ಆಳಂದ ಗಲಭೆ ಪ್ರಕರಣ ವಾಪಸ್; ರಾಜ್ಯಪಾಲರಿಗೆ ಬಿಜೆಪಿ ಮನವಿ

ಬೆಂಗಳೂರು : ಕಲಬುರಗಿಯ ಆಳಂದದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಅಪಮಾನ, ಕೋಮು ಉದ್ವಿಗ್ನತೆ ಸೃಷ್ಟಿಸಿ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳ ವಾಪಸ್ಗೆ ಸರಕಾರ ಮುಂದಾಗಿದ್ದು, ಇದನ್ನು ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿ ನಿಯೋಗವು, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.
ಮಂಗಳವಾರ ಲೋಕಭವನಕ್ಕೆ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿಯ ನಿಯೋಗವು ರಾಜ್ಯಪಾಲ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿತು. ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ‘ವೋಟ್ಬ್ಯಾಂಕ್ ರಾಜಕಾರಣಕ್ಕಾಗಿ, ಅಲ್ಪಸಂಖ್ಯಾತರನ್ನು ಓಲೈಸಲು ಆಳಂದದ ಶ್ರೀರಾಘವ ಚೈತನ್ಯ ಮಂದಿರದ ಮೇಲೆ ದಾಳಿ ಮಾಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸರಕಾರ ವಾಪಸ್ ಪಡೆದಿದೆ’ ಎಂದು ದೂರಿದರು.
ಗಂಭೀರ ಸ್ವರೂಪದ ಪ್ರಕರಣಗಳ ಹಲವು ಕೇಸ್ಗಳನ್ನು ಹಿಂಪಡೆಯಲು ಸರಕಾರ ಮುಂದಾಗಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯ. ಇಂತಹ ಸಮಾಜ ವಿರೋಧಿ ಹಾಗೂ ಕ್ರಿಮಿನಲ್ಗಳ ಬೆನ್ನಿಗೆ ನಿಲ್ಲುವ ಮೂಲಕ ಸರಕಾರ ತಾನು ಜನವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು. ಈ ವೇಳೆ ಪರಿಷತ್ ವಿಪಕ್ಷ ಉಪನಾಯಕ ಸುನಿಲ್ ವಲ್ಯಾಪುರೆ, ಸದಸ್ಯರಾದ ಶಶಿಲ್ ಜಿ.ನಮೋಶಿ, ಬಿ.ಜಿ. ಪಾಟೀಲ್, ಶಾಸಕ ಅವಿನಾಶ್ ಜಾಧವ್, ಮಾಜಿ ಸಂಸದ ಡಾ.ಉಮೇಶ್ ಜಾಧವ್, ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಜಿಲ್ಲ್ಧ್ಯಕ್ಷ ಅಶೋಕ್ ಬಗಲಿ, ಮುಖಂಡರಾದ ಶರಣಪ್ಪ ತಳವಾರ, ಶಿವರಾಜ ಪಾಟೀಲ್ ರದ್ದೇವಾಡಗಿ, ಸಂಜಯ್ ಮಿಸ್ಕಿನ್ ಹಾಜರಿದ್ದರು.






