ಸಮೀಕ್ಷೆಯ ಹೆಸರಲ್ಲಿ ಹಿಂದೂ ಸಮಾಜವನ್ನು ಚಿದ್ರಗೊಳಿಸುವ ಅಜೆಂಡಾವನ್ನು ಕಾಂಗ್ರೆಸ್ ಇಟ್ಟುಕೊಂಡಂತೆ ಕಾಣುತ್ತಿದೆ : ವಿಜಯೇಂದ್ರ

ಬೆಂಗಳೂರು, ಸೆ. 14: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಸಿದ್ದಾಂತ ಹಿಂದೂಧರ್ಮ ಹಾಗೂ ಹಿಂದೂ ಪದ್ಧತಿಗಳನ್ನು ಅವಹೇಳನ ಮಾಡುವುದು, ಇತರ ಧರ್ಮಿಯರನ್ನು ಓಲೈಸುವುದು ಮಾತ್ರ. ಅವರು ಸಮಾಜವಾದಿಯೂ ಅಲ್ಲ, ಭಾರತೀಯ ಸಂಸ್ಕೃತಿಯ ಪ್ರತಿಪಾದಕರೂ ಅಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪಪ್ರಚಾರ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಸರಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಧರ್ಮಿಯರನ್ನು ಮತಾಂತರಗೊಳ್ಳುವಂತೆ ಪ್ರಚೋದಿಸುತ್ತಿದೆ. ನಿನ್ನೆ ಸಿಎಂ ನೀಡಿರುವ ಹೇಳಿರುವ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ನಿಷ್ಕ್ರಿಯಗೊಳಿಸಲು ಈಗಾಗಲೇ ಚಿಂತನೆ ನಡೆಸಿರುವ ಸರಕಾರ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಜಾತಿಯ ಹೆಸರುಗಳೊಂದಿಗೆ ‘ಕ್ರಿಶ್ಚಿಯನ್' ಎಂದು ಹೆಸರಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದನ್ನು ಪ್ರಶ್ನಿಸಿದ ಬಿಜೆಪಿ ಸೂಕ್ತ ಸ್ಪಷ್ಟನೆ ನೀಡಿ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು ಕ್ರಿಶ್ಚಿಯನ್ ಹೆಸರಿನಲ್ಲಿ ಸೇರ್ಪಡೆಯಾಗಿದ್ದ ಜಾತಿಗಳ ಪಟ್ಟಿಯನ್ನು ತೆಗೆಯುವ ನಿರ್ಧಾರ ಪ್ರಕಟಿಸುವ ಬದಲು, ‘ಹಿಂದೂಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಏಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು?’ ಸಿಎಂ ಉತ್ತರ ಹಿಂದೂಧರ್ಮದ ಬಗೆಗೆ ಅವರಿಗಿರುವ ತಾತ್ಸಾರ, ಅಸಹನೆಯನ್ನು ಪ್ರತಿಬಿಂಬಿಸುತ್ತದೆಯಲ್ಲದೇ ತಾವೊಬ್ಬ ಹಿಂದೂ ವಿರೋಧಿ ಎನ್ನುವುದನ್ನು ಬಿಂಬಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಈ ಮಾತುಗಳು ಮತಾಂತರಕ್ಕೆ ಪರೋಕ್ಷ ಪ್ರಚೋದನೆ ನೀಡಿದಂತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಹಿಂ.ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಮಾಹಿತಿ ಸಂಗ್ರಹಿಸುವುದರ ಬದಲು ಮತಾಂತರದ ಹೆಸರನ್ನು ಮುಂದುಮಾಡಿ ಮಾತನಾಡುತ್ತಿರುವ ಸಿಎಂ ನಡೆ ಸಂಶಯಾಸ್ಪದ. ಏಕೆಂದರೆ ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂಸಮಾಜವನ್ನು ಚಿದ್ರಗೊಳಿಸುವ ಅಜೆಂಡಾವನ್ನು ಕಾಂಗ್ರೆಸ್ ಇಟ್ಟುಕೊಂಡಂತೆ ಕಾಣುತ್ತಿದೆ. ಹಿಂದೂಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ಸಿಎಂ ಇಸ್ಲಾಂಧರ್ಮದಲ್ಲಿನ ವೈರುಧ್ಯಗಳು, ಮಹಿಳೆಯರ ಮೇಲಿನ ಶೋಷಣೆ, ದೇಶಕ್ಕಿಂತ ಧರ್ಮವೇ ಮೊದಲು ಎನ್ನುವ ಅವರ ಸಿದ್ಧಾಂತವನ್ನು ಏಕೆ ಪ್ರಸ್ತಾಪಿಸುವುದಿಲ್ಲ? ಪ್ರಶ್ನಿಸುವುದಿಲ್ಲ?’ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ತ್ರಿವಳಿ ತಲಾಕ್ ರದ್ದತಿ ಕಾಯ್ದೆ ಜಾರಿಗೆ ತಂದಾಗ ಏಕೆ ಸಿಎಂ ಏಕೆ ಸ್ವಾಗತಿಸಲಿಲ್ಲ. ಸನಾತನ ಹಿಂದೂಧರ್ಮ ಹಾಗೂ ಭಾರತೀಯ ಸಂಸ್ಕೃತಿಯನ್ನು ವಿರೋಧಿಸುವುದು ಅವರ ಮನಸ್ಥಿತಿ, ಇದು ರಾಜ್ಯದ ಆಡಳಿತದ ಮೇಲೆ ಪ್ರತಿಬಿಂಬಿತವಾಗಿದೆ. ಅದರ ಪ್ರತೀಕವಾಗಿಯೇ ಸರಣಿ ರೂಪದಲ್ಲಿ ಹಿಂದೂ ವಿರೋಧಿ ಧೋರಣೆಗಳು ಸರಕಾರದಿಂದ ಅನಾವರಣಗೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.







