ಕೋಮುವಾದ, ಜಾತಿವಾದ, ಸ್ತ್ರೀ ಶೋಷಣೆ ನಮ್ಮ ಕಾಲದ ಅನಿಷ್ಟಗಳು : ಡಾ.ಕೆ.ಮರುಳಸಿದ್ದಪ್ಪ

ಬೆಂಗಳೂರು : ಹಿಂದೆ ಇದ್ದ ಉದಾರವಾದಿ ಸಮಾಜ ಇಂದು ಇಲ್ಲ. ಕೋಮುವಾದ, ಜಾತಿವಾದ, ಸ್ತ್ರೀ ಶೋಷಣೆ ಇವು ಮೂರು ನಮ್ಮ ಕಾಲದ ಮಹಾ ಅನಿಷ್ಟಗಳು ಎಂದು ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ತಿಳಿಸಿದ್ದಾರೆ.
ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಸುಖದ ಬೆನ್ನತ್ತಿ ನೈತಿಕವಾಗಿ ಅಧಃಪತನ ಹೊಂದುತಿದ್ದಾನೆ. ದೇಶ ಮತ್ತು ಸಮಾಜದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಇಂತಹ ಸಮಾಜಕ್ಕೆ ಭವಿಷ್ಯ ಇದೆಯೇ ಎಂದು ಕೆಲವೊಮ್ಮೆ ಬೇಸರವಾಗುತ್ತದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯ ಕಾರಣದಿಂದ ಯಂತ್ರ ಮನುಷ್ಯರೇ, ಮನುಷ್ಯರನ್ನು ನಿಯಂತ್ರಿಸುವ ಕಾಲ ಬರಬಹುದು. ಮನುಷ್ಯರು ಹೊಂದುತ್ತಿರುವ ಅದಃಪತನವನ್ನು ನೋಡಿದರೆ ಅದಾಗುವುದು ಒಳ್ಳೆಯದು. ಯಂತ್ರಗಳಿಗೆ ಮನುಷ್ಯರಿಗಿಂತ ಸ್ವಲ್ಪ ವಿವೇಕ ಹೆಚ್ಚು ಇರಬಹುದು. ಕೋಮುವಾದ, ಜಾತಿವಾದ, ಸ್ತ್ರೀ ಶೋಷಣೆಯ ವಾತಾವರಣ ಕೊನೆಯಾಗಿ ಒಂದು ಬೆಳಕು ಮೂಡಲಿ ಎಂದು ಅಭಿಪ್ರಾಯಪಟ್ಟರು.
ನನಗೆ ಹಣೆಬರಹದಲ್ಲಿ ನಂಬಿಕೆಯಿಲ್ಲ. ದೇವರ ಅಸ್ತಿತ್ವದ ಬಗ್ಗೆಯೂ ಒಂದು ಬಗೆಯಲ್ಲಿ ತಟಸ್ಥ ಮನೋಭಾವ. ಆದರೆ, ಕೆಲವು ಆಕಸ್ಮಿಕಗಳು ನಮ್ಮ ಬದುಕನ್ನು ಬದಲಿಸುತ್ತವೆ ಎನ್ನುವುದಕ್ಕೆ ನನ್ನ ಬದುಕಿನಲ್ಲೇ ಅನೇಕ ಉದಾಹರಣೆಗಳು ಸಿಕ್ಕಿವೆ. ನನ್ನ ಬದುಕಿನಲ್ಲಿ ಮಹತ್ವದ ಘಟ್ಟ ಎಂದರೆ ಸೆಂಟ್ರಲ್ ಕಾಲೇಜಿನ ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದ್ದು ಎಂದು ಅವರು ನೆನಪು ಮಾಡಿಕೊಂಡರು.
ಹಳ್ಳಿಯ ಊಳಿಗಮಾನ್ಯ ಕುಟುಂಬದಲ್ಲಿ ಇದ್ದ ನಾನು. ಇಲ್ಲಿನ ಸೆಂಟ್ರಲ್ ಕಾಲೇಜಿನಲ್ಲಿ ಸಿಕ್ಕ ಸ್ನೇಹಿತರು, ವಾತಾವರಣ, ಸಾಂಸ್ಕೃತಿಕ ಒಡನಾಟ ಇವೆಲ್ಲವೂ ಆಳವಾಗಿ ಪ್ರಭಾವಿಸಿದರು. ಸಾಂಸ್ಕೃತಿಕ ಸಂಘಟನೆ, ಸಾಮಾಜಿಕ ಚಳವಳಿಗಳಲ್ಲಿ ಭಾಗಿಯಾಗಲು ಪತ್ರಕರ್ತ ಪಿ.ಲಂಕೇಶ್ ಅವರೇ ಕಾರಣರು ಎಂದು ಅವರು ಸ್ಮರಿಸಿದರು.
