ಬೆಂಗಳೂರು | ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.23: ದೇವಾಲಯಗಳ ಬೀಗ ಮುರಿದು ವಿಗ್ರಹಗಳು, ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರವೀಣ್ ಭಟ್ ಹಾಗೂ ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ 5 ಕೆ.ಜಿ ಬೆಳ್ಳಿ ವಸ್ತುಗಳು, 67 ಗ್ರಾಂ ಚಿನ್ನಾಭರಣ, 1,426 ಗ್ರಾಂ ಹಿತ್ತಾಳೆ ವಸ್ತುಗಳು ಹಾಗೂ 353 ಗ್ರಾಂ ತಾಮ್ರದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದ ಪ್ರವೀಣ್ ಭಟ್ ಕಳ್ಳತನ ಪ್ರಕರಣವೊಂದರಲ್ಲಿ ಜೈಲಿಗೆ ಹೋದಾಗ ಸಂತೋಷ್ನ ಪರಿಚಯವಾಗಿತ್ತು. ಜೈಲಿನಿಂದ ಹೊರಬಂದ ಬಳಿಕ ಜೊತೆಯಾಗಿದ್ದ ಇಬ್ಬರೂ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜಯನಗರ, ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿದಂತೆ ಸುಮಾರು 11 ಕಡೆಗಳಲ್ಲಿ ದೇವಸ್ಥಾನಗಳಿಗೆ ಕನ್ನ ಹಾಕಿದ್ದರು. ಕದ್ದ ವಸ್ತುಗಳನ್ನು ಒಂದೊಂದು ಬಾರಿ ಒಂದು ಕಡೆಗಳಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.





