ʼಆಕಾಶ ನೋಡಿ ಉಗಿಯುವ ಪ್ರಯತ್ನ ಬಿಡಿ, ನಿಮ್ಮ ಮುಖವೇ ಕೊಳಕಾದೀತುʼ : ಆರ್.ಅಶೋಕ್ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಪ್ರಿಯಾಂಕ್ ಖರ್ಗೆ/ಆರ್.ಅಶೋಕ್
ಬೆಂಗಳೂರು : ಆರ್.ಅಶೋಕ್ ಅವರೆ ನಿಮಗಾಗಿರುವ ನೋವು, ಹತಾಶೆ, ಸಿಟ್ಟು ಎಲ್ಲವೂ ನಮಗೆ ಅರ್ಥವಾಗುತ್ತದೆ, ನಿಮ್ಮ ಪಕ್ಷದವರ ಮೇಲೆ ತೋರಿಸಲಾಗದ ಹತಾಶೆಯನ್ನು ನಮ್ಮ ಮುಂದೆ ತೋರಿಸುತ್ತಿರುವಿರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ನಿಮ್ಮ ಸಾಮಾಜಿಕ ಜಾಲತಾಣದ ನಿರ್ವಹಣೆಯನ್ನು ಯಾವುದೋ ವಾಟ್ಸಾಪ್ ಯೂನಿವರ್ಸಿಟಿಯನ್ನು ಅವಲಂಬಿಸಿ ಬದುಕುವ ಪರಾವಲಂಬಿ 2 ರೂ.ಕ್ರಿಮಿಗಳ ಕೈಗೆ ಕೊಟ್ಟಿದ್ದೀರಿ, ಅಸಂಬದ್ಧಗಳನ್ನು ಬರೆದು ಅವರು ನಿಮ್ಮ ಮರ್ಯಾದೆ ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಿಯದರ್ಶಿನಿ, ರಾಹುಲ್, ಪ್ರಿಯಾಂಕ್ (ಪ್ರಿಯಾಂಕ ಅಲ್ಲ) ಈ ಹೆಸರುಗಳು ಬೌದ್ಧ ಧರ್ಮದ ಪ್ರಭಾವದಿಂದ ಸಿಕ್ಕಿರುವಂತಹವು, ಅಶೋಕ್ ಎಂಬ ಹೆಸರೂ ಕೂಡ ಬೌದ್ಧ ಧರ್ಮವನ್ನು ಜಗತ್ತಿಗೆ ಪ್ರಚಾರ ಮಾಡಿದ ಇತಿಹಾಸ ಪುರುಷನ ಹೆಸರು ಎನ್ನುವುದಾದರೂ ತಿಳಿದಿದೆಯೇ? ಹಿಂದೂ ಧರ್ಮದ ಬಗ್ಗೆಯೆ ಸರಿಯಾಗಿ ತಿಳಿಯದ ತಮಗೆ ಬೌದ್ಧ ಧರ್ಮ ತಿಳಿಯುವುದಾದರೂ ಹೇಗೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಾಂವಿಧಾನಿಕ ಸ್ಥಾನವಾದ ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ನಾಲಾಯಕ್ ಎಂಬ ಪದ ಬಳಕೆ ಮಾಡಿರುವುದು ನಿಮ್ಮ ತಿಳುವಳಿಕೆಯನ್ನು ತೋರಿಸುತ್ತದೆ, ನೀವೂ ಸಹ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವವರು ಎಂಬ ಪ್ರಜ್ಞೆ ಇಟ್ಟುಕೊಂಡಿದ್ದರೆ ಒಳ್ಳೆಯದಿತ್ತು. ನಾಲಾಯಕ್ ಯಾರು ಎನ್ನುವುದು ನಿರ್ಧಾರವಾಗುವುದು ನಿಮ್ಮಿಂದ ಅಲ್ಲ, ಅವರವರ ನಡವಳಿಕೆಯಿಂದ ಎಂದು ಅವರು ಹೇಳಿದ್ದಾರೆ.
ಚೀನಾ ಅತಿಕ್ರಮಣದ ಬಗ್ಗೆ ಮಾತಾಡಲು ಹೆದರುವವರು, ಗಲಭೆಪೀಡಿತ ಮಣಿಪುರಕ್ಕೆ ಕಾಲಿಡದವರು, ಅಮೇರಿಕಾದ ಹುಕುಂಗೆ ಹೆದರಿ ಆಪರೇಷನ್ ಸಿಂಧೂರ ನಿಲ್ಲಿಸಿದವರು, ಟೆಲಿಪ್ರಾಂಪ್ಟರ್ ಇಲ್ಲದೆ ಒಂದು ಪದವೂ ಮಾತನಾಡಲಾಗದವರು, ಅಂತರ್ರಾಷ್ಟ್ರೀಯ ಸಂಬಂಧವನ್ನು ಹಾಳುಗೆಡವಿದವರು, ಟ್ರಂಪ್ ಹೆಸರನ್ನು ಪ್ರಸ್ತಾಪಿಸಲು ಹೆದರುವವರು, 11 ವರ್ಷದಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲಾಗದವರು. ಇವರನ್ನು ‘ನಾಲಾಯಕ್’ ಎಂದು ಕರೆದರೆ ಸೂಕ್ತವಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಅಶೋಕ್ ಅವರೇ, ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ, ಆಕಾಶ ನೋಡಿ ಉಗಿಯುವ ಪ್ರಯತ್ನ ಬಿಡಿ, ನಿಮ್ಮ ಮುಖವೇ ಕೊಳಕಾದೀತು. ಪೋಕ್ಸೊ ಪ್ರಕರಣದ ಆರೋಪಿ ಕಾಲಿಗೆ ಬಿದ್ದು ಕುರ್ಚಿ ಉಳಿಸಿಕೊಳ್ಳಬೇಕಾದ ಹಾಗೂ ನಿಮಗೆ ಏಡ್ಸ್ ಇಂಜಕ್ಷನ್ ಚುಚ್ಚಲು ಪ್ರಯತ್ನಿಸಿದ ಅತ್ಯಾಚಾರ ಆರೋಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಸ್ತಿತ್ವ ಉಳಿಸಿಕೊಳ್ಳಬೇಕಾದ ನಿಮ್ಮ ದಯನೀಯ ಸ್ಥಿತಿಯು ಮರುಕ ಹುಟ್ಟಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇಂದಿನ ಪ್ರಧಾನಿ ಕಾರ್ಯಕ್ರಮದಲ್ಲಿ ನಿಮ್ಮನ್ನು ದೂರವಿಟ್ಟು ತಾವು ಕುರ್ಚಿ ಪಡೆದುಕೊಂಡು ಬೀಗಿದ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅರ್ಹತೆಯಿಂದ ಹುದ್ದೆ ಪಡೆದಿದ್ದಾರೊ ಅಥವಾ ಅಪ್ಪನ ಹೆಸರಿನಿಂದ ಹುದ್ದೆ ಪಡೆದಿದ್ದಾರೊ ಎನ್ನುವುದನ್ನು ಚಿಂತಿಸಿ ಉತ್ತರಿಸಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.







