ವೈಚಾರಿಕ ಚಿಂತನೆ, ಪ್ರಶ್ನಿಸುವ ಮನೋಭಾವ ಪ್ರತಿಯೊಬ್ಬರ ಧ್ಯೇಯವಾಗಲಿ: ಡಾ.ರಾಜಾಸಾಬ್

ಬೆಂಗಳೂರು : ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ವೈಚಾರಿಕ ಚಿಂತನೆ, ಪ್ರಶ್ನಿಸುವ ಮನೋಭಾವ ಮತ್ತು ಪ್ರಯೋಗಾತ್ಮಕ ಗುಣ ಬೆಳೆಸಿಕೊಳ್ಳುವುದು ಮುಖ್ಯ. ಅದೇ ನಮ್ಮ ಧ್ಯೇಯವಾಗಬೇಕು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ಅಧ್ಯಕ್ಷ ಡಾ.ಎ.ಎಚ್.ರಾಜಾಸಾಬ್ ಕರೆ ನೀಡಿದ್ದಾರೆ.
ವಿಯೆಟ್ನಾಂ ದೇಶದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ‘ಇಂಡೋ ನಾಮ್ ಸೈಂಟಿಫಿಕ್ ಸಮಿಟ್ ಫೆಲೋಶಿಪ್- 2026’ ಕಾರ್ಯಕ್ರಮ ಆಯೋಜಿಸಿದ್ದು, ವಿಯೆಟ್ನಾಂಗೆ ತೆರಳುವ ಮುನ್ನ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ನ ಪ್ರತಿನಿಧಿಗಳ ಸಮ್ಮುಖದಲ್ಲಿ ರವಿವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯವು ವೈಜ್ಞಾನಿಕ ಮನೋಭಾವ ಮೂಡಿಸುವುದರಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಮೂಢನಂಬಿಕೆಗಳ ನಿವಾರಣೆಗೆ ಸರಕಾರವೂ ಹಲವು ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವಿಜ್ಞಾನ ಪ್ರಸರಣಕ್ಕೆ ಅಪಾರ ಶ್ರಮಿಸುತ್ತಿದೆ. ಈ ವೈಜ್ಞಾನಿಕ ಸಮ್ಮೇಳನವು ವಿಯೆಟ್ನಾಂ ಮತ್ತು ಭಾರತ ದೇಶಗಳ ನಡುವೆ ವೈಜ್ಞಾನಿಕ ವಿನಿಮಯ ಕಾರ್ಯಕ್ರಮಗಳನ್ನು ನಡೆಸಲಿದೆ. ವಿಯೆಟ್ನಾಂ ದೇಶದಲ್ಲಿ ವಿಜ್ಞಾನದ ಕಂಪನ್ನು ಪಸರಿಸುತ್ತಿರುವ ಎಲ್ಲ ಪ್ರತಿನಿಧಿಗಳಿಗೂ ಶುಭವಾಗಲಿ ಎಂದು ಎ.ಎಚ್.ರಾಜಾಸಾಬ್ ಹೇಳಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ‘ಇಂಡೋ ನಾಮ್ ಸೈಂಟಿಫಿಕ್ ಸಮಿಟ್ ಫೆಲೋಶಿಪ್- 2026’ರ ಮೂಲಕ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಾಗರೋತ್ತರಕ್ಕೆ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಿದೆ. ಈ ಫೆಲೋಶಿಪ್ ಅನ್ನು ವಿಜ್ಞಾನ ಪ್ರಸರಣಕ್ಕೆ ಶ್ರಮಿಸಿದ ಹಲವು ಗಣ್ಯರಿಗೆ ಪ್ರದಾನ ಮಾಡಲಾಗುತ್ತಿದೆ. ವಿಯೆಟ್ನಾಂ ಹಾಗೂ ಭಾರತದ ಸಹಯೋಗದಲ್ಲಿ ನಡೆಯುತ್ತಿರುವ ಮೊದಲ ವೈಜ್ಞಾನಿಕ ಕಾರ್ಯಕ್ರಮ ಇದಾಗಿದೆ. ನಾವು ಮತ್ತಷ್ಟು ದೇಶಗಳಿಗೆ ನಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಲಿದ್ದೇವೆ ಎಂದರು.
ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಮಾತನಾಡಿ, ಮೂಢನಂಬಿಕೆ ಮುಕ್ತ, ವೈಚಾರಿಕ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಮೈಲಿಗಲ್ಲಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗುರುಮಿಟ್ಕಲ್ ಮುರುಘಾಮಠದ ಶಾಂತವೀರ ಮುರುಘ ರಾಜೇಂದ್ರ ಸ್ವಾಮೀಜಿ, ಬೇಲೂರಿನ ಶಿವಬಸವ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸೋಮಶೇಖರ್, ಡಿಸ್ಟ್ರಿಕ್ ಗೌರ್ನರ್ ಲಯನ್ ರಾಜು ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.






