ಮುಂಬಯಿಯಲ್ಲಿ ಕನ್ನಡ ಪತ್ರಕರ್ತರ ಸಂಭ್ರಮ: ಜಿ.ಎನ್.ಮೋಹನ್ಗೆ ʼರಾಷ್ಟ್ರೀಯ ಮಾಧ್ಯಮ ಪ್ರಶಸ್ತಿʼ ಪ್ರದಾನ

ಬೆಂಗಳೂರು/ಮುಂಬೈ 1: ‘ಏಕ ಭಾಷೆ, ಏಕ ಉಡುಪು, ಏಕ ಆಹಾರ ಸಂಸ್ಕೃತಿಯನ್ನು ರೂಪಿಸುವ ಪ್ರಯತ್ನಗಳಂತೆ, ದೇಶದಲ್ಲಿ ಸದ್ದಿಲ್ಲದೆ ಏಕ ಮಾಧ್ಯಮದ ಪರಿಕಲ್ಪನೆಯನ್ನು ರೂಪಿಸುವ ಯತ್ನವೂ ನಡೆಯುತ್ತಿದೆ’ ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಮುಂಬೈ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಮಾಧ್ಯಮವು ಸಮಾಜದ ಕನ್ನಡಿ ಮತ್ತು ಪ್ರಜಾಪ್ರಭುತ್ವದ ಕಾವಲುಗಾರನಾಗಿರಬೇಕು. ಆದರೆ ಅದು ಉದ್ಯಮದ ಸ್ವರೂಪವನ್ನು ಪಡೆದ ಕ್ಷಣದಿಂದಲೇ ಸಮಾಜವನ್ನು ಕಟ್ಟುವ ತನ್ನ ಮೂಲ ಜವಾಬ್ದಾರಿಯಿಂದ ದೂರ ಸರಿಯಲು ಆರಂಭಿಸಿತು. ಇಂದು ಮಾಧ್ಯಮವು ಹಣ ಮತ್ತು ಅಧಿಕಾರ ಎರಡನ್ನೂ ತಂದುಕೊಡುವ ಪ್ರಬಲ ಸಾಧನವಾಗಿ ರೂಪುಗೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ‘ಉದ್ಯೋಗ ಅರಸಿ ಮುಂಬಯಿಗೆ ಬಂದ ಕನ್ನಡಿಗರು ಈ ಮಹಾನಗರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮರಾಠಿ ನೆಲದಲ್ಲಿ ಕನ್ನಡ ಪತ್ರಕರ್ತರು ಪ್ರಾಮಾಣಿಕ ಪತ್ರಿಕೋದ್ಯಮದ ಮೂಲಕ ಕನ್ನಡದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ನೆಲದಲ್ಲಿ ಕನ್ನಡ ಪತ್ರಕರ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಕೆಯುಡಬ್ಲ್ಯೂಜೆ ಮುಂಬೈ ಘಟಕವನ್ನು ಬಲಿಷ್ಠ ಸಂಘಟನೆಯಾಗಿ ಬೆಳೆಸಿರುವುದು ನಿಜಕ್ಕೂ ಅಭಿನಂದನೀಯ ಎಂದು ಶ್ಲಾಘಿಸಿದರು.
ಮುಂಬಯಿಯಲ್ಲಿ ಕನ್ನಡ ಪತ್ರಕರ್ತರ ಸಂಘಟನೆಯನ್ನು ಕಟ್ಟಿಬೆಳೆಸಲು ಶ್ರಮಿಸಿದ ರೋನ್ಸ್ ಬಂಟ್ವಾಳ, ಶಿವು ಮೂಡಿಗೆರೆ, ದಯಾನಂದ ಸಾಲಿಯಾನ (ಸಾದಯ್ಯ) ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರ ಸೇವೆಯನ್ನು ಅವರು ವಿಶೇಷವಾಗಿ ಶ್ಲಾಘಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ಮುಂಬೈ ಘಟಕದ ಅಧ್ಯಕ್ಷ ಶಿವು ಮೂಡಿಗೆರೆ, ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ, ಸಂಘದ ಗೌರವ ಸಲಹೆಗಾರ ಐ.ಆರ್.ಶೆಟ್ಟಿ, ಡಾ.ಕಿರಣ್ ಶೆಟ್ಟಿ, ಕಪಸಂ ಅಧ್ಯಕ್ಷೆ ಡಾ. ಜಿ.ಪಿ.ಕುಸುಮ, ಸದಾರಾಮ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.






