ತೆಂಗಿನ ಕೃಷಿಯಲ್ಲಿ ಬಿಳಿ ನೊಣದ ರೋಗ ನಿರ್ವಹಣೆ; ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ಸಲ್ಲಿಕೆ

ಬೆಂಗಳೂರು : ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್. ಮೋಹನದಾಸ್ ಹೆಗ್ಗಡೆ ಅವರು ‘ತೆಂಗಿನ ಕೃಷಿಯಲ್ಲಿ ಬಿಳಿ ನೊಣದ ರೋಗ ನಿರ್ವಹಣೆ ಮತ್ತು ಪುನಶ್ಚೇತನ ವಿಷನ್-2040’ ಎಂಬ ಅಧ್ಯಯನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ರಾಜ್ಯದ ಕೊಬ್ಬರಿ ಆರ್ಥಿಕತೆ, ರೈತರ ಜೀವನಮಟ್ಟ ಮತ್ತು ಪರಿಸರ ಸಂರಕ್ಷಣೆಯನ್ನು ಸಮಗ್ರವಾಗಿ ಬಲಪಡಿಸುವ ನಿಟ್ಟಿನಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದ ಕೊಬ್ಬರಿ ತೋಟಗಳ ಮೇಲೆ ಗಂಭೀರವಾದ ಬಿಳಿ ನೋಣಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ಜೊತೆಗೆ, ಜಾಗತಿಕ ಮಟ್ಟದಲ್ಲಿ ಪುನರುಜ್ಜೀವನಾಧಾರಿತ, ಜೈವಿಕ, ತಂತ್ರಜ್ಞಾನಚಾಲಿತ ಕೃಷಿಗೆ ಕರ್ನಾಟಕವನ್ನು ಮಾದರಿಯಾಗಿ ರೂಪಿಸುವುದು ಈ ವರದಿಯ ಮುಖ್ಯ ಗುರಿಯಾಗಿದೆ.
ಮಂಡ್ಯ, ತುಮಕೂರು, ಹಾಸನ, ಉಡುಪಿ ಜಿಲ್ಲೆಗಳಲ್ಲಿ ಎನ್ಕಾರ್ಸಿಯಾ ಮತ್ತು ಕ್ರೈಸೊಪರ್ಲಾ ಜೀವ ಪರೋಪಜೀವಿಗಳ ಉತ್ಪಾದನಾ ಜೈವ-ಲ್ಯಾಬ್ಗಳನ್ನು ಸ್ಥಾಪನೆ ಮಾಡಬೇಕು. ಸ್ಥಳೀಯವಾಗಿ ಉತ್ಪಾದನೆಯಾಗುವ ಬಯೋಟ್ರಾಪ್ಗಳು, ಬಯೋ-ಕಿಟ್ಗಳನ್ನು ವಿತರಣೆ ಮಾಡಬೇಕು. ಡ್ರೋನ್ ಮೂಲಕ ಕೀಟ ನಕ್ಷೆ(ಪೆಸ್ಟ್ ಮ್ಯಾಪಿಂಗ್), ಬೇವಿನ ಸ್ಪ್ರೇ, ಬಯೋ-ರಿಲೀಸ್ ಅನ್ನು ಸಿಂಪಡಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜೈವಿಕ ನಿಯಂತ್ರಣ ಸಾಮಗ್ರಿಗಳ ಮೇಲೆ ಶೇ.50 ಸಹಾಯಧನ ನೀಡಬೇಕು. ಮಿಶ್ರ ಬೇಸಾಯ ಪದ್ಧತಿ ಮತ್ತು ನೈಸರ್ಗಿಕ ನಿಯಂತ್ರಣಕ್ಕೆ ರೈತ ಪ್ರೋತ್ಸಾಹ ನಿಧಿ ಸ್ಥಾಪನೆ ಮಾಡಬೇಕು. ಬಯೋ-ಎಜೆಂಟ್ ಸಂಶೋಧನೆ ಮತ್ತು ಬಯೋ-ಟೆಕ್ ಆವಿಷ್ಕಾರಗಳಿಗೆ ಅನುದಾನವನ್ನು ಒದಗಿಸಬೇಕು. ಕೃಷಿಯ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿಯಾನ ಮಾಡಬೇಕು ಎಂದು ಎಸ್.ಮೋಹನದಾಸ್ ಹೆಗ್ಗಡೆ ಅವರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.
‘ತೆಂಗಿನ ಕೃಷಿಯಲ್ಲಿ ಬಿಳಿ ನೊಣದ ರೋಗ ನಿರ್ವಹಣೆ ಮತ್ತು ಪುನಶ್ಚೇತನ ವಿಷನ್-2040’ ವರದಿಯ ಶಿಫಾರಸುಗಳನ್ನು ಮಂಡ್ಯ, ತುಮಕೂರು, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಬೇಕಾಗಿದೆ. ಹೀಗಾಗಿ ಈ ಕುರಿತು ಪರಿಶೀಲಿಸಿ ಸಾಧಕ-ಬಾಧಕಗಳನ್ನು ವಿರ್ಮಶಿಸಿ ಅನುಮತಿಯನ್ನು ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ತೋಟಗಾರಿಕೆ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.







