ಕಾರು ಓವರ್ಟೇಕ್ ಮಾಡಿದವರೊಂದಿಗೆ ರಸ್ತೆ ಜಗಳ; ಮಾಲೂರು ನ್ಯಾಯಾಧೀಶೆ ನಡೆಗೆ ಹೈಕೋರ್ಟ್ ಖಂಡನೆ

ಬೆಂಗಳೂರು : ಕಾರು ಓವರ್ಟೇಕ್ ವಿಚಾರಕ್ಕೆ ಸಂಬಂಧಿಸಿದಂತೆ ಬೈಕ್ ಸವಾರ ಮತ್ತು ಹಿಂಬದಿ ಸವಾರರ ವಿರುದ್ಧ ರಸ್ತೆ ಜಗಳ ನಡೆಸಿದ್ದಲ್ಲದೇ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವಂತೆ ಮಾಡಿದ್ದ ಕೋಲಾರ ಜಿಲ್ಲೆಯ ಮಾಲೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಅವರ ನಡೆಯನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ.
ಕಾರನ್ನು ಬೈಕ್ ಸವಾರರು ಹಿಂದಿಕ್ಕಿ ಮುಂದೆ ಹೋಗಿದ್ದರಿಂದ ಕೆರಳಿದ ನ್ಯಾಯಾಧೀಶೆ ಗಾಯತ್ರಿ ಮತ್ತವರ ಪತಿ ಬೈಕ್ನಲ್ಲಿದ್ದವರನ್ನು ಅವರನ್ನು ಹಿಂಬಾಲಿಸಿ, ರಸ್ತೆಯಲ್ಲಿ ಕಲಹ ತೆಗೆದಿದ್ದರು. ಆನಂತರ, ಪೊಲೀಸರ ಮೇಲೆ ಒತ್ತಡ ಹೇರಿ ಬೈಕ್ ಸವಾರರೂ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಡಿದ್ದರು. ಈ ಪ್ರಕರಣ ರದ್ದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ (ಜುಲೈ 29) ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ರೋಡ್ ರೇಜ್ಗೆ ಸಂಬಂಧಿಸಿದ ವಿಡಿಯೊ ನೋಡಿದರೆ ಮೇಲ್ನೋಟಕ್ಕೆ ಇದು ನ್ಯಾಯಾಂಗ ಅಧಿಕಾರಿಯ ಘನತೆಗೆ ತಕ್ಕಂತಿಲ್ಲ. ಕಾರಿನಿಂದ ಇಳಿದು ಅವರು ಸಾಮಾನ್ಯ ವ್ಯಕ್ತಿಯ ಜತೆ ಜಗಳ ತೆಗೆದಿದ್ದಾರೆ. ಆತ ಮಾಡಿದ ಏಕೈಕ ತಪ್ಪು ನ್ಯಾಯಾಧೀಶೆಯ ಕಾರನ್ನು ಹಿಂದಿಕ್ಕಿ ಮುಂದೆ ಹೋಗಿದ್ದು ಮತ್ತು ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿರುವುದು. ಇದು ನ್ಯಾಯಾಧೀಶೆಯನ್ನು ಕೆರಳಿಸಿದ್ದರೆ ಅಥವಾ ಅವರ ಅಹಂ ಗೆ ಪೆಟ್ಟು ನೀಡಿ ನೋಯಿಸಿದ್ದರೆ, ನ್ಯಾಯಾಂಗ ಅಧಿಕಾರಿಯ ಕಚೇರಿಯ ದುರುಪಯೋಗಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ ಎಂದು ಹೇಳಿತು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ ನೋಡಿದರೆ ನ್ಯಾಯಾಂಗ ಅಧಿಕಾರಿ ಹೊಂದಿರುವ ಹುದ್ದೆಗೆ ಸಂಪೂರ್ಣವಾಗಿ ಅನುಚಿತವಾದ ರೀತಿಯಲ್ಲಿ ವರ್ತಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದಿರುವ ನ್ಯಾಯಪೀಠ, ನ್ಯಾಯಾಂಗ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲು ಈ ನ್ಯಾಯಾಲಯದ ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ. ಜತೆಗೆ, ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್ ಅರ್ಜಿ ವಿಚಾರಣೆ ಮುಂದೂಡಿದೆ.