ಕಾಲೇಜಿನ ಅಧ್ಯಾಪಕ ಆದ ಮೇಲೆ ನನ್ನ ಬಂಧು ಬಳಗವನ್ನು ಸಂಪೂರ್ಣವಾಗಿ ಮರೆತು, ನನ್ನ ವಿದ್ಯಾರ್ಥಿಗಳೇ ಬಂಧು ಬಳಗವಾದರು. ವಿದ್ಯಾರ್ಥಿಗಳಿಂದ ನನಗೆ ಅಪಾರ ಪ್ರೀತಿ ಸಿಕ್ಕಿದೆ. ನನ್ನ ಜಾತ್ಯಾತೀತ ಮನೋಭಾವ. ನನ್ನ ವಿದ್ಯಾರ್ಥಿಗಳ ಜೊತೆ ಜಾತ್ಯಾತೀತವಾಗಿ ನಡೆದೆ, ಅವರನ್ನು ಸಮಾನರಂತೆ ನಡೆಸಿಕೊಂಡೆ ಇದರಿಂದ ವಿದ್ಯಾರ್ಥಿಗಳು ಆಪ್ತರಾದರು ಎಂದು ಅವರು ಹೇಳಿದರು.
ಸುಮಾರು 60 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದೇನೆ. ಬೆಂಗಳೂರು ವಿವಿ, ಸೆಂಟ್ರಲ್ ಕಾಲೇಜುಗಳೇ ಬೆಂಗಳೂರಿನ ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. 70ರ ದಶಕ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಸಂದರ್ಭದಲ್ಲಿ ವಿಶೇಷವಾಗಿದೆ. ಚರಿತ್ರೆಯನ್ನೇ ಪ್ರಭಾವಿಸುವಂತಹ ಚಳವಳಿಗಳು 70ರ ದಶಕದಲ್ಲಿ ನಡೆದವು. ನೇರವಾಗಿ ನಾವು ಹೋರಾಟಗಳಲ್ಲಿ ಭಾಗವಹಿಸದಿರಬಹುದು. ಆದರೆ ಚಳವಳಿಗಳು ನಮ್ಮ ವಿಚಾರಧಾರೆಗೆ ನಿರ್ಧಿಷ್ಟ ದಿಕ್ಕು ಕೊಟ್ಟವು. ಸ್ವತಂತ್ರ ಮನೋಭಾವವನ್ನು ಹುಟ್ಟು ಹಾಕಿದವು ಎಂದು ತಿಳಿಸಿದರು.
ಶಾಲಾ ದಿನಗಳಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸವಿದೆ. ಅದು ಸಾಮಾಜಿಕ ರಾಜಕೀಯ ನಿಲುವನ್ನು ರೂಪಿಸಿದೆ. ಬಹುತೇಕ ಎಲ್ಲ ಪ್ರಧಾನಿಗಳನ್ನು ಅರಿತಿದ್ದೇನೆ. ಜವಾಹರ್ ಲಾಲ್ ನೆಹರೂ ಅವರನ್ನು ಇಂದು ಚಿಲ್ಲರೇ ರಾಜಕಾರಣಿಗಳು ಸಹ ಬಹಳ ತುಚ್ಚವಾಗಿ ಮಾತನಾಡುತ್ತಾರೆ. ಆದರೆ ನೆಹರೂ ಕಾಲದಲ್ಲಿ ಅಣೆಕಟ್ಟೆ, ಕಾರ್ಖಾನೆಗಳು ನಿರ್ಮಾಣವಾದವು. ಅದರ ಜೊತೆಗೆ ನೀತಿಯುಕ್ತವಾದ ರಾಜಕಾರಣ ಮಾಡಿದ್ದರು. ಅದಕ್ಕೆ ಹೋಲಿಸುವ ಮತ್ತೊಬ್ಬ ಪ್ರಧಾನಿ ಬೇರೆ ಇಲ್ಲ ಎಂದರು.
ನೆಹರೂ ಬಿಟ್ಟರೆ ಡಾ.ಮನಮೋಹನ್ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಮುಖ ಪ್ರಧಾನಿಗಳು. ವಾಜಪೇಯಿ ಅವರ ಪಕ್ಷವನ್ನು ನಾನು ಮೆಚ್ಚುವುದಿಲ್ಲ. ಅವರು ನಂಬಿದ್ದ ಆರೆಸ್ಸೆಸ್ನ್ನು ನಾನು ಧ್ವೇಷಿಸುತ್ತೇನೆ. ಆದರೆ ವ್ಯಕ್ತಿಯಾಗಿ ವಾಜಪೇಯಿ ಇಷ್ಟ. ಅವರು ಸಜ್ಜನ ರಾಜಕಾರಣಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ, ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.







