ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು ಮತಗಳನ್ನು ಕೇಳಿ ಪಡೆದವರು, ಅದೇ ಶ್ರೀರಾಮನಿಗೆ ಜನಸಾಮಾನ್ಯರು ನೀಡಿದ ದೇಣಿಗೆಯ ಒಂದೊಂದು ರೂಪಾಯಿಯ ಲೆಕ್ಕಕೊಡಲು ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷೆ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಪ್ರಶ್ನಗಳಿಗೆ ಉತ್ತರ ಕೊಡದೆ ಇರುವುದು ಸಾರ್ವಜನಿಕ ಭಾಷಾ ಪಂಡಿತರ ಸಾಮಾನ್ಯ ಜ್ಞಾನದ ಪರಿಮಿತಿಗೆ ಬರುವುದಿಲ್ಲವೇ?" ರಾಮನ ಹೆಸರನ್ನು ರಾಜಕೀಯಕ್ಕೆ ಬಳಸಬಹುದು; ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು 'ಎಕ್ಸ್'ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿ.ಕೆ.ಹರಿಪ್ರಸಾದ್, "ಭಾಷಾ ಪ್ರಖಂಡ ಪಂಡಿತ", "ಜ್ಞಾನ ಭಂಡಾರದ ಶಿಖರ", "ಸಾರ್ವಜನಿಕ ಜೀವನದ ಸಾಕಾರಮೂರ್ತಿಯೇ" ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ಸಾಮಾನ್ಯ ಜ್ಞಾನ ಹೇಳಿಸಿಕೊಳ್ಳುವ ದುರ್ಗತಿ ನನಗಂತೂ ಬಂದಿಲ್ಲ, ಬರುವುದೂ ಇಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರು ಪಕ್ಷ ತೊರೆದು, ಹೊಸ ಪಕ್ಷ ಕಟ್ಟಿದಾಗ ಇದೇ ಜೋಶಿ, ಸಾರ್ವಜನಿಕವಾಗಿ ಆಡಿರುವ ಮಾತುಗಳು ಒಂದೊಂದು ಆಣಿಮುತ್ತುಗಳು ಎಂಬುದನ್ನು ಮರೆತಿದ್ದಾರೆ. ಯಾರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿದ್ದಿರೋ, ಇಂದು ಅವರೇ ನಿಮ್ಮ ರಾಜಕೀಯದ ಪರಮ ಪೂಜ್ಯರು! ಹಿಂದೆ ಯಾರನ್ನು ರಾಜಕೀಯವಾಗಿ ನೆಲಸಮ ಮಾಡಿದ್ದೀರೋ, ಇಂದು ಅವರ ಪಾದಪೂಜೆ ಮಾಡುತ್ತಿರುವುದು ನಿಮ್ಮ "ಸಾಮಾನ್ಯ ಜ್ಞಾನದ" ಪರಮಾವಧಿಯೇ? ಎಂದು ವ್ಯಂಗ್ಯವಾಡಿದ್ದಾರೆ.
ಅಯೋಧ್ಯೆ ಶ್ರೀರಾಮನ ಹೆಸರಿನಲ್ಲಿ ನಿರ್ಮಾಣವಾದ ದೇವಸ್ಥಾನದ ಕಾಮಗಾರಿ ವೆಚ್ಚ ಹಾಗೂ ನಿರ್ವಹಣೆಯಲ್ಲಿ ನಡೆದಿರುವ ಕೋಟ್ಯಂತರ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಜೆಪಿ ನಾಯಕರಿಗೆ ಯೋಗ್ಯತೆ ಇದೆಯೇ? "ನಾ ಖಾವೂಂಗಾ, ನಾ ಖಾನೇ ದೂಂಗಾ" ಎಂದು ಬೊಬ್ಬೆ ಹೊಡೆದಿದ್ದವರು ಈಗ ಬಾಯ್ತೆರೆದು ಮಾತಾಡುವುದು ಬಿಡಿ, ಮುಖ ಕೂಡ ತೋರಿಸುತ್ತಿಲ್ಲ ಯಾಕೆ? ಬಾಯಿ ಬಿಟ್ಟರೆ ಮುಖವಾಡ ಕಳಚುವ ಭಯವೇ? ಎಂದು ಪ್ರಶ್ನಿಸಿದ್ದಾರೆ.