ಕೋರ್ಟ್ ಆವರಣಕ್ಕಷ್ಟೇ ಸೀಮಿತವಲ್ಲ:
ನ್ಯಾಯಾಂಗ ಅಧಿಕಾರಿಯ ಹುದ್ದೆಯು ನ್ಯಾಯಾಲಯದ ಆವರಣಕ್ಕೆ ಮಾತ್ರ ಸೀಮಿತವಾಗಿಲ್ಲ. ನ್ಯಾಯಾಂಗ ಕಚೇರಿಯು ನಿರಂತರ ಸಾರ್ವಜನಿಕ ನಂಬಿಕೆಯನ್ನು ಹೊಂದಿದೆ. ನ್ಯಾಯಾಲಯದ ಒಳಗೆ ನಡೆಯುವ ಕೆಲಸ ಮಾತ್ರವಲ್ಲ, ನ್ಯಾಯಾಲಯದ ಹೊರಗಿನ ನಡವಳಿಕೆಯೂ ಸಂಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳುತ್ತದೆ ಅಥವಾ ಕುಗ್ಗಿಸುತ್ತದೆ. ನ್ಯಾಯಾಂಗ ಅಧಿಕಾರಿಯ ಪ್ರತಿಯೊಂದು ನಡೆಯೂ ನ್ಯಾಯಾಲಯದ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಸಾರ್ವಜನಿಕರೊಂದಿಗೆ ಸಂವಹನ ನಡೆದಾಗಲೆಲ್ಲ ಅದು ನ್ಯಾಯಾಲಯದ ಸಭಾಂಗಣವನ್ನು ಮೀರಿ ಪ್ರಯಾಣಿಸುತ್ತದೆ ಎಂದು ಹೈಕೋರ್ಟ್ ಒತ್ತಿ ಹೇಳಿದೆ.
ಇದೇ ವೇಳೆ, ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಅಪರಾಧಗಳಲ್ಲಿ ಅವರನ್ನು ಹೇಗೆ ವಶಕ್ಕೆ ಪಡೆಯಲಾಗಿದೆ ಎಂಬುದು ಆಶ್ಚರ್ಯ ಉಂಟು ಮಾಡಿದೆ. ದೂರುದಾರೆ ನ್ಯಾಯಾಂಗ ಅಧಿಕಾರಿ ಎಂಬ ಏಕೈಕ ಕಾರಣಕ್ಕೆ ಅವರು ನಿರ್ದೇಶಿಸಿದ ರೀತಿ ನಾಗರಿಕರನ್ನು ನಡೆಸಿಕೊಳ್ಳಬಹುದು ಎಂದರ್ಥವಲ್ಲ ಎಂದು ತೀಕ್ಷ್ಣವಾಗಿ ನುಡಿದಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಬೈಕ್ನಲ್ಲಿ ಇಬ್ಬರು ಮಾತ್ರ ತೆರಳುತ್ತಿದ್ದರು. ನ್ಯಾಯಾಧೀಶೆ ಗಾಯತ್ರಿ ಅವರ ಸೂಚನೆಯಂತೆ ಮೂರನೇ ವ್ಯಕ್ತಿಯಾದ 70 ವರ್ಷ ವೃದ್ಧರನ್ನೂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಆನಂತರ, ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಬೆಂಗಳೂರು ವಕೀಲರ ಸಂಘದ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರು, ನ್ಯಾಯಾಧೀಶೆ ಗಾಯತ್ರಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಕೋಲಾರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದರ ಜತೆಗೆ ನ್ಯಾಯಾಧೀಶೆ ಗಾಯತ್ರಿ ಅವರ ನಡವಳಿಕೆ ಕುರಿತು ವಕೀಲರು ನೀಡಿರುವ ಇತರ ದೂರುಗಳನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.






