ಪ್ರೊ.ವನಮಾಲ ವಿಶ್ವನಾಥ್, ಜೆ.ವಿ.ಕಾರ್ಲೊ ಸೇರಿ ಐದು ಮಂದಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2025ನೇ ಸಾಲಿನ ‘ಗೌರವ ಪ್ರಶಸ್ತಿ'ಗೆ ಹಾಸನದ ಜೆ.ವಿ.ಕಾರ್ಲೊ, ಬೆಂಗಳೂರಿನ ವನಮಾಲ ವಿಶ್ವನಾಥ್, ಚಿತ್ರದುರ್ಗದ ಡಾ.ಸಂಧ್ಯಾ ರೆಡ್ಡಿ ಕೆ.ಆರ್, ಹೊಸಪೇಟೆಯ ವಿಠಲರಾವ್ ಟಿ. ಗಾಯಕ್ವಾಡ್, ಅಥಣಿಯ ಡಾ.ಜೆ.ಪಿ.ದೊಡಮನಿ ಅವರು ಆಯ್ಕೆಯಾಗಿದ್ದಾರೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಅನುವಾದಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
2024ನೇ ಸಾಲಿನ ಪುಸ್ತಕ ಬಹುಮಾನವೂ ಪ್ರಕಟಗೊಂಡಿದ್ದು, 5 ಅನುವಾದಿತ ಕೃತಿಗಳು ಆಯ್ಕೆಯಾಗಿವೆ. ಪುಸ್ತಕ ಬಹುಮಾನವು ತಲಾ 25 ಸಾವಿರ ರೂ. ನಗದು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
2024ನೇ ಸಾಲಿನ ಪುಸ್ತಕ ಬಹುಮಾನ: ಆರ್.ಸದಾನಂದ ಅವರು ಕನ್ನಡದಿಂದ ಇಂಗ್ಲಿಷ್ಗೆ ಅನುವಾದಿಸಿರುವ ಏಕತಾರಿ, ನಟರಾಜ ಹೊನ್ನವಳ್ಳಿ ಅವರು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿರುವ ಆಲಯ ಈ ಲಯ, ಮಲ್ಲೇಶಪ್ಪ ಸಿದಾಂಪುರ ಅವರು ಅನುವಾದಿಸಿರುವ ಬೌಮನಿಜಂ-ಆಧುನಿಕತೆಯಿಂದ ದ್ರವಾಧುನಿಕತೆಯವರೆಗೆ, ಕಾರ್ತಿಕ್.ಆರ್ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಸತ್ತವರ ಸೊಲ್ಲು, ಡಾ.ಎನ್.ದೇವರಾಜ್ ಅವರು ಅನುವಾದಿಸಿರುವ ಹಾಥಿಪಾಲ್ನೆ ಜೋ ಚಲಿ ಕೃತಿಗಳು 2024ನೇ ಸಾಲಿನ ಪುಸ್ತಕ ಬಹುಮಾನಗಳಿಗೆ ಆಯ್ಕೆಯಾಗಿವೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.







