ಕರ್ನಾಟಕ ಜಾನಪದ ಅಕಾಡೆಮಿ ವಿವಿಧ ಪ್ರಶಸ್ತಿ ಪುರಸ್ಕೃತರ ಆಯ್ಕೆಪಟ್ಟಿ ಪ್ರಕಟ

PC : janapada.karnataka.gov.in
ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ನೀಡುವ 2025ನೆ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ ಮತ್ತು 2024ನೆ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು, ಕೊರಗರ ಡೋಲು ಕಲಾ ಪ್ರಕಾರದಲ್ಲಿ ಸುಮತಿ ಕೊರಗ ಸೇರಿ ಜಾನಪದ ವಿವಿಧ ಪ್ರಕಾರಗಳಲ್ಲಿ 30 ಮಂದಿ ಸಾಧಕರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಂಗಳವಾರದಂದು ಅಕಾಡೆಮಿಯು ಪ್ರಕಟನೆ ಹೊರಡಿಸಿದ್ದು, ಉತ್ತರ ಕನ್ನಡದ ಗೌರಿ ನಾಗಪ್ಪ ನಾಯ್ಕ(ಸುಗ್ಗಿ ಹಾಡು) ದಕ್ಷಿಣ ಕನ್ನಡದ ಸುಮತಿ ಕೊರಗ(ಕೊರಗರ ಡೋಲು), ಉಡುಪಿಯ ಗುಲಾಬಿ ಗೌಡ್ತಿ(ನಾಟಿ ವೈದ್ಯ), ಕೊಡಗು ಜಿಲ್ಲೆಯ ಅಮ್ಮಣಿ(ಸೂಲಗಿತ್ತಿ ಹಾಗೂ ಕುಡಿಯ ಜನಾಂಗದ ಹಾಡುಗಾರಿಕೆ) ಅವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರು ನಗರದ ಸಿದ್ದರಾಜು(ನೀಲಗಾರರ ಪದ ಮತ್ತು ತಂಬೂರಿಪದಗಳು), ಬೆಂಗಳೂರು ಗ್ರಾಮಾಂತರದ ಬಚ್ಚಮ್ಮ(ಸೋಬಾನೆ ಪದ), ಬೆಂಗಳೂರು ದಕ್ಷಿಣ ಜಿಲ್ಲೆಯ ಬಿ. ಸಿದ್ದರಾಜಯ್ಯ(ಜಾನಪದ ಗಾಯನ), ಕೋಲಾರದ ಸೀತಮ್ಮ(ತತ್ವಪದ), ಚಿಕ್ಕಬಳ್ಳಾಪುರದ ಕೆ.ಎಂ. ನಾರಾಯಣ ಸ್ವಾಮಿ(ಕೀಲು ಕುದುರೆ) ತುಮಕೂರಿನ ರೇವಣ್ಣ(ಅಲಗು ಕುಣಿತ), ದಾವಣಗೆರೆಯ ಜಿ. ಪರಮೇಶ್ವರಪ್ಪ ಕತ್ತಿಗೆ(ತತ್ವಪದ) ಅವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಚಿತ್ರದುರ್ಗದ ಜಿ.ಎನ್. ವಿರೂಪಾಕ್ಷಪ್ಪ(ಜಾನಪದ ಸಂಗೀತ), ಶಿವಮೊಗ್ಗದ ಕೆ.ಎಸ್. ಲಿಂಗಪ್ಪ(ಅಂಟಿಕೆ ಪಿಂಟಿಕೆ), ಮೈಸೂರು ಜಿಲ್ಲೆಯ ಚನ್ನಾಜಮ್ಮ(ಸೋಬಾನೆ ಪದ) ಮಂಡ್ಯದ ಹೊನ್ನಯ್ಯ(ಕೋಲಾಟ), ಹಾಸನದ ಯೋಗೇಂದ್ರ ದುದ್ದು(ಗೀಗೀ ಪದ), ಚಿಕ್ಕಮಗಳೂರಿನ ರವಿ ಎಚ್.ಎಂ.