ಸಾಮಾಜಿಕ ಜಾಲತಾಣದಲ್ಲಿ ಜಾತಿಗಣತಿ ವರದಿಯ ನಕಲಿ ಅಂಕಿಅಂಶಗಳು ಪ್ರಕಟ; ದೂರು ದಾಖಲು

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ಸಾಮಾಜಿಕ ಜಾಲತಾಣವಾದ ವಾಟ್ಸ್ಆ್ಯಪ್ ಗ್ರೂಪಿನಲ್ಲಿ 2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂದು ಕೆಲವೊಂದು ನಕಲಿ ಅಂಕಿ ಅಂಶಗಳನ್ನು ಪ್ರಕಟಿಸಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ: 22.09.2025ರಿಂದ ಪ್ರಾರಂಭಿಸಿ ದಿನಾಂಕ: 31.10.2025ರವರೆಗೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಸಾರ್ವಜನಿಕರಿಗೆ ಆನ್ ಲೈನ್ ಮೂಲಕ ಪಾಲ್ಗೊಳ್ಳಲು ದಿನಾಂಕ:30.11.2025ರವರೆಗೆ ಅವಕಾಶ ನೀಡಲಾಗಿದೆ. ಅದರಂತೆ ಸಮೀಕ್ಷೆ ಕಾರ್ಯ ಇನ್ನೂ ಪ್ರಗತಿಯಲ್ಲಿರುತ್ತದೆ. ಈ ಸಂಬಂಧ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ಯಾವುದೇ ವ್ಯಕ್ತಿಗೆ ಮಾಹಿತಿಯನ್ನುಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಲಾಗುವುದೆಂದು ಆಯೋಗವು ಹೈಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಅದರಂತೆ ಆಯೋಗದ ವತಿಯಿಂದ ಗೌಪ್ಯತೆಯನ್ನು ಕಾಪಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಒಂದು ಮೊಬೈಲ್ ಸಂಖ್ಯೆಯಿಂದ 2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ಲಿಂಗಾಯಿತರು-65 ಲಕ್ಷ, ಒಕ್ಕಲಿಗರು-60 ಲಕ್ಷ, ಕುರುಬರು-45 ಲಕ್ಷ, ಈಡಿಗರು-15 ಲಕ್ಷ, ಪರಿಶಿಷ್ಟ ಪಂಗಡ-40.45 ಲಕ್ಷ ವಿಶ್ವಕರ್ಮ-15 ಲಕ್ಷ, ಬೆಸ್ತರು-15 ಲಕ್ಷ, ಬ್ರಾಹ್ಮಣರು-14 ಲಕ್ಷ, ಗೊಲ್ಲರು-10 ಲಕ್ಷ, ಮುಸ್ಲಿಮರು-60 ಲಕ್ಷ, ಕ್ರೈಸ್ತರು-12 ಲಕ್ಷ, ಸವಿತಾ ಸಮಾಜ -5 ಲಕ್ಷ, ಗೊಲ್ಲರು - 10ಲಕ್ಷ, ಕುಂಬಾರ -5 ಲಕ್ಷ ಮತ್ತು ಮಡಿವಾಳ -6 ಲಕ್ಷ ಇತರ ಎಂದು ಗ್ರೂಪ್ ಗೆ ಶೇರ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಮೀಕ್ಷೆಯ ದತ್ತಾಂಶಗಳನ್ನು ಸಂಗ್ರಹಿಸುವ ಹಂತದಲ್ಲಿರುವಾಗ ಈ ರೀತಿ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ನೀಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿರುವುದರ ಬಗ್ಗೆ ಹಾಗೂ ಈ ವಿಷಯದ ಸತ್ಯತೆಯ ಬಗ್ಗೆ ಪರಿಶೀಲಿಸುವುದು ಅವಶ್ಯವಿರುತ್ತದೆ. ಆದ ಕಾರಣ ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.







