ಮಹಿಳಾ ಉದ್ಯಮಿಗಳಿಗೆ ಜಾಗತಿಕ ಅವಕಾಶ ಪಡೆಯಲು ನೆರವು

ಬೆಂಗಳೂರು : ಮಹಿಳಾ ಉದ್ಯಮಿಗಳ ವೇದಿಕೆಯಾದ ‘ಉಬುಂಟು ಒಕ್ಕೂಟ’ವು ತನ್ನ ‘ಟುಗೆದರ್ ವಿ ಗ್ರೋ' ಕಾರ್ಯಕ್ರಮದ 5ನೇ ಆವೃತ್ತಿ ಸೆಪ್ಟೆಂಬರ್ 2ರಂದು ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಲಿದೆ.
‘ಬಿಸಿನೆಸ್ ಬಿಯಾಂಡ್ ಬಾರ್ಡರ್ಸ್'(ಗಡಿಗಳನ್ನು ಮೀರಿದ ಉದ್ಯಮ)ಎಂಬ ಪರಿಕಲ್ಪನೆಯಡಿಯಲ್ಲಿ ನಡೆಯುವ ಈ ಕಾರ್ಯಕ್ರಮವು ಮಹಿಳೆಯರು ಡಿಜಿಟಲ್ ವ್ಯಾಪಾರ, ಮಾರುಕಟ್ಟೆ ವಿಸ್ತರಣೆ ಮತ್ತು ಜಾಗತಿಕ ಉದ್ಯಮ ಅನ್ವೇಷಿಸಲು ನೆರವಾಗಲಿದೆ.
ರವಿವಾರ ಈ ಕುರಿತು ಮಾತನಾಡಿದ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಕೆ.ರತ್ನಪ್ರಭಾ ಮಾತನಾಡಿ, ‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಲು ಬಯಸುವ ಮಹಿಳಾ ಉದ್ಯಮಿಗಳಿಗೆ ಈ ವಿಚಾರ ಸಂಕಿರಣವು ಅತ್ಯುತ್ತಮ ಮಾರ್ಗದರ್ಶನ ನೀಡಲಿದೆ. ಡಿಜಿಟಲ್ ಕೌಶಲಗಳು ಮತ್ತು ಬಿಸಿನೆಸ್ ನೆಟ್ವರ್ಕ್ಗಳು ಸ್ಥಳೀಯ ವ್ಯಾಪಾರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತವೆ’ ಎಂದು ಹೇಳಿದರು.
ಸೆ.2ರಂದು ನಗರದ ಎಫ್ಕೆಸಿಸಿಐ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಬುಂಟು ಈಗ ಭಾರತದಾದ್ಯಂತ ಇರುವ ಮಹಿಳಾ ಉದ್ಯಮಿಗಳನ್ನು ಆಹ್ವಾನಿಸುತ್ತಿದೆ. ಭಾರತದಿಂದ ಆಚೆಗೆ ಉದ್ಯಮ ವಿಸ್ತರಿಸಲು ಡಿಜಿಟಲ್ ವೇದಿಕೆಗಳು, ಬಿಸಿನೆಸ್ ನೆಟ್ವರ್ಕ್ಗಳು ಮತ್ತು ಮಾರುಕಟ್ಟೆ ಅವಕಾಶಗಳ ಮಾರ್ಗಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯಕ್ರಮವು ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.
2019ರಲ್ಲಿ ಪ್ರಾರಂಭವಾದ ಉಬುಂಟು, 10ಸಂಘಟನೆಗಳಿಂದ ಈಗ 12ರಾಜ್ಯಗಳಲ್ಲಿ 70ಕ್ಕೂ ಹೆಚ್ಚು ಸಂಘಟನೆಗಳಿಗೆ ವಿಸ್ತರಿಸಿದ್ದು, 30 ಸಾವಿರಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳನ್ನು ಪ್ರತಿನಿಧಿಸುತ್ತಿದೆ. ಇದುವರೆಗೆ 54 ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಕ್ರಮಗಳ ಮೂಲಕ 5,400ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. 2027ರ ವೇಳೆಗೆ 10ಸಾವಿರ ಮತ್ತು 2030ರ ವೇಳೆಗೆ ಒಂದು ಲಕ್ಷ ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ ಎಂದು ರತ್ನಪ್ರಭಾ ತಿಳಿಸಿದರು.
