿಯಾಗಿ, ಅಂಧತ್ವ ಬಂದ ಬಳಿಕ ಯಾವುದೇ ಚಿಕಿತ್ಸೆಗೂ ಸ್ಪಂದಿಸಲ್ಲಿಕ್ಕಿಲ್ಲ. ಒಟ್ಟಿನಲ್ಲಿ ರೋಗದ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ತೆಗೆದುಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.
► ಯಾವಾಗ ಕಣ್ಣಿನ ವೈದ್ಯರನ್ನು ಕಾಣಬೇಕು?
1. ಹತ್ತಿರದ ಮತ್ತು ದೂರದ ವಸ್ತುಗಳನ್ನು ನೋಡಲು ಕಷ್ಟವಾಗುವುದು.
2. ಕತ್ತಲೆ ಕೋಣೆಗೆ ಹೋದಾಗ ದೃಷ್ಟಿ ಹೊಂದಾಣಿಕೆ ಕಷ್ಟವಾಗುವುದು.
3. ಕಣ್ಣಿನ ಸುತ್ತ ಪದೇ ಪದೇ ನೋವು.
4. ಎಲ್ಲವೂ ಎರಡೆರಡಾಗಿ ಗೋಚರಿಸುವುದು.
5. ಪದೇ ಪದೇ ಕಣ್ಣು ಒದ್ದೆಯಾಗಿ, ಹೆಚ್ಚು ಕಣ್ಣೀರು ಕಾರಣವಿಲ್ಲದೆ ಒಸರುವುದು.
6. ವಸ್ತುಗಳಲ್ಲಿ ಮಂದತ್ವ ಮತ್ತು ಭೂತಾಕಾರದ ಪ್ರತಿಬಿಂಬ ಗೋಚರಿಸುವುದು.
7. ಕಣ್ಣು ತುರಿಕೆ ಅಥವಾ ಕಣ್ಣು ಉರಿಯುವುದು, ಶುಷ್ಕ ಕಣ್ಣು.
8. ತನ್ನಿಂತಾನೇ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸುವುದು.
9. ವಸ್ತುವಿನ ಅಥವಾ ಬೆಳಕಿನ ಸುತ್ತ ಗೋಲಾಕಾರ ಅಥವಾ ಕಾಮನಬಿಲ್ಲಿನ ರೀತಿ ಬಣ್ಣಗಳು ಕಾಣಿಸಿಕೊಳ್ಳುವುದು.
10. ಎಲ್ಲವೂ ಸರಿಯಾಗಿದ್ದು, ಕಾರಣವಿಲ್ಲದೆ ಒಂದು ಕಣ್ಣುಗಳಲ್ಲಿ ಏನೂ ಕಾಣಿಸದಿರುವುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.