ಜನಸೇವಾ ಟ್ರಸ್ಟ್ಗೆ ಮಂಜೂರಾಗಿದ್ದ 35.33 ಎಕರೆ ಜಮೀನಿಗೆ ಶೇ.5ರಷ್ಟು ದರ ಮರು ನಿಗದಿಗೊಳಿಸಿ ಸರಕಾರದ ಆದೇಶ
-

ಬೆಂಗಳೂರು, ಮಾ.29: ಕರ್ನಾಟಕ ವಿಧಾನಸಭೆಗೆ ಚುನಾವಣೆ ಅಧಿಸೂಚನೆ ಮತ್ತು ನೀತಿ ಸಂಹಿತೆ ಜಾರಿಯಾದ ಮರುಗಳಿಗೆಯಲ್ಲಿಯೇ ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್ಗೆ ಮಂಜೂರಾಗಿದ್ದ 35.33 ಎಕರೆ ವಿಸ್ತೀರ್ಣದ ಜಮೀನಿಗೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ದರವನ್ನು ಮರು ನಿಗದಿಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಬಿಜೆಪಿ ಸರಕಾರವು ಬೊಕ್ಕಸಕ್ಕೆ ಅಂದಾಜು 139.21 ಕೋಟಿ ರೂ. ನಷ್ಟವನ್ನು ಹೊರಿಸಿದೆ.
ಜನಸೇವಾ ಟ್ರಸ್ಟ್ಗೆ 2022ರ ಸೆ.13 ಮತ್ತು 2023ರ ಮಾರ್ಚ್ 16ರಂದು ಕ್ರಮವಾಗಿ 25 ಎಕರೆ ಗೋಮಾಳವನ್ನು ಪ್ರಚಲಿತ ಮಾರ್ಗಸೂಚಿ ಮೌಲ್ಯದ ಶೇ.25ರಷ್ಟು ಮತ್ತು 10.33 ಎಕರೆ ಗೋಮಾಳವನ್ನು ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ದರವನ್ನು ಭರಿಸಲು ಕಷ್ಟಸಾಧ್ಯ ಎಂದು ಜನಸೇವಾ ಟ್ರಸ್ಟ್ ಕೋರಿಕೆ ಸಲ್ಲಿಸಿದ್ದ ಕೆಲವೇ ಕೆಲವು ದಿನಗಳಲ್ಲಿ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿ ಕಡಿಮೆ ದರವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ''the-file.in'' ಗೆ ಲಭ್ಯವಾಗಿದೆ.
ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೇ ನಂಬರ್ 89ರಲ್ಲಿದ್ದ ಒಟ್ಟು 40.20 ಎಕರೆ ಪೈಕಿ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು 2022ರ ಸೆ.13ರಂದು ಇದಾಗಿ 6 ತಿಂಗಳ ಒಳಗೇ ಇದೇ ಸರ್ವೇ ನಂಬರ್ನಲ್ಲಿ ಹೆಚ್ಚುವರಿಯಾಗಿ 10.33 ಎಕರೆ ಜಮೀನು ಮಂಜೂರು ಮಾಡಿತ್ತು. ಒಟ್ಟಾರೆ ಈ ಟ್ರಸ್ಟ್ಗೆ 35.33 ಎಕರೆ ಗೋಮಾಳ ಮಂಜೂರಾಗಿತ್ತು.
ತಾವರೆಕೆರೆ ಹೋಬಳಿ ಕುರುಬರಹಳ್ಳಿಯಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರದಂತೆ ಕೃಷಿ ಜಮೀನು ಎಕರೆಗೆ 1.20 ಕೋಟಿ ರೂ. ಇದೆ. ಇದರ ಪ್ರಕಾರ ಜನಸೇವಾ ಟ್ರಸ್ಟ್ಗೆ 35.33 ಎಕರೆಗೆ 42.39 ಕೋಟಿ ರೂ. ಆಗಲಿದೆ. ಅಲ್ಲದೇ ಇದೇ ಕುರುಬರಹಳ್ಳಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಎಕರೆಗೆ ಗರಿಷ್ಠ 4 ಕೋಟಿ ರೂ. ಇದೆ. ಇದರ ಪ್ರಕಾರ 35.33 ಎಕರೆಗೆ 141.32 ಕೋಟಿ ರೂ. ಆಗಲಿದೆ.
ಆದರೆ ಸರಕಾರವು ಜನಸೇವಾ ಟ್ರಸ್ಟ್ನ ಕೋರಿಕೆಯಂತೆ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿರುವ ದರದಂತೆ ಲೆಕ್ಕ ಹಾಕಿದರೆ ತಲಾ ಎಕರೆಗೆ ಕೇವಲ 6 ಲಕ್ಷ ರೂ.ಆಗಲಿದೆ. ಇದರ ಪ್ರಕಾರ 35.33 ಎಕರೆಗೆ ಕೇವಲ 2.11 ಕೋಟಿ ರೂ. ಆಗಲಿದೆ. ಸರಕಾರಿ ಮಾರ್ಗಸೂಚಿ ಮೌಲ್ಯದಂತೆಯೇ ಲೆಕ್ಕ ಹಾಕಿದರೆ ಸರಕಾರಕ್ಕೆ 40.28 ಕೋಟಿ ರೂ. ನಷ್ಟವಾದಂತಾಗುತ್ತದೆ. ಇನ್ನು ಮುಕ್ತ ಮಾರುಕಟ್ಟೆ ದರದ ಪ್ರಕಾರ 35.33 ಎಕರೆಗೆ 141.32 ಕೋಟಿ ರೂ. ಆಗಲಿದೆ. ಶೇ.5ರಂತೆ ದರವನ್ನು ಮರು ನಿಗದಿ ಮಾಡಿರುವ ಪ್ರಕಾರ ಸರಕಾರಕ್ಕೆ ಅಂದಾಜು 139.21 ಕೋಟಿ ರೂ. ನಷ್ಟವಾದಂತಾಗುತ್ತದೆ.
