Bagalkote | ಬೆಂಕಿ ಆಕಸ್ಮಿಕ: ಪ್ರವಾಹ ಸಂತ್ರಸ್ತರ 20ಕ್ಕೂ ಅಧಿಕ ಶೆಡ್ ಗಳು ಬೆಂಕಿಗಾಹುತಿ

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರ ಶೆಡ್ ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಾಕಷ್ಟು ಹಾನಿ ಉಂಟಾಗಿದೆ.
ಇಲ್ಲಿನ ನಿವಾಸಿಗಳು ರವಿವಾರ ರಾತ್ರಿ ಪುರಾಣ ಕೇಳಲು ಹೋದ ಸಮಯದಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸುಮಾರು 20ಕ್ಕೂ ಅಧಿಕ ಶೆಡ್ ಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಶೆಡ್ ನಲ್ಲಿದ್ದ, ಆಹಾರ ಧಾನ್ಯಗಳು ಹಾಗೂ ಇತರ ಸಾಮಗ್ರಿಗಳು ನಷ್ಟ ಉಂಟಾಗಿದೆ.
ನಾರಾಯಣಪುರ ಜಲಾಶಯದ ಪ್ರವಾಹದಿಂದ ಕಳೆದ 17 ವರ್ಷಗಳಿಂದಲೇ ಸಂತ್ರಸ್ತರು ಎಂದು ಸ್ಥಳಾಂತರ ಮಾಡಲಾಗಿತ್ತು. ಅವರು ನೆಲೆಸಿದ್ದ ಶೆಡ್ ಗಳಿಗೆ ಆಕಸ್ಮಿಕ ಬಿದ್ದ ಬೆಂಕಿಯಿಂದಾಗಿ ನಷ್ಟ ಉಂಟಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ 29 ಶಡ್ ಗಳಿಗೆ ಬೆಂಕಿ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದು ತಿಳಿದು ಬರಬೇಕಾಗಿದೆ. ಹೀಗಾಗಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ಸಂತ್ರಸ್ತರ ಶೆಡ್ ಗಳಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಅವರಿಗೆ ಕಾಳಜಿ ಕೇಂದ್ರಗಳನ್ನ ತೆರೆಯಲು ಕೂಡ ಸೂಚಿಸಲಾಗಿದೆ. ಆಗಿರುವ ಹಾನಿಯ ಲೆಕ್ಕಾಚಾರ ಮಾಡಲು ಕೂಡ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.