ಇನ್ಸ್ಟಾಗ್ರಾಮ್, ಫೇಸ್ಬುಕ್, ಗೂಗಲ್, ಅಮೆಜಾನ್, ಸರಕಾರಿ ಇ-ಮಾರ್ಕೆಟ್ಪ್ಲೇಸ್ ಮತ್ತು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ನಂತಹ ವೇದಿಕೆಗಳನ್ನು ಬಳಸಿಕೊಳ್ಳಲು ತರಬೇತಿ ನೀಡಲಾಗುತ್ತಿದೆ. ಡಿಜಿಟಲ್ ಉಪಕರಣಗಳನ್ನು ಅಳವಡಿಸಿಕೊಂಡ ನಂತರ ಭಾಗವಹಿಸಿದ ಅನೇಕರ ಉದ್ಯಮವು 3ರಿಂದ 10ಪಟ್ಟು ಹೆಚ್ಚಾಗಿದೆ ಎಂದರು.
ಕೇಂದ್ರ ಎಂಎಸ್ಎಂಇ ಸಚಿವಾಲಯ, ಕರ್ನಾಟಕ ಸರಕಾರ, ಹಿಟಾಚಿ ಮತ್ತು ಬಿಸ್ಕ್ಫಾರ್ಮ್ ಸಂಸ್ಥೆಗಳ ಸಹಯೋಗದೊಂದಿಗೆ ಬೆಳೆಯುತ್ತಿರುವ ಉಬುಂಟುವಿನ 8ನೆ ವಾರ್ಷಿಕ ಸರ್ವ ಸದಸ್ಯರ ಸಭೆಯು ಕೆ. ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಭೆಯಲ್ಲಿ ಉಬುಂಟುವಿನ ಗೌರವ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ, ಖಜಾಂಚಿ ಲತಾ ಗಿರೀಶ್, ಕೆ-ಲ್ಯಾಂಪ್ ಸಹ-ಸಂಸ್ಥಾಪಕಿ ಸರ್ವಮಂಗಳ ಪಾಟೀಲ್, ‘ವಿ ಕ್ಯಾನ್' ಅಧ್ಯಕ್ಷೆ ಚಿತ್ರಾ ಭರತ್, ಸಿಂಧಿ ವುಮೆನ್ಸ್ ಅಸೋಸಿಯೇಷನ್ ಅಧ್ಯಕ್ಷೆ ಅನುಷ್ಕಾ ಜೈಸಿಂಘಾನಿ, ಕಲಬುರಗಿಯ ಕೆ-ಲ್ಯಾಂಪ್ ಅಧ್ಯಕ್ಷೆ ಕೆ.ನಳಿನಿ, ಮೈಸೂರಿನ ‘ವುಮನ್ಕ್ಯಾನ್' ಸಂಸ್ಥಾಪಕ ಅಧ್ಯಕ್ಷೆ ಡಾ.ರಚನಾ ಮಹೇಶ್, ಅಸೋಸಿಯೇಷನ್ ಆಫ್ ವುಮೆನ್ ಎಂಟರ್ ಪ್ರೋನರ್ಸ್ ಸಂಸ್ಥಾಪಕ ಅಧ್ಯಕ್ಷೆ ರಿಜಾ ಫಾತಿಮಾ, ಸ್ವಕೃತ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಮಾಣಿಕ್ ಅಜಯ್ ಪಟವರ್ಧನ್ ಸೇರಿದಂತೆ 25ಕ್ಕೂ ಹೆಚ್ಚು ಸದಸ್ಯರು ಆನ್ಲೈನ್ ಮೂಲಕ ಭಾಗವಹಿಸಿದ್ದರು.






