ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ: ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು: ಬಿಹಾರ ಚುನಾವಣೆ ಹೆಸರಲ್ಲಿ ಅಧಿಕಾರಿಗಳಿಂದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ ಎಂದು ಹೇಳಿದ್ದಾರೆ.
ತನ್ನ 'ಎಕ್ಸ್' ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ಹೈಕಮಾಂಡಿಗೆ 1800 ಕೋಟಿ ರೂ. ಕಪ್ಪ ನೀಡಿದ್ದನ್ನು ಯಡಿಯೂರಪ್ಪ ಹಾಗೂ ದಿ. ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು ರಾಜ್ಯ ಬಿಜೆಪಿ ನಾಯಕರು ಮರೆತಿದ್ದಾರೆಯೇ? ಮರೆತಿದ್ದರೆ, ನಾವು ಮತ್ತೊಮ್ಮೆ ನೆನಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಂಸದ ಬಿ.ವೈ ರಾಘವೇಂದ್ರ ತಮ್ಮ ತಂದೆಯವರ ಮಾತುಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಂಡು ನಂತರ ಮಾತನಾಡಿದರೆ ಉತ್ತಮ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ, ಮಂತ್ರಿಗಿರಿಗೆ 60, 70 ಕೋಟಿ ರೂ. ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ. ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು. ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ ಎಂದು ಟೀಕಿಸಿದ್ದಾರೆ.







