ಬಾಗಲಕೋಟೆ ಕಾರು ಬ್ಲಾಸ್ಟ್ ಪ್ರಕರಣಕ್ಕೆ ತಿರುವು : ಹಣಕ್ಕಾಗಿ ವ್ಯಕ್ತಿಯ ಕೊಲೆಗೆ ಸಂಚು

ಬಾಗಲಕೋಟೆ: ಇತ್ತೀಚೆಗೆ ನಡೆದ ಕಾರು ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಹಣಕಾಸಿನ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಕಾರಿನಲ್ಲಿ ಸ್ಫೋಟಕ ಇರಿಸಿ ಸ್ಫೋಟಿಸಲಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜುಲೈ 25ರಂದು ರಾತ್ರಿ 10.45ರ ಸುಮಾರಿಗೆ ಕಾರು ಬ್ಲಾಸ್ಟ್ ಆಗಿತ್ತು. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಎಫ್ಎಸ್ಎಲ್ ತಂಡದಿಂದ ತನಿಖೆ ನಡೆಸಲಾಗಿತ್ತು. ಎಫ್ಎಸ್ಎಲ್ನ ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಬಳಸಿ ಬ್ಲಾಸ್ಟ್ ಮಾಡಿರುವುದು ದೃಢಪಟ್ಟಿತ್ತು. ಆರೋಪಿಗಳ ಸುಳಿವು ಸಿಗುವವರೆಗೆ ತನಿಖೆಯ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ಬಾರ್ ಮಾಲೀಕ ಹನುಮಂತ ಅಥಣಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಪ್ರಕರಣದ ಎ1 ಆರೋಪಿ ಶಿವಾನಂದ ಅವರ ದೊಡ್ಡಪ್ಪ ಹನುಮಂತ ಅವರಿಂದ 40 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಶಿವಾನಂದ ಅವರ ಐದು ಎಕರೆ ಜಮೀನು ಹನುಮಂತ ಅವರ ಹೆಸರಿಗೆ ಮಾಡಿಕೊಡಲಾಗಿತ್ತು. ಬಳಿಕ ಅದೇ ಜಮೀನನ್ನು ಶಿವಾನಂದ ಲೀಸ್ಗೆ ಪಡೆದು ಕಂತುಗಳ ಮೂಲಕ ಸಾಲ ತೀರಿಸುವುದಾಗಿ ಹೇಳಿದ್ದರು. ಸ್ವಲ್ಪ ಹಣ ಪಾವತಿಸಿದ ಬಳಿಕ ಬಡ್ಡಿ ಸೇರಿ ಸಾಲದ ಮೊತ್ತ 67 ಲಕ್ಷ ರೂ. ಗೆ ಏರಿಕೆಯಾಗಿತ್ತು ಎನ್ನಲಾಗಿದೆ.
ಜಮೀನು ಮರಳಿ ಪಡೆಯಲು ಹನುಮಂತ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದ ಆರೋಪಿಗಳು, ಶಿವಾನಂದಗೆ ಬಾವಿಗಳಲ್ಲಿ ಸ್ಫೋಟ ನಡೆಸಲು ಸ್ಫೋಟಕ ತಯಾರಿಸುವ ಬಗ್ಗೆ ತಿಳಿದಿದ್ದರಿಂದ ಜಿಲೆಟಿನ್ ಕಡ್ಡಿಗಳನ್ನು ಬಳಸಲು ನಿರ್ಧರಿಸಿದ್ದರು. ಎರಡು ಅಂಗಡಿಗಳಿಂದ ಸುಮಾರು 800 ಜಿಲೆಟಿನ್ ಕಡ್ಡಿಗಳು, ಕೆಪಾಸಿಟರ್ ಹಾಗೂ ಡಿಟೋನೇಟರ್ಗಳನ್ನು ಖರೀದಿಸಿ, ಜಮೀನಿನಲ್ಲಿ ಸ್ಫೋಟಕ ತಯಾರಿಸುವ ಪ್ರಯೋಗ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅದರಲ್ಲಿ 25ರಿಂದ 30 ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಕ ಸಿದ್ಧಪಡಿಸಿ ಕಾರಿನ ಕೆಳಭಾಗದಲ್ಲಿ ಇರಿಸಲಾಗಿತ್ತು. ಹನುಮಂತ ಕಾರು ಹತ್ತುವ ಸಂದರ್ಭದಲ್ಲಿ ಸುಮಾರು 100 ಮೀಟರ್ ದೂರದಲ್ಲಿ ಕುಳಿತು ಸ್ಫೋಟಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಬಳಿಕ ಸ್ಥಳದಲ್ಲಿದ್ದ ವೈರ್ ಸೇರಿದಂತೆ ಸ್ಫೋಟಕದ ಅವಶೇಷಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.
ಸಿಸಿಟಿವಿ ಹಾಗೂ ಮೊಬೈಲ್ಗಳ ಮೂಲಕ ಯಾವುದೇ ಸುಳಿವು ಸಿಗದಂತೆ ಆರೋಪಿಗಳು ಸಂಚು ರೂಪಿಸಿದ್ದರು. ಆದರೆ ಮರುದಿನ ಟಿವಿ ಮೂಲಕ ಹನುಮಂತ ಅವರಿಗೆ ಏನೂ ಆಗಿಲ್ಲ ಎಂಬುದು ತಿಳಿದ ಬಳಿಕ, ಆ.6ರಂದು ವಾಟ್ಸ್ಆ್ಯಪ್ ಮೂಲಕ ಮತ್ತೊಮ್ಮೆ ಬೆದರಿಕೆ ಸಂದೇಶ ಕಳುಹಿಸಿದ್ದರು. ಈ ನಂಬರ್ನ ಮೂಲ ಪತ್ತೆ ಹಚ್ಚಲು ನಡೆಸಿದ ತನಿಖೆಯಲ್ಲಿ ಡೈರಿ ಫಾರ್ಮ್ನಿಂದ ಕದ್ದಿದ್ದ ಸಿಸಿಟಿವಿ ಕ್ಯಾಮೆರಾದ ಸಿಮ್ ಬಳಸಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಅಲ್ಲದೆ, ಅಥಣಿಯಲ್ಲಿ ಸೆಕೆಂಡ್ಹ್ಯಾಂಡ್ ಮೊಬೈಲ್ ಖರೀದಿಸಿ ಸಂದೇಶ ಕಳುಹಿಸಿದ್ದನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.
ತನಿಖೆ ಮುಂದುವರಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಜಿಲೆಟಿನ್ ಕಡ್ಡಿಗಳನ್ನು ಪೂರೈಸಿದ ಅಂಗಡಿ ಮಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.






