ಮಲಹೊರುವ ಪದ್ಧತಿ ಮುಂದುವರಿದಿರುವುದು ದುರಂತ : ಪ್ರೊ.ಸಿ.ಜಿ.ಲಕ್ಷ್ಮೀಪತಿ

ಬೆಂಗಳೂರು : ದೇಶದಲ್ಲಿ ನಗರಿಕರಣ, ಉದಾರಿಕರಣ, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಯುಗ(ಎಐ)ದಂತಹ ಅನೇಕ ಬದಲಾವಣೆಗಳು ಆಗಿವೆ. ಅಲ್ಲದೆ, ಸಮುದಾಯದಿಂದ ಅನೇಕರು ಮಂತ್ರಿಗಳು, ಶಾಸಕರು, ಅಧಿಕಾರಿಗಳು ಆಗಿದ್ದರೂ ಇನ್ನೂ ಮಲಹೊರುವ ಪದ್ಧತಿ ಮುಂದುವರೆಯುತ್ತಿರುವುದು ದುರಂತವೇ ಸರಿ ಎಂದು ಪ್ರಾಧ್ಯಾಪಕ ಪ್ರೊ.ಸಿ.ಜಿ.ಲಕ್ಷ್ಮೀಪತಿ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಜ್ಞಾನಭಾರತಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಡಾ.ಬಾಬು ಜಗಜೀವನ ರಾಮ್ ಸಂಶೋಧನಾ ಸಂಸ್ಥೆ, ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ಹಾಗೂ ಸಫಾಯಿ ಕರ್ಮಚಾರಿ ಕಾವಲು ಸಮತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಫಾಯಿ ಕರ್ಮಚಾರಿಗಳ (ಮ್ಯಾನ್ಯುಯಲ್ ಸ್ಕ್ಯಾವೆಂಜರ್) ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಬಸವಲಿಂಗಪ್ಪ ಪೌರಾಡಳಿತ ಸಚಿವರಾಗಿದ್ದಾಗ ಮೊದಲ ಬಾರಿಗೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಶಾಸನವನ್ನು ಜಾರಿಗೆ ತಂದರು. ಅದು ಇಡೀ ರಾಷ್ಟ್ರದಲ್ಲಿ ಕ್ರಾಂತಿಕಾರಕ ಶಾಸನ ಆಗಿತ್ತು. ಬಸವಲಿಂಗಪ್ಪ ಅವರ ಅವಧಿಯಲ್ಲಿ ಎರಡು ಮಹತ್ವದ ಕೆಲಸ ಆಗಿದೆ. ಒಂದು ಈ ಶಾಸನವನ್ನು ಜಾರಿಗೆ ಮಾಡಿದ್ದು ಮತ್ತು ಇದರಿಂದ ದಲಿತ ಸಂಘರ್ಷ ಸಮಿತಿ ಹುಟ್ಟಿಗೆ ಕಾರಣವಾಗಿದ್ದು ಎಂದು ಲಕ್ಷ್ಮೀಪತಿ ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆ ನಿರ್ದೇಶಕ ರಾಜೇಶ್ ಜಿ.ಗೌಡ, ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಡಾ.ಕೆ.ಬಿ.ಓಬಳೇಶ್, ಕಾರ್ಯಗಾರದ ಸಂಯೋಜಕ ಡಾ.ಆರ್.ವಿ. ಚಂದ್ರಶೇಖರ್ ಭಾಗವಹಿಸಿದ್ದರು.
ನಮ್ಮ ಮುಂದಿನ ಪೀಳಿಗೆ ಶಾಶ್ವತವಾಗಿ ಮಲಹೊರುವ, ಪೌರಕಾರ್ಮಿಕರ ಕೆಲಸಗಳಿಂದ ದೂರ ಉಳಿಯಬೇಕೆಂದರೆ ಏನು ಮಾಡಬೇಕು ಎನ್ನುವುದರ ಬಗ್ಗೆ ಯೋಚಿಸಬೇಕಾಗಿದೆ. ನಮ್ಮ ಮಕ್ಕಳ ಮನಸ್ಸಿನಲ್ಲಿ ಎಂದೂ ಇಂತಹ ಕೆಲಸ ಮಾಡಲು ಹೋಗಬಾರದು ಎಂದು ನಮ್ಮ ಜನ ದೃಢವಾದ ಪ್ರತಿಜ್ಞೆಯನ್ನು ಮಾಡಬೇಕು. ಮಾನಸಿಕವಾಗಿ ತೀರ್ಮಾನ ತೆಗೆದುಕೊಳ್ಳದೇ ಹೋದರೆ, ಅಸ್ಪಶ್ಯತೆ ಮುಂದುವರಿಯುತ್ತದೆ.
-ಪ್ರೊ.ಸಿ.ಜಿ.ಲಕ್ಷ್ಮೀಪತಿ, ಪ್ರಾಧ್ಯಾಪಕ






