ಧರ್ಮಸ್ಥಳ ಪ್ರಕರಣ | ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಖಂಡಿಸಬಾರದೇ? : ಡಾ.ಸಿ.ಎಸ್.ದ್ವಾರಕನಾಥ್

ಬೆಂಗಳೂರು, ಆ.30 : ‘ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದನ್ನು ಖಂಡಿಸಲೇಬಾರದೇ?’ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕನಾಥ್ ಅವರು ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಸುತ್ತಮುತ್ತ ಹೆಣ್ಣು ಮಕ್ಕಳ ಹತ್ಯೆ ನಡೆದಿದೆ ಎನ್ನಲಾದ ವಿಚಾರಕ್ಕೆ ಎಸ್ಐಟಿ ರಚನೆಯಾಗಿದ್ದು, ಎಸ್ಐಟಿ ತಂಡಕ್ಕೆ ಮುಕ್ತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು. ಆಗ ತನಿಖೆ ತಾರ್ಕಿಕ ಅಂತ್ಯಕ್ಕೆ ತಲುಪಲಿದೆ. ಪ್ರಕರಣವನ್ನು ತೀರ್ಮಾನಿಸಬೇಕಿರುವುದು ನ್ಯಾಯಾಲಯ ಎಂದರು.
ನನಗೆ ಕುಮಾರಸ್ವಾಮಿ ಬಗ್ಗೆ ತುಂಬಾ ಗೌರವ ಇದೆ. ಹಿಂದೆ ಅವರು ಮುಖ್ಯಮಂತ್ರಿ ಆಗಿದ್ದಾಗ, ನನಗೆ ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನ ನೀಡಿದ್ದರು. ಎಲ್ಲರನ್ನೂ ದೇವರು ನೋಡಿಕೊಳ್ಳಬೇಕು ಅಲ್ಲವೇ? ಹಾಗಾದರೆ ಕೊಲೆಗಡುಕರನ್ನೂ ದೇವರು ನೋಡಿಕೊಳ್ಳಬೇಕು ಅಲ್ಲವೇ ? ಧರ್ಮಸ್ಥಳದಲ್ಲಿ ಅಪರಾಧ ನಡೆದಿದೆ ಎಂದು ಹೇಳುವುದು ತಪ್ಪಾ ಎಂದು ಅವರು ಪ್ರಶ್ನಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ಪುರಾವೆ ಇದೆ, ಇಲ್ಲಾ ಎಂದು ಹೇಳಲು ಬಿಜೆಪಿಯವರು ಯಾರು? ಅವರು ಕೊಲೆ, ಅತ್ಯಾಚಾರ ಮಾಡಿದವರ ಪರವಾಗಿ ಮಾತನ್ನಾಡುತ್ತಿದ್ದಾರೆ. ನಾನು ನಗರ ನಕ್ಸಲೀಯ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಬಿಜೆಪಿಯವರು ನಗರ ಡಕಾಯಿತರು ಎನ್ನುವುದನ್ನು ಒಪ್ಪಿಕೊಳ್ಳಲಿ ಎಂದು ಅವರು ತಿಳಿಸಿದರು.
ಎಸ್ಐಟಿ ರಚನೆ ಮಾಡುವ ಬಗ್ಗೆ ನಾನು ಸಿಎಂ ಮೇಲೆ ಒತ್ತಡ ಮಾಡುವಷ್ಟು ಪ್ರಭಾವಿಯಲ್ಲ. ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ ನಡೆಯುತ್ತಿದೆ. ನ್ಯಾಯಯುತ ತನಿಖೆ ನಡೆಸುವಂತೆ ಸಿಎಂಗೆ ಮನವಿ ಮಾಡಿದ್ದೆವು. ಅದರಲ್ಲೂ ಮಾಸ್ಕ್ ಮ್ಯಾನ್ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದರು. ಜೊತೆಗೆ ಮಹಿಳಾ ಆಯೋಗದ ಒತ್ತಡದ ಕಾರಣದಿಂದ ತನಿಖೆಗೆ ಆದೇಶ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದರು.







