ಇಲಕಲ್ಲ | ಸೀರತ್ ಅಭಿಯಾನ: ಎರಡು ಕೃತಿಗಳ ಬಿಡುಗಡೆ

ಬಾಗಲಕೋಟೆ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸೀರತ್ ಅಭಿಯಾನ’ದ ಪ್ರಯುಕ್ತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಅವರು ರಚಿಸಿದ ‘ಮಾನವ ಮನಸ್ಸಿನ ಕೃಷಿಕ - ಮನದೊಡೆಯ ಪ್ರವಾದಿ ಮುಹಮ್ಮದ್(ಸ)’ ಹಾಗೂ ‘ವಾರ್ತಾ ಭಾರತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಈ ಕೃತಿಗಳನ್ನು ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ಜನರಿಗೆ ತಲುಪಿಸಲಾಗುವುದು ಎಂದು ಇಲಕಲ್ಲ ಜಮಾಅತೆ ಇಸ್ಲಾಮೀ ಹಿಂದ್ ಪದಾಧಿಕಾರಿ ಹುಸೇನ ಬಾದಶಾ ಸೂಳಿಭಾವಿ ತಿಳಿಸಿದರು.
ಇಲಕಲ್ಲ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 26 ರಿಂದ ಸೆ. 06 ರವರೆಗೆ ‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ಈ ಬೃಹತ್ ಸೀರತ್ ಅಭಿಯಾನ ನಡೆಯಲಿದೆ. ಪ್ರವಾದಿ ಮುಹಮ್ಮದ್(ಸ) ಅವರು ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಘನತೆ ಹಾಗೂ ಏಕತೆಯ ಮೂಲತತ್ತ್ವಗಳ ಮೇಲೆ ಸ್ಥಾಪಿತವಾಗಿದೆ. ವ್ಯಕ್ತಿಗಳ ನೈತಿಕತೆ ಮತ್ತು ಚಾರಿತ್ರ್ಯವನ್ನು ಶುದ್ಧೀಕರಿಸುವ ಮೂಲಕ ಸುಭಿಕ್ಷೆ ಹಾಗೂ ನಿರ್ಭಯತ್ವದ ಸಮಾಜ ನಿರ್ಮಾಣ ಮಾಡುವುದು ಅವರ ಮುಖ್ಯ ಗುರಿಯಾಗಿತ್ತು. ಈ ಮಾನವೀಯ ಸಂದೇಶವನ್ನು ಕನ್ನಡ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವುದು ಈ ಅಭಿಯಾನದ ಪ್ರಮುಖ ಆಶಯವಾಗಿದೆ ಎಂದರು.
‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ವಿಷಯದಡಿ ವಿಚಾರಗೋಷ್ಠಿಗಳು, ಸಾರ್ವಜನಿಕ ಸಮಾವೇಶಗಳು, ಸಂವಾದ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಎಕ್ಸಿಬಿಶನ್ ಹಾಗೂ ಸೌಹಾರ್ದ ಸಂದೇಶ ರ್ಯಾಲಿಗಳು.
ಸ್ಥಾನೀಯ ಕಾರ್ಯಕ್ರಮಗಳು: ಪುಸ್ತಕ ವಿತರಣೆ, ನಿಬಂಧ ಸ್ಪರ್ಧೆ, ಮೋಹಲ್ಲಾ ಸೀರತ್ ಕಾರ್ಯಕ್ರಮಗಳು, ಗಣ್ಯರ ಸಭೆಗಳು ಹಾಗೂ ಶಿವನಗುತ್ತಿ ಮತ್ತು ಕೃಷ್ಣಾಪೂರದಲ್ಲಿ ವಿಶೇಷ ಸೀರತ್ ಸಮಾವೇಶಗಳು.
ಸಾಮಾಜಿಕ ಹಾಗೂ ಮಾನವೀಯ ಸೇವೆ: ಮಹಿಳಾ ವಿಭಾಗದ ವಿಶೇಷ ನೇತೃತ್ವದಲ್ಲಿ ಆಸ್ಪತ್ರೆಗಳು, ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಿಗೆ ಭೇಟಿ ನೀಡಿ ಸಾಂತ್ವನ ಹಾಗೂ ನೆರವು ನೀಡುವ ಸಮಾಜಸೇವಾ ಚಟುವಟಿಕೆಗಳು ನಡೆಯುತ್ತವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಮ್ಮದ್ ಹುಸೇನ ಬಾಗವಾನ, ಮಹಮ್ಮದ್ ಅಲಿ ಯತ್ನಟ್ಟಿ, ಡಾ. ನೂರ ಮಹಮ್ಮದ ಬಿಳೇಕುದರಿ, ಅಬ್ದುಲ್ ಗಫ್ಫಾರ ತಹಸೀಲ್ದಾರ, ಮಹಮ್ಮದ ತಾಜುದ್ದೀನ, ಮುಷ್ತಾಕ್ ಅಲಿ ಜಾಗಿರದಾರ, ಮುಹಮ್ಮದ್ ಯಾಸೀನ್ ಗಬ್ಬೂರು ಉಪಸ್ಥಿತರಿದ್ದರು






