ಬೆಂಗಳೂರು | ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ನಾಶ ಪಡಿಸಲು ವ್ಯವಸ್ಥಿತವಾಗಿ ಮತಗಳ್ಳತನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಶನಿವಾರ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಯುವ ಕಾಂಗ್ರೆಸ್ ಕರ್ನಾಟಕ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಕೇಂದ್ರ ಸರಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಈ ಪ್ರತಿಭಟನೆ ಬಿಹಾರ ರಾಜ್ಯದಲ್ಲಿ ಚುನಾವಣೆ ಸೋತಿದ್ದಕ್ಕಲ್ಲ, ಆದರೆ, ಸೋಲಿಗೆ ಕಾರಣವೇನು ಎನ್ನುವುದು ಇಲ್ಲಿ ತೋರಿಸುವ ಪ್ರಯತ್ನ ಆಗಿದೆ. ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿ ಬದಲಾವಣೆ ಆಗಿದೆ ಎಂದು ಆರೋಪಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಗಾಗಲೇ ಮತ ಕಳ್ಳತನ ಕುರಿತು ರಾಹುಲ್ ದೇಶದ ಗಮನ ಸೆಳೆದಿದ್ದರು. ಆದರೆ, ಇತ್ತೀಚಿಗೆ ಚುನಾವಣಾ ಆಯೋಗ ಆಯುಕ್ತ ಜ್ಞಾನೇಶ್ ಕುಮಾರ್ ಬಿಹಾರ, ಮಹಾರಾಷ್ಟ್ರ, ಹರಿಯಾಣದಲ್ಲಿ ಮತಪಟ್ಟಿ ಬದಲಾವಣೆ ಮಾಡಿದರು. ಹೀಗೆ, ಹಲವು ಬದಲಾವಣೆ ಕುರಿತು ನಾವು ದೇಶದ ಜನರಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಉಲ್ಲೇಖಿಸಿದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ಪ್ರತಿಭಟಿಸಿದ್ದರು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲೂ ಮತ ಕಳ್ಳತನ ಬಗ್ಗೆ ಹೇಳಿದ್ದರು. ಅದು ಇವತ್ತು ಸತ್ಯವಾಗಿದ್ದು, ನಿನ್ನೆ ಬಿಹಾರ ಫಲಿತಾಂಶ ಹೊರಬಿದ್ದಿದೆ ಎಂದು ತಿಳಿಸಿದರು.
ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಎರಡು ತಿಂಗಳ ಹಿಂದೆ ಇದೇ ಜಾಗದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮತಕಳ್ಳತನ ವಿರುದ್ಧ ಪ್ರತಿಭಟನೆ ಮಾಡಿದೆವು. ಆ ಪ್ರತಿಭಟನೆಯಲ್ಲಿ 1 ಲಕ್ಷ ಜನ ಭಾಗವಹಿಸಿದ್ದರು. ಅಂದು ಹಚ್ಚಿದ ಪ್ರತಿಭಟನಾ ಕಿಚ್ಚು ದೇಶದಾದ್ಯಂತ ಹಬ್ಬಿದೆ. ಬಿಹಾರ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆಯೇ ಎಂದು ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ಈ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್, ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.







