ಮೋದಿ ಸರಕಾರದಿಂದ ನಿರುದ್ಯೋಗ ಸೃಷ್ಟಿ : ಯುವ ಕಾಂಗ್ರೆಸ್ ಆರೋಪ

ಬೆಂಗಳೂರು : ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಸರಕಾರ ಉದ್ಯೋಗದ ಸೃಷ್ಟಿ ಬದಲು ದಾಖಲೆಯ ನಿರುದ್ಯೋಗ ಸೃಷ್ಟಿಸಿ ಯುವಜನರ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಆರೋಪಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ 11 ವರ್ಷಗಳಲ್ಲಿ 22 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ದೇಶದಲ್ಲಿ ಐದು ದಶಕಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಸಿದೆ. ಆ ಮೂಲಕ ಯುವಕರ ಭವಿಷ್ಯವನ್ನು ನರಕವನ್ನಾಗಿಸಿದೆ ಎಂದು ಕಿಡಿಗಾರಿದರು.
ಕೇಂದ್ರ ಸರಕಾರದ 40 ಲಕ್ಷ ಮಂಜೂರಾದ ಹುದ್ದೆಗಳಲ್ಲಿ ಶೇ.25ರಷ್ಟು ಅಂದರೆ 10 ಲಕ್ಷ ಹುದ್ದೆಗಳು ಖಾಲಿಯಿವೆ. ರೈಲ್ವೆಯಲ್ಲಿ ಶೇ.40ರಷ್ಟು ಹುದ್ದೆಗಳು, ಗೃಹ ಇಲಾಖೆಯಲ್ಲಿ ಶೇ.33, ರಕ್ಷಣಾ ಇಲಾಖೆಯಲ್ಲಿ ಶೇ.12ರಷ್ಟು ಹುದ್ದೆಗಳು ಖಾಲಿಯಿವೆ. ಇದೆಲ್ಲ ಯಾವಾಗ ಭರ್ತಿ ಮಾಡಲಾಗುತ್ತದೆ? ಎಂದು ಮಂಜುನಾಥ್ ಪ್ರಶ್ನಿಸಿದರು.
9.67 ಲಕ್ಷ ಹುದ್ದೆಗಳು ಖಾಲಿ: ವೇತನ ವಿಧೇಯಕ ಮಂಡಿಸುವಾಗ 2023ರ ಮಾ.1ರಂದು ಕೇಂದ್ರ ಸರಕಾರವೆ ಅಧಿಕೃತವಾಗಿ 9.67 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಹೇಳಿತ್ತು. ಈಗ ಈ ಸಂಖ್ಯೆ 10 ಲಕ್ಷ ದಾಟಿದೆ. ಶೇ.25ರಷ್ಟು ಹುದ್ದೆಗಳು ಖಾಲಿಯಿದ್ದು, ಈ ಪೈಕಿ ‘ಬಿ’ ಗ್ರೂಪ್ ನಲ್ಲಿ ಶೇ.33, ‘ಸಿ’ ಗ್ರೂಪ್ ನಲ್ಲಿ ಶೇ.24, ‘ಎ’ ಗ್ರೂಪ್ ನಲ್ಲಿ ಶೇ.23 ಖಾಲಿ ಇವೆ. ಇದು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಮಾಡಿರುವ ದ್ರೋಹ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
56,435 ಭರ್ತಿಗೆ ಕಾಂಗ್ರೆಸ್ ಸರಕಾರ ಕ್ರಮ
ರಾಜ್ಯದಲ್ಲಿ ಇದೀಗ ಒಳ ಮೀಸಲಾತಿ ಗೊಂದಲ ಬಗೆಹರಿಸಿ ರೋಸ್ಟರ್ ಅಂತಿಮಗೊಳಿಸಿ, ಒಂದೇ ಬಾರಿಗೆ 56,435 ಸರಕಾರಿ ಹುದ್ದೆಗಳನ್ನು ತುಂಬಲು ಕಾಂಗ್ರೆಸ್ ಸರಕಾರ ಮುಂದಾಗಿದೆ. ಪ್ರತೀ ವರ್ಷ ಆದ್ಯತೆಯಾಗಿ ಖಾಲಿ ಹುದ್ದೆಗಳ ಭರ್ತಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಪದವಿ ಪಡೆದವರಲ್ಲಿ ನಿರುದ್ಯೋಗ ದರವು ಶೇ.18.9ರಷ್ಟಿದ್ದು, ಡಿಪ್ಲೊಮಾ ಪಡೆದವರಲ್ಲಿ ಶೇ.17.1 ರಷ್ಟಿದೆ. ಕರ್ನಾಟಕದಲ್ಲಿ ನಿರುದ್ಯೋಗ ದರವು ಶೇ.2.5 ರಷ್ಟಿದೆ. ಇದು ಇತರ ರಾಜ್ಯಗಳಿಗಿಂತ ತುಲನಾತ್ಮಕವಾಗಿ ಕಡಿಮೆಯಾಗಿದೆ.
-ಎಚ್.ಎಸ್.ಮಂಜುನಾಥ್ ಗೌಡ, ರಾಜ್ಯಾಧ್ಯಕ್ಷ, ಯುವ ಕಾಂಗ್ರೆಸ್ ಸಮಿತಿ






