ಧರ್ಮಸ್ಥಳ ಪ್ರಕರಣ|ಎನ್ಐಎ ತನಿಖೆಗೆ ಬೊಮ್ಮಾಯಿ ಆಗ್ರಹ

ಬೆಂಗಳೂರು, ಆ. 23: ಧರ್ಮಸ್ಥಳ ಪ್ರಕರಣದಲ್ಲಿ ಮುಸುಕುದಾರಿ ಹೇಳಿರುವ ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು. ಇಲ್ಲದಿದ್ದರೆ ರಾಜ್ಯ ಸರಕಾರ ಷಡ್ಯಂತ್ರದ ಭಾಗ ಎಂದು ಜನರು ತೀರ್ಮಾನಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶನಿವಾರ ಈ ಕುರಿತು ಎಕ್ಸ್ ಪೋಸ್ಟ್ ಹಾಕಿರುವ ಅವರು, ಧರ್ಮಸ್ಥಳದ ವಿಚಾರದಲ್ಲಿ ಎಸ್ಐಟಿ ಮೊದಲು ಮಾಡಬೇಕಿರುವ ಕೆಲಸವನ್ನು ಕೊನೆಯಲ್ಲಿ ಮಾಡುತ್ತಿದೆ. ದೂರುದಾರನ ಅರ್ಹತೆ, ದೂರಿನ ಅರ್ಹತೆ ಸಾಕ್ಷ್ಯಾಧಾರಗಳು ಇವುಗಳನ್ನು ಖಾತ್ರಿ ಪಡಿಸದೆ ಎಸ್ಐಟಿ ರಚನೆ ಮಾಡಿದ್ದು ಮತ್ತು ಅವರು ಅಗೆಯಲು ಪ್ರಾರಂಭಿಸಿರುವುದು ಕತ್ತಲಲ್ಲಿ ಕಾರ್ಯ ಆರಂಭ ಮಾಡಿದಂತಾಗಿದೆ ಎಂದು ಟೀಕಿಸಿದ್ದಾರೆ
ಎಸ್ಐಟಿ ರಚನೆ ಉದ್ದೇಶ ಧರ್ಮಸ್ಥಳವನ್ನು ಅಪಖ್ಯಾತಿಗೊಳಿಸುವ, ಅಪನಂಬಿಕೆ ಮೂಡಿಸುವ ಹಾಗೂ ಅಪಮಾನ ಮಾಡುವ ಒತ್ತಾಯ ಇದ್ದಿದ್ದು ಸ್ಪಷ್ಟ. ಇಂತಹ ವಿಚಾರಧಾರೆಗೆ ರಾಜ್ಯ ಸರಕಾರರದಲ್ಲಿ ಪುಷ್ಠಿ ಸಿಗುತ್ತದೆ ಎಂದು ವಿಶ್ವಾಸ ಇಟ್ಟು ಒತ್ತಡ ಹಾಕಿದ್ದಾರೆ. ಅದಕ್ಕೆ ಪೂರಕವಾಗಿ ಸರಕಾರ ಎಸ್ಐಟಿ ಮಾಡಿದೆ ಎಂದು ಅವರು ಹೇಳಿದ್ದಾರೆ.
ಎಸ್ಐಟಿಯಲ್ಲಿರುವ ದಕ್ಷ ಪೊಲಿಸ್ ಅಧಿಕಾರಿಗಳಿಗೆ ಮುಕ್ತವಾದ ಸ್ವತಂತ್ರ ಕೊಟ್ಟಿರಲಿಲ್ಲ ಎನ್ನುವುದು ತನಿಖೆ ನಡೆದಿರುವ ರೀತಿಯಲ್ಲಿ ಬಹಳ ಸ್ಪಷ್ಟವಾಗುತ್ತದೆ. ಮಾಧ್ಯಮಗಳು ಪ್ರತಿಹಂತದಲ್ಲಿ ಎಲ್ಲ ಉತ್ಖನನದ ಮಾಹಿತಿ ನೀಡಿದಾಗ ಸರಕಾರದ ನೈತಿಕ ಸ್ಥೈರ್ಯಕರಗಿ ಹೋಗಿ ಜನಾಕ್ರೋಶವನ್ನು ಎದುರಿಸಬೆಕಾಗುತ್ತದೆ ಎಂದು ತನಿಖೆಯ ದಾರಿಯನ್ನು ಬದಲಾವಣೆ ಮಾಡಿ ಇದೀಗ ನಿಜವಾದ ತನಿಖೆ ಪ್ರಾರಂಭ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.







