ಕಾಡುಗೋಡಿ ಪ್ಲಾಂಟೇಷನ್ ಪ್ರದೇಶದಲ್ಲಿ ಮನೆ ದ್ವಂಸ ಮಾಡಿಲ್ಲ: ಈಶ್ವರ್ ಖಂಡ್ರೆ

ಬೆಂಗಳೂರು, ಆ.12: ಬೆಂಗಳೂರು ಪೂರ್ವ ತಾಲೂಕಿನ ಕಾಡುಗೋಡಿ ಸಮೀಪದಲ್ಲಿರುವ ಪ್ಲಾಂಟೇಷನ್ ಪ್ರದೇಶದಲ್ಲಿ ವಾಸವಾಗಿರುವ ದಲಿತರ ಮನೆಗಳನ್ನು ದ್ವಂಸ ಮಾಡಿಲ್ಲ. ಒಂದು ವೇಳೆ ದ್ವಂಸ ಮಾಡಿದ್ದರೆ, ದಾಖಲೆಗಳನ್ನು ಸಲ್ಲಿಸಿ ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮಂಗಳವಾರದಂದು ವಿಧಾನ ಪರಿಷತ್ತಿನಲ್ಲಿ ‘ನಿಯಮ 68ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಚರ್ಚೆ’ಯಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ‘ಕಾಡುಗೋಡಿ ಪ್ಲಾಂಟೇಷನ್ ಪ್ರದೇಶದಲ್ಲಿರುವ ಕೃಷಿ ಭೂಮಿಯನ್ನು ಅರಣ್ಯ ಭೂಮಿ ಎಂದು’ ಗುರುತಿಸಿ ರೈತರಿಂದ ಕೃಷಿ ಭೂಮಿ ವಶಕ್ಕೆ ಪಡೆಯಲಾಗುತ್ತಿದೆ. ಅಲ್ಲದೆ ದಲಿತರನ್ನು ಒಕ್ಕಲೆಬ್ಬಿಸಲಾಗಿದೆ. ಹೀಗಾಗಿ ಪ್ರಕರಣಕ್ಕೆ ಸದನ ಸಮಿತಿಯನ್ನು ರಚನೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರಿಸಿದರು.
ಬೆಂಗಳೂರು ಪೂರ್ವ ತಾಲೂಕಿನ ಕಾಡುಗೋಡಿ ಪ್ಲಾಂಟೇಷನ್ ಪ್ರದೇಶದಲ್ಲಿ 711 ಎಕರೆ ಅರಣ್ಯ ಭೂಮಿ ಇದೆ. ವಿವಿಧ ಕಾಲಾವಧಿಗಳಲ್ಲಿ ಸರಕಾರದ ಇತರೆ ಕಾರ್ಯಗಳಿಗೆ ಜಮೀನನ್ನು ಕಾನೂನಿನ ಅನ್ವಯ ಹಂಚಿಕೆ ಮಾಡಲಾಗಿದೆ. ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟನಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಇಲ್ಲಿ ಯಾರು ರೈತರಿಲ್ಲ. ಯಾರ ಮನೆಗಳನ್ನು ದ್ವಂಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಯನ್ನು ಹಂಚಿಕೆ ಮಾಡಬಾರದು ಎಂದು ಕೋರ್ಟ್ ಆದೇಶ ಇದೆ. ಹೀಗಾಗಿ ಈಗ ಜಮೀನು ಹಂಚಿಕೆ ಮಾಡಲು ಸಾಧ್ಯವಿಲ್ಲ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮನೆಗಳನ್ನು ದ್ವಂಸ ಮಾಡಿದ್ದರೆ, ದಾಖಲೆಗಳನ್ನು ಸಲ್ಲಿಸಲಿ. ಪ್ರಕರಣವನ್ನು ಕಾನೂನು ಇಲಾಖೆಗೆ ಸಲ್ಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.







