ಬಿಎಂಆರ್ಸಿಎಲ್ ಮೇಲೆ ರಾಜ್ಯ ಸರಕಾರ ಸೀಮಿತ ಅಧಿಕಾರ ವ್ಯಾಪ್ತಿ ಹೊಂದಿರಲಿದೆ; ಹೈಕೋರ್ಟ್ ಆದೇಶ

ಬೆಂಗಳೂರು : ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ರೈಲ್ವೆ ಕಂಪನಿಯಾಗಿದ್ದು, ಅದು ಕೇಂದ್ರ ಸರ್ಕಾರದ ಒಪ್ಪಿಗೆ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ವ್ಯಾಜ್ಯಗಳು ಏರ್ಪಟ್ಟಾಗ ಕೈಗಾರಿಕಾ ವಿವಾದಗಳ ಕಾಯ್ದೆ ಅಡಿಯಲ್ಲಿ ಅವುಗಳನ್ನು ಪರಿಹರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ, ರಾಜ್ಯ ಸರ್ಕಾರ 2019ರಲ್ಲಿ ಬಿಎಂಆರ್ಸಿಎಲ್ ಅನ್ನು ಸಾರ್ವಜನಿಕ ಉಪಯುಕ್ತ ಸೇವೆ ಎಂದು ಹೊರಡಿಸಿದ್ದ ಅಧಿಸೂಚನೆ ಹಾಗೂ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಅಡಿಯಲ್ಲಿ ಬಿಎಂಆರ್ಸಿಎಲ್ ಸೇವೆಗಳನ್ನು 'ಅತ್ಯವಶ್ಯಕ ಸೇವೆಗಳು' ಎಂದು 2017ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿರುವ ಹೈಕೋರ್ಟ್, ಬಿಎಂಆರ್ಸಿಎಲ್ ಮೇಲೆ ಕೇಂದ್ರ ಸರ್ಕಾರಕ್ಕೆ ವಿಶಾಲ ನಿಯಂತ್ರಣವಿರಲಿದ್ದು, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ ಎಂದು ಹೇಳಿದೆ.
ಮೆಟ್ರೊ ರೈಲು ನೌಕರರ ಮುಷ್ಕರ ನಿಯಂತ್ರಿಸಲು ರಾಜ್ಯ ಸರ್ಕಾರ ಎಸ್ಮಾ ಕಾಯ್ದೆಯಡಿ ಹೊರಡಿಸಿದ್ದ ಅಧಿಸೂಚನೆ ಹಾಗೂ ಮೆಟ್ರೊ ರೈಲು ಸಾರ್ವಜನಿಕ ಉಪಯುಕ್ತ ಸೇವೆ ಎಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಬಿಎಂಆರ್ಸಿಎಲ್, ಬಿಎಂಆರ್ಸಿಎಲ್ ನೌಕರರ ಸಂಘ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಬಿಎಂಆರ್ಸಿಎಲ್ನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಲಾ ಶೇ. 50 ಷೇರುಗಳನ್ನು ಹೊಂದಿದ್ದು, ಕೆಲ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತದೆ. ಆದರೆ, ಪ್ರಮುಖ ಆಡಳಿತಾತ್ಮಕ ಕ್ರಮಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮವಾಗಿರಲಿದೆ. ರಾಜ್ಯ ಸರ್ಕಾರ ಯಾವುದಾದರೂ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಬೇಕಾದರೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ, ಮೆಟ್ರೊ ಸೇವೆಯನ್ನು ಎಸ್ಮಾ ಕಾಯ್ದೆಯಡಿ ಅತ್ಯವಶ್ಯಕ ಸೇವೆ ಎಂದು ಘೋಷಣೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಮೆಟ್ರೊ ರೈಲ್ವೆ ಸೇವೆ ಕೇಂದ್ರ ಸರ್ಕಾರ ರಚನೆ ಮಾಡಿರುವ ಕಾಯ್ದೆಗಳಿಂದ ನಿಯಂತ್ರಣಕ್ಕೊಳಪಡಲಿದೆ. ಮೆಟ್ರೊ ರೈಲ್ವೆಯ ಹಲವು ಕಾರ್ಯಾಚರಣೆಗಳ ಉಸ್ತುವಾರಿ ಹೊಂದಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅಗತ್ಯ ಅನುಮತಿ ಪಡೆದ ನಂತರವೇ ರೈಲ್ವೆ ಸೇವೆ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ಅಧಿಕಾರವಿರಲಿದೆ. ಬಿಎಂಆರ್ಸಿಎಲ್ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ನಡುವೆ ಮಾಡಿಕೊಂಡಿರುವ ಒಪ್ಪಂದದಡಿ ಮೆಟ್ರೊ ರೈಲು ಮಾರ್ಗಗಳ ನಿರ್ಮಾಣ ಮತ್ತು ನಿರ್ವಹಣೆಗೆ ಅವಕಾಶವಿರಲಿದೆ. ಭಾರತೀಯ ರೈಲ್ವೆ ಕಾಯ್ದೆ ಮತ್ತು ಕೈಗಾರಿಕಾ ವಿವಾದ ಕಾಯ್ದೆಯಡಿ ಬಿಎಂಆರ್ಸಿಎಲ್ ರೈಲ್ವೆ ಕಂಪನಿ ಸ್ಥಾನಮಾನ ಹೊಂದಿದೆ. ಈ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರ ವ್ಯಾಪಕ ಅಧಿಕಾರ ಹೊಂದಿರಲಿದ್ದು, ಕೇಂದ್ರದ ನಿಯಂತ್ರಣದಲ್ಲಿಯೇ ಬಿಎಂಆರ್ಸಿಎಲ್ ಇರಲಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.