(ವೀರಗಾಸೆ), ಚಾಮರಾಜನಗರದ ಬಸವರಾಜು(ಗೊರುಕನ ನೃತ್ಯ) ಅವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಳಗಾವಿಯ ಭೀಮಪ್ಪ ಸಿದ್ಧಪ್ಪ ಮುತ್ನಾಳ್(ಪುರವಂತಿಕೆ), ಧಾರವಾಡ ಜೈಭೀಮನಗರದ ಪ್ರಕಾಶ ಮಲ್ಲಿಗವಾಡ(ಜಾನಪದ ನೃತ್ಯ), ವಿಜಯಪುರದ ಜ್ಯೋತಿರ್ಲಿಂಗ ಹೂನಕಟ್ಟಿ(ಜಾನಪದ ಗಾಯನ), ಬಾಗಲಕೋಟೆಯ ಚಂದ್ರಲಿಂಪ್ಪ ನಿಂಗಪ್ಪ ಬಸರಕೋಡ(ಪುರುವಂತಿಕೆ) ಅವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾವೇರಿಯ ಬಿಕ್ಷಾಪತಿ ಮೋತಿ(ಹಗಲುವೇಷ), ಗದಗದ ಕಾಶಿಮಸಾಬ ಹುಸೇನಸಾಬ(ಹೆಜ್ಜೆ ಮೇಳ), ಕಲಬುರಗಿಯ ಭಾಗಪ್ಪ(ತತ್ವಪದ), ಬೀದರ್ನ ಇಂದ್ರಮ್ಮ(ಮೋಹರಂ ಪದ), ರಾಯಚೂರಿನ ಯಂಕನಗೌಡ(ತತ್ವಪದ), ಕೊಪ್ಪಳದ ರಾಮಣ್ಣ(ಹಗಲು ವೇಶ), ವಿಜಯನಗರದ ಕಿಂಡ್ರಿ ಲಕ್ಷ್ಮೀಪತಿ(ಸುಡುಗಾಡು ಸಿದ್ದರು) ಹಾಗೂ ಯಾದಗಿರಿಯ ಹಣಮಂತ(ತತ್ವಪದ) ಅವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಾನಪದ ತಜ್ಞ ಪ್ರಶಸ್ತಿ: ತುಮಕೂರಿನ ಗಡಿನಾಡು ಜಾನಪದ ಕೇಂದ್ರದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅವರನ್ನು ಡಾ. ಜೀ.ಶಂ.ಪ ಜಾನಪದ ತಜ್ಞ ಪ್ರಶಸ್ತಿಗೆ, ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಹಾಗೂ ಪ್ರಾಧ್ಯಾಪಕರಾದ ಡಾ. ಎಚ್.ಟಿ.ಪೋತೆ ಅವರನ್ನು ಡಾ. ಬಿ.ಎಸ್. ಗದ್ದಿಗಿಮಠ ಜಾನಪದ ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2024ನೆ ಸಾಲಿನ ಪುಸ್ತಕ ಬಹುಮಾನ: ವಿಚಾರ ವಿಮರ್ಶೆ ಪ್ರಕಾರದಡಿ ಕನ್ನಡ ಪ್ರಾಧ್ಯಾಪಕ ಡಾ. ವೀರಾಸಾಬಿಹಳ್ಳಿ ಶಿವಣ್ಣ ಅವರ ‘ಕಡುಗೊಲ್ಲರ ಸಂಸ್ಕೃತಿ ಮತ್ತು ಕಾವ್ಯಗಳು’ ಪುಸ್ತಕವನ್ನು ಹಾಗೂ ಸಂಶೋಧನೆ ಪ್ರಕಾರದಡಿ ವಿಜಯನಗರದ ಕೂಡ್ಲಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಡಾ. ಇಮಾಮ್ ಸಾಹೇಬ್ ಹಡಗಲಿ ಅವರು ಬರೆದ ‘ಕನಕಗಿರಿ ಸೀಮೆಯ ಸ್ಥಳನಾಮಗಳು’ ಪುಸ್ತಕವನ್ನು 2024ನೆ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ.
ವಾರ್ಷಿಕ ಗೌರವ ಪ್ರಶಸ್ತಿ ತಲಾ 25 ಸಾವಿರ ರೂ., ಜಾನಪದ ತಜ್ಞ ಪ್ರಶಸ್ತಿ ತಲಾ 50 ಸಾವಿರ ರೂ. ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ತಲಾ 25 ಸಾವಿರ ರೂ. ಮೊತ್ತದ ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.