ಜನಸೇವಾ ಟ್ರಸ್ಟ್ ಕಳೆದ 50 ವರ್ಷಗಳಿಂದ ಶೈಕ್ಷಣಿಕ ಸಂಸ್ಥೆಗಳನ್ನು ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ ನಡೆಸುತ್ತಿದ್ದು ಈಗಾಗಲೇ ಸರಕಾರದ ಆದೇಶಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಕುರುಬರಹಳ್ಳಿ ಗ್ರಾಮದ ಸರ್ವೇ ನಂಬರ್ 89ರಲ್ಲಿ 35-33 ಎಕರೆ/ಗುಂಟೆ ಜಮೀನು ಮಂಜೂರು ಮಾಡಲು ವಿಧಿಸಿರುವ ದರದಂತೆ ಪಾವತಿಸಲು ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ ದರವನ್ನು ಪರಿಷ್ಕರಿಸಿ ಪ್ರಚಲಿತ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟನ್ನು ಮರುನಿಗದಿಪಡಿಸಬೇಕು ಎಂದು ಜನಸೇವಾ ಟ್ರಸ್ಟ್ನ ಗೌರವ ಕಾರ್ಯದರ್ಶಿ 2023ರ ಮಾರ್ಚ್ 16ರಂದು ಕೋರಿಕೆ ಸಲ್ಲಿಸಿದ್ದರು.
ಈ ಕೋರಿಕೆ ಕುರಿತು 2023ರ ಮಾರ್ಚ್ 24ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಸಚಿವ ಸಂಪುಟದ ನಿರ್ಣಯದ ಪ್ರಕಾರ ಜನಸೇವಾ ಟ್ರಸ್ಟ್ಗೆ ಈಗಾಗಲೇ ಮಂಜೂರಾಗಿರುವ 35.33 ಎಕರೆ ಜಮೀನಿಗೆ ವಿಧಿಸಿರುವ ಕೃಷಿಯೇತರ ಜಮೀನಿನ ಪ್ರಚಲಿತ ಮಾರುಕಟ್ಟೆ ಮೌಲ್ಯ ವಿಧಿಸಿರುವುದನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ನಿಯಮ 22(ಎ)1)(2) ಸಡಿಲಿಸಿ ಜಮೀನುಗಳ ಪ್ರಚಲಿತ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಎಂದು ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಟ್ರಸ್ಟ್ನ ಅ.ಸಾ.ನಿರ್ಮಲ್ ಕುಮಾರ್ ಎಂಬವರು 2022ರ ಸೆ.28ರಂದು ಮತ್ತೆ 15 ಎಕರೆ ಜಮೀನು ಮಂಜೂರಾತಿಗಾಗಿ ಸರಕಾರಕ್ಕೆ ಸಲ್ಲಿಸಿದ್ದ ಕೋರಿಕೆ ಆಧರಿಸಿ ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿಯು 2023ರ ಜನವರಿ 25ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.
‘ಜನಸೇವಾ ಟ್ರಸ್ಟ್ಗೆ 15 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ನಿಗದಿಪಡಿಸಿ ಮಂಜೂರು ಮಾಡಬೇಕು ಎಂದು ಕೋರಿರುತ್ತಾರೆ. ಈ ಪತ್ರದಲ್ಲಿ ತಿಳಿಸಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು,’ ಎಂದು ಸರಕಾರದ ಕಾರ್ಯದರ್ಶಿಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದರು.
ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೇ ನಂಬರ್ 89ರಲ್ಲಿದ್ದ ಒಟ್ಟು 40.20 ಎಕರೆ ಪೈಕಿ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನಲ್ಲಿ ಸುಮಾರು 40 ಕ್ಕೂ ಹೆಚ್ಚಿನ ಭೂ ಭಾಗದಲ್ಲಿ ಕಲ್ಲು ಬಂಡೆಗಳಿವೆ. ಎತ್ತರ ಮತ್ತು ತಗ್ಗು ಪ್ರದೇಶದಿಂದ ಕೂಡಿದೆ. ಉದ್ದೇಶಿತ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಣವನ್ನು ಭರಿಸಬೇಕಾಗುತ್ತದೆ. ಮತ್ತು ಉದ್ದೇಶಿತ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಈಗ ಮಂಜೂರಾದ 25 ಎಕರೆ ಭೂಮಿಯ ಜತೆಗೆ ಇದೇ ಸರ್ವೇ ನಂಬರ್ನಲ್ಲಿರುವ ಇನ್ನೂ 15 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದು ಜನಸೇವಾ ಟ್ರಸ್ಟ್ನ ಅ.ಸ .ನಿರ್ಮಲಕುಮಾರ್ ಅವರು ಸರಕಾರಕ್ಕೆ ಸಲ್ಲಿಸಿರುವ ಕೋರಿಕೆಯಲ್ಲಿ ವಿವರಿಸಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.