ಎಟಿಎಂ ಹಣ ದರೋಡೆ ಪ್ರಕರಣ: ಸಿಎಂಎಸ್ ಏಜೆನ್ಸಿ ವಿರುದ್ಧ ಕ್ರಮಕ್ಕೆ ಕೋರಿ ಆರ್ಬಿಐಗೆ ಪೊಲೀಸರ ಪತ್ರ

ಎಟಿಎಂ ಹಣ ದರೋಡೆ ಪ್ರಕರಣ
ಬೆಂಗಳೂರು : ಇತ್ತೀಚೆಗೆ ನಗರದಲ್ಲಿ ನಡೆದಿದ್ದ 7.11ಕೋಟಿ ರೂ. ಎಟಿಎಂ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಪೊಲೀಸ್ ಇಲಾಖೆ ಆರ್ಬಿಐಗೆ ಪತ್ರ ಬರೆದಿರುವುದಾಗಿ ವದಿಯಾಗಿದೆ.
ಈ ಸಂಬಂಧ ಪೊಲೀಸ್ ಇಲಾಖೆ ಆರ್ಬಿಐಗೆ ಪತ್ರ ಬರೆದಿದ್ದು, ದರೋಡೆ ಪ್ರಕರಣದಲ್ಲಿ ಸಿಎಂಎಸ್ ಏಜೆನ್ಸಿಯ ಭದ್ರತಾ ಲೋಪ ಕಂಡುಬಂದಿದೆ. ಆದುದರಿಂದ ಈ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ ಆರ್ಬಿಐ ಮೂಲಕ ಎಟಿಎಂಗೆ ಹಣ ತುಂಬುವ ಎಲ್ಲ ಏಜೆನ್ಸಿಗಳ ಜೊತೆಗೆ ಪೊಲೀಸ್ ಇಲಾಖೆ ಸಭೆ ನಡೆಸಲು ತಯಾರಿ ಕೂಡ ನಡೆಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ಗಳ ಪಟ್ಟಿ ತಯಾರಿ ಮಾಡಲಾಗಿದೆ. ರಿಜಿಸ್ಟರ್ ಆಫ್ ಸೊಸೈಟಿಗೆ ಈಗಾಗಲೇ ಕಮಿಷನರೇಟ್ ವ್ಯಾಪ್ತಿಯ ಸಂಸ್ಥೆಗಳ ಪಟ್ಟಿ ಕೊಡಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು, ನಗರದ ಆಯಾ ವಿಭಾಗದ ಡಿಸಿಪಿಗಳಿಗೆ ತಮ್ಮ ವ್ಯಾಪ್ತಿಯ ಪಟ್ಟಿ ತಯಾರಿಗೆ ಸೂಚನೆ ನೀಡಿದ್ದು, ರಿಜಿಸ್ಟರ್ ಆಫ್ ಸೊಸೈಟಿಯಿಂದ ಮಾಹಿತಿ ಪಡೆದು, ಆರ್ಬಿಐ ಮೂಲಕವೇ ಎಚ್ಚರಿಕೆ ಕೊಡಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿರುವುದಾಗಿ ಗೊತ್ತಾಗಿದೆ.





