ಮುಜರಾಯಿ ಇಲಾಖೆ ದೇವಸ್ಥಾನ ಆರ್ಥಿಕ ಸದೃಢವಾಗಲು ‘ಶಕ್ತಿ ಯೋಜನೆ’ ಕಾರಣ : ರಾಮಲಿಂಗಾರೆಡ್ಡಿ

ಬೆಂಗಳೂರು : ‘ಶಕ್ತಿ ಯೋಜನೆ’ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತದಿಂದ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಭಕ್ತರು ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿದೆ. ಇದರಿಂದ ದೇವಾಲಯಗಳ ಆದಾಯ ಮತ್ತು ದೇವಾಲಯದ ಸುತ್ತಮುತ್ತಲು ವ್ಯಾಪಾರ ಮಾಡುವವರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶನಿವಾರ ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸನ್ನಿಧಾನದಲ್ಲಿ ಕಾಡು ಮಲ್ಲೇಶ್ವರ ಗೆಳಯರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ಸ್ನೇಹಿ ಕಡಲೆಕಾಯಿ ಪರಿಷೆ ಮತ್ತು ಹುಣ್ಣಿಮೆ ಹಾಡು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ದೇವಾಲಯ ಅಭಿವೃದ್ದಿಗೆ ನಮ್ಮ ಸರಕಾರ ದೃಢ ಸಂಕಲ್ಪ ಮಾಡಿದೆ. ಬಸವನಗುಡಿಯ ಕಡಲೆಕಾಯಿ ಪರಿಷೆಯನ್ನು ನ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಬಸವನಗುಡಿಯಲ್ಲಿ ಐದು ದಿನಗಳ ಕಾಲ ಮತ್ತು ಮಲ್ಲೇಶ್ವರನಲ್ಲಿ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ಮುಜರಾಯಿ ಇಲಾಖೆ ವತಿಯಿಂದ ನಡೆಯುತ್ತಿದೆ. ಬೇರೆ ದೇವಸ್ಥಾನಗಳು ಪರಿಷೆ ಮಾಡುತ್ತೇವೆ ಎಂದರೆ ಆರ್ಥಿಕವಾಗಿ ಸಹಕಾರ ನೀಡಲಾಗುವುದು. ಮಲ್ಲೇಶ್ವರ ಕಡಲೆಕಾಯಿ ಪರಿಷೆ ರೈತರಿಗೆ ಸುಂಕ ವಿಧಿಸುತ್ತಿಲ್ಲ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಷೆ ಒಂದು ಲಕ್ಷಕ್ಕೂ ಅಧಿಕ ಬಟ್ಚೆ, ಪೇಪರ್ ಬ್ಯಾಗ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ಕಾಡುಮಲ್ಲೇಶ್ವರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಮಾತನಾಡಿ, ‘ಕಡಲೆಕಾಯಿ ಪರಿಷೆ ಪ್ರಯುಕ್ತ ಕರ್ನಾಟಕ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರದಿಂದ ರೈತರು ಆಗಮಿಸಿದ್ದಾರೆ ಅವರಿಗೆ ಮಾರಾಟ ಮಾಡಲು ಉಚಿತವಾಗಿ ಅವಕಾಶ ನೀಡಲಾಗಿದೆ. 400ಕ್ಕೂ ಹೆಚ್ಚು ಮಳಿಗೆಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಇಂದಿನ ಯುವ ಸಮುದಾಯ ನಮ್ಮ ಸಂಸ್ಕೃತಿ, ಸಂಪ್ರಾದಯ ಮರೆಯಬಾರದು ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಟಿ.ಎ.ಶರವಣ ಮತ್ತು ಕಾಡು ಮಲ್ಲೇಶ್ವರ ಬಳಗದ ಉಪಾಧ್ಯಕ್ಷೆ ಲೀಲಾ ಸಂಪಿಗೆ, ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ ಸೇರಿದಂತೆ ಹಲವರು ಭಾಗವಹಿಸಿದ್ದರು.







