ಸಂವಿಧಾನ ಬಯಸಿದಂತಹ ಪರಿಪೂರ್ಣ ಅಭಿವೃದ್ಧಿಯನ್ನು ಮಾಡಲು ಇನ್ನೂ ಸಾಧ್ಯವಾಗಿಲ್ಲ: ಮಹದೇವಪ್ಪ

ಬೆಂಗಳೂರು : ಸಂವಿಧಾನದಡಿ ತ್ರಿವರ್ಣ ಧ್ವಜವೇ ನಮ್ಮ ಮೂಲ. ಹೀಗಾಗಿ, ಬೇರೆ ಯಾವುದೇ ಬಣ್ಣದ ಧ್ವಜ, ಬೇರೆ ಯಾವುದೇ ಧರ್ಮದ ಧ್ವಜ ಆಕಾಶಕ್ಕೆ ಹಾರಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ "ಸಂವಿಧಾನ ದಿನಾಚರಣೆ-2025" ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವು ಇಡೀ ದೇಶದಲ್ಲಿ ಗಗನದ ಎತ್ತರಕ್ಕೆ ಹಾರಿಸಬೇಕಾದದ್ದು ಭಾರತದ ತ್ರಿವರ್ಣ ಧ್ವಜ ಮತ್ತು ಎತ್ತಿ ಹಿಡಿಯಬೇಕಾದದ್ದು ನಮ್ಮ ಸಂವಿಧಾನ ಮಾತ್ರವೇ ಆಗಿದೆ ಎಂದು ಪ್ರತಿಪಾದಿಸಿದರು.
ಶ್ರೇಷ್ಠವಾದ ಸಂವಿಧಾನ ಜಾರಿಗೆ ಬಂದು 76 ವರ್ಷಗಳಾಯಿತು. ಇಂದು76ನೆ ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮತ್ತು ವಿವಿಧ ರಂಗಗಳಲ್ಲಿ ಅನೇಕ ಅಭಿವೃದ್ಧಿಗಳನ್ನು ಕಂಡಿದ್ದೇವೆ. ಆದರೂ ಸಂವಿಧಾನ ಬಯಸಿದಂತಹ ಪರಿಪೂರ್ಣ ಅಭಿವೃದ್ಧಿಯನ್ನು ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಅವರು ಉಲ್ಲೇಖಿಸಿದರು.
1949 ಜನವರಿ 25ರಂದು ಈ ಸಂವಿಧಾನವನ್ನು ಸಮರ್ಪಿಸುವ ಒಂದು ದಿನ ಮುಂಚೆ ಸಂವಿಧಾನ ಉದ್ದೇಶಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾಡಿದ ಭಾಷಣ ಐತಿಹಾಸಿಕ. ಆ ಭಾಷಣದ ತಿರುಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗಬೇಕು. ನಮ್ಮ ದೇಶದ ಭೌಗೋಳಿಕ ಮತ್ತು ಸಾಂಸ್ಕೃತಿಕ ಜನ ಜೀವನ ವೈವಿಧ್ಯಮಯ ಜೀವನದಿಂದ ಕೂಡಿದೆ. ಇದರ ಮಹತ್ವವೆ ಬಹುತ್ವದ ಭಾರತ.
ಭಾರತ ದೇಶದ ಯಾವುದೇ ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಸಂವಿಧಾನ ಪೀಠಿಕೆ ಓದುವ ಹವ್ಯಾಸ ಇದುವರೆಗೆ ಇರಲಿಲ್ಲ. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಂದ ಮೇಲೆ ಇಡೀ ಭಾರತ ದೇಶ ಕರ್ನಾಟಕದ ತೀರ್ಮಾನದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ ಎಂದು ಅವರು ಹೇಳಿದರು.
ಸಂವಿಧಾನ ಪೀಠಿಕೆಯನ್ನು ಎಲ್ಲ ಸಭೆ ಸಮಾರಂಭಗಳು, ಶಾಲಾ-ಕಾಲೇಜುಗಳು, ಮುಖ್ಯಮಂತ್ರಿಗಳ ಕಚೇರಿ, ಮುಖ್ಯ ಕಾರ್ಯದರ್ಶಿಗಳ ಕಚೇರಿ ಎಲ್ಲಾ ಕಡೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ನೋಡಬಹುದು ಹಾಗೂ ವಿಧಾನಪರಿಷತ್ ಮತ್ತು ವಿಧಾನಸಭೆಗಳ ಅಧಿವೇಶನದ ಮೊದಲ ದಿನ ಸಂವಿಧಾನದ ಪೀಠಿಕೆಯನ್ನು ಓದುವುದನ್ನು ನೀವು ನೋಡಬಹುದು. ಭಾರತದ ಯಾವುದೇ ರಾಜ್ಯ ಈ ರೀತಿಯ ಹವ್ಯಾಸ ಬೆಳೆಸಿಕೊಂಡಿಲ್ಲ. ಇದಕ್ಕೆ ಮೂಲ ಪ್ರೇರಣಾ ಶಕ್ತಿಗೆ ಕಾರಣರಾದ ರಾಜ್ಯದ ದಲಿತ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.







