ಸರಕಾರವೇ ಅಲೆಮಾರಿಗಳ ವಿಮೋಚನಾ ದಿನಾಚರಣೆ ನಡೆಸುವಂತೆ ಒತ್ತಾಯ

ಬೆಂಗಳೂರು, ಆ.31: ಅಲೆಮಾರಿ ಸಮುದಾಯಗಳ ಇತಿಹಾಸ, ಅಸ್ಮಿತೆ, ಘನತೆ ಮತ್ತು ಪ್ರಗತಿಯ ದೃಷ್ಟಿಯಿಂದ ಆ.31ರಂದು ‘ಅಲೆಮಾರಿಗಳ ವಿಮೋಚನಾ ದಿನಾಚರಣೆ’ಯನ್ನು ರಾಜ್ಯ ಸರಕಾರ ಘೋಷಣೆ ಮಾಡಿ, ಮುಂದಿನ ವರ್ಷದಿಂದ ಸರಕಾರವೇ ಆಚರಣೆ ಮಾಡಬೇಕು ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿರುವ ಗಾಂಧಿ ಭವನದಲ್ಲಿ ಪರಿಶಿಷ್ಟ ಜಾತಿ ವಿಮುಕ್ತ ಅಲೆಮಾರಿ ಸಮುದಾಯಗಳ ಒಕ್ಕೂಟವು ಆಯೋಜಿಸಿದ್ದ ‘ಅಲೆಮಾರಿಗಳ ವಿಮೋಚನಾ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿಮುಕ್ತ ಅಲೆಮಾರಿ ಸಮುದಾಯಗಳು ಎಸ್ಸಿ, ಎಸ್ಟಿ, ಒಬಿಸಿ ಪಟ್ಟಿಗಳಲ್ಲಿ ಹಂಚಿಹೊಗಿದ್ದಾರೆ. ಈ ಸಮುದಾಯಗಳನ್ನು ಎಲ್ಲ ಹಂತದಲ್ಲಿ ಸಂಘಟಿಸಲು ಯೋಜನೆ ರೂಪಿಸಬೇಕು ಎಂದರು.
ವಿಮುಕ್ತ ಅಲೆಮಾರಿ ಸಮುದಾಯಗಳ ಶಿಕ್ಷಣ, ಉದ್ಯೋಗ ಮತ್ತು ಅರ್ಥಿಕ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ವಿಮುಕ್ತ ಅಲೆಮಾರಿಗಳ ಶಾಶ್ವತ ಆಯೋಗ ಸ್ಥಾಪನೆ ಮಾಡಬೇಕು. ಕೇಂದ್ರ-ರಾಜ್ಯ ಸರಕಾರಗಳು ಈ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಒಕ್ಕೂಟವು ಅಲೆಮಾರಿ ಸಮುದಾಯಗಳ ಮಾನವ ಹಕ್ಕುಗಳ ದಮನ ಮಾಡಲು ದುರ್ಬಳಕೆ ಆಗುತ್ತಿರುವ ಅಭ್ಯಾಸ ಅಪರಾಧಿಗಳ ಕಾಯ್ದೆ-1952ಅನ್ನು ತಿದ್ದುಪಡಿ ಮಾಡಬೇಕು ಎಂಬ ನಿರ್ಣಯ ಸೇರಿ ಕೆಲ ನಿರ್ಣಯಗಳನ್ನು ಅಂಗೀಕರಿಸಿತು.
ರಾಜ್ಯ ಸರಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಿದೆ. ಬಂಜಾರ, ಬೋವಿ, ಕೊರಮ ಜಾತಿಗಳ ಒಳಗೊಂಡ ಪ್ರವರ್ಗ-ಸಿ ಗುಂಪಿನಲ್ಲಿ ಕೊರಚ ಸೇರಿದಂತೆ ಐವತ್ತಕ್ಕೂ ಹೆಚ್ಚು ಸೂಕ್ಷ್ಮ, ಅತಿ ಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇ.5ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ. ಸೂಕ್ಷ್ಮ ಸಮುದಾಯಗಳು ಸಿ ಗುಂಪಿನಲ್ಲಿ ಇರಲು ಇಚ್ಚಿಸದಿದ್ದರೆ, ಅವರಿಗೆ ಪ್ರತ್ಯೇಕ ಗುಂಪು ಮಾಡಿ ಹೆಚ್ಚುವರಿ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ನಿರ್ಧರಿಸಲಾಯಿತು.
ವೀರಶೈವ ಲಿಂಗಾಯತ ಜಂಗಮರು ಸಮುದಾಯಗಳ ಜನರು ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಪರಿಶಿಷ್ಟರ ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅವರುಗಳ ಜಾತಿ ಪ್ರಮಾಣಪತ್ರ ಮುಟ್ಟುಗೋಲು ಹಾಕಿಕೊಳ್ಳಬೇಕು. ಮೀಸಲಾತಿ ಮತ್ತಿತರ ಸಮಸ್ಯೆಗಳ ಪರಿಹಾರಕ್ಕಾಗಿ ತಕ್ಷಣ ಪರಿಶಿಷ್ಟ ಜಾತಿಗಳ ಶಾಶ್ವತ ರಾಜ್ಯ ಆಯೋಗವನ್ನ ಪ್ರಾರಂಭಿಸಬೇಕು ಎಂಬ ನಿರ್ಣಯವನ್ನು ಅಂಗೀಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಡಾ.ಬಿ.ಟಿ. ಲಲಿತಾ ನಾಯ್ಕ್, ನ್ಯಾಯವಾದಿ ಎನ್.ಅನಂತನಾಯ್ಕ್, ಆದರ್ಶ ಯಲ್ಲಪ್ಪ, ಸುಭಾಷ್ ರಾಠೋಡ್, ನಿವೃತ್ತ ನ್ಯಾಯಾಧೀಶ ವೆಂಕಟೇಶ ವೊರ್ಸೆ, ಶಿವರುದ್ರಸ್ವಾಮಿ, ಕೃಷ್ಣಪ್ಪ ಕೊರಚ, ಹನುಮಂತ ದೊಂಬರ, ಎನ್.ಆರ್.ನಾಯ್ಕ್, ಅಂಜನಪ್ಪ, ಮಹೇಶ್ ನಾಯ್ಕ್, ಬಸವರಾಜ್ ರಾಠೋಡ್, ಕುಬೇರ ನಾಯ್ಕ್, ಗೋಪಾಲ ನಾಯ್ಕ್, ಶಾಂತನಾಯ್ಕ ಚನ್ನಗಿರಿ, ಚಂದ್ರಿಕಾ, ಕೊಟ್ರಮ್ಮ ಮತ್ತಿತರರು ಭಾಗವಹಿಸಿದ್ದರು.







