ಸಾಹಿತ್ಯ ಪರಿಷತ್ತು ಕನ್ನಡಿಗರಿಗೆ ಸೇರಿದ್ದು: ಪ್ರೊ.ರಾಜೇಂದ್ರ ಚೆನ್ನಿ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಅದರ ಅಧ್ಯಕ್ಷರದ್ದೊ ಅಥವಾ ಸರಕಾರದ್ದೊ ಅಲ್ಲ, ಅದು ಕನ್ನಡಿಗರಿಗೆ ಸೇರಿದ್ದು. ಆದುದರಿಂದ ಅದರ ಸ್ವಾಯತ್ತತೆ ಉಳಿಸಬೇಕು ಎಂದು ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದ್ದಾರೆ.
ರವಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಕನ್ನಡ ಸಾಹಿತ್ಯ ಪರಿಷತ್ತು-ಸಮಸ್ಯೆ, ಸವಾಲು, ಸಂವಾದ’ ಮುನ್ನೋಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಸಾಪದಲ್ಲಿ ನಡೆದಿರುವ ಭ್ರಷ್ಟಾಚಾರ, ಹಣದ ಅವ್ಯವಹಾರದ ಬಗ್ಗೆ ತನಿಖೆ ಆಗಬೇಕು. ಅಧ್ಯಕ್ಷರ ಅಧಿಕಾರ ಕಡಿಮೆ ಮಾಡಬೇಕು. ಸಂವಿಧಾನದ ಮೂಲಸಂರಚನೆ ತಿದ್ದುಪಡಿ ಮಾಡಲಾಗದು. ಅಂತೆಯೇ ಪರಿಷತ್ತಿನ ಬೈಲಾದ ಮೂಲ ಸ್ವರೂಪದ ತಿದ್ದುಪಡಿ ಎಂದಿಗೂ ನಡೆಯಬಾರದು ಎಂದರು.
ಸಾರ್ವಜನಿಕ ಚರ್ಚೆ ನಡೆಸಿ ಪರಿಷತ್ತಿನ ಮೂಲ ಸ್ವರೂಪ ಏನೆಂಬುದನ್ನು ನಿರ್ಧರಿಸಬೇಕು. ಮತ ಚಲಾಯಿಸಿ ಬದಲಿಸುವ ಅವಕಾಶವನ್ನು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕೊಡಬಾರದು. ಕನ್ನಡಕ್ಕಾಗಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಯಾದ ಪರಿಷತ್ತು ಜೀವಶಕ್ತಿ ಕಳೆದುಕೊಂಡು ಗೆದ್ದಲುಗಟ್ಟುತ್ತಿದೆ. ಆರ್ಥಿಕ ಬೆಂಬಲ ಕೊಡುತ್ತದೆಂದು ಸರಕಾರದ ಗುಲಾಮ ಆಗುವುದು ಬೇಕಿಲ್ಲ. ಪರಿಷತ್ತಿನ ಸಂಸ್ಥಾಪಕರ ಮೂಲ ಆಶಯದ ವಿರುದ್ಧವಾಗಿ ಸರಕಾರವು ನಡೆದುಕೊಳ್ಳಬಾರದು ಎಂದು ಅವರು ತಿಳಿಸಿದರು.
ಎಲ್ಲ ಸಾಂಸ್ಕೃತಿಕ ಸಂಸ್ಥೆಗಳು ಅವಸಾನದ ಕಾಲದಲ್ಲಿವೆ. ಕಸಾಪ ಸ್ವಾಯತ್ತತೆ ಎಲ್ಲಿಗೆ ಹೋಗಿದೆ. ಅದು ಸರ್ಕಾರಿ ಸಂಸ್ಥೆಯಾಗಿ ಕಾಣುತ್ತಿದೆ. ಯಾವುದೇ ಪಕ್ಷದ ಸರಕಾರ ಬಂದರೂ ರಾಜಕಾರಣದ ವೇದಿಕೆ ಆಗುತ್ತಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲೂ ಹೀಗೇ ಆಗಿತ್ತು. ಮಹೇಶ್ ಜೋಶಿ ಅವರು ಪರಮಾಧಿಕಾರಕ್ಕಾಗಿ ಪರಿಷತ್ತಿನ ಬೈಲಾ ತಿದ್ದುಪಡಿ ಮಾಡಿದರು. ಅದು ಅಧ್ಯಕ್ಷರ ಪ್ರಣಾಳಿಕೆಯಾಯಿತು. ಅಸ್ತಿತ್ವದಲ್ಲಿದ್ದ ಅಧಿಕಾರದ ವಿಕೇಂದ್ರೀಕರಣ ಮಾಯವಾಗಿ ವ್ಯಕ್ತಿ ಕೇಂದ್ರಿತವಾಯಿತು. ಆದುದದರಿಂದ ಭ್ರಷ್ಟಾಚಾರವೂ ನಡೆಯಿತು ಎಂದು ರಾಜೇಂದ್ರ ಚೆನ್ನಿ ಹೇಳಿದರು.
ಸಾಂಸ್ಕೃತಿಕ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ ಮಾತನಾಡಿ, ಕಸಾಪ ಆಡಳಿತಾತ್ಮಕ ವೆಚ್ಚಗಳಿಗೆ ನೀಡುವ ಧನಸಹಾಯವನ್ನು ಸರಕಾರವು ನಿಲ್ಲಿಸಬೇಕು. ಆಗ, ವ್ಯವಸ್ಥೆ ತಾನಾಗಿಯೇ ಸರಿಹೋಗಲಿದೆ. ಸಾಹಿತ್ಯ ಪರಿಷತ್ತು ಸಾರ್ವಜನಿಕ ಸಂಸ್ಥೆ. ಕೆಲವೇ ಖಾಸಗಿ ಗುಂಪುಗಳ ಸಂಸ್ಥೆಯಲ್ಲ. ಧನಸಹಾಯದ ಮೂಲಕ ಪರಿಷತ್ತಿನ ಮೇಲೆ ಅಂಕುಶ ಹಾಕುವ ಸರಕಾರದ ಹಸ್ತಕ್ಷೇಪ ಸಲ್ಲದು. ಹಾಗೆಯೇ, ಅಧ್ಯಕ್ಷರು, ಕಾರ್ಯಕಾರಿ ಸಮಿತಿಯವರು ಚಾಲಕರಷ್ಟೇ ಮಾಲಕರಾಗಬಾರದು. ಅಧ್ಯಕ್ಷ ಸರಕಾರದ ಸಚಿವನಂತೆ ಆಗಬಾರದು ಎಂದು ಹೇಳಿದರು.
ಕನ್ನಡದ ಭಾಷಿಕ ಸಮುದಾಯಗಳ ಹಿತಾಸಕ್ತಿಯನ್ನು ಪರಿಷತ್ತು ಕಾಯಬೇಕು. ರಾಜ್ಯದ ಹಿತಾಸಕ್ತಿಗಳಿಗೆ ದನಿಯಾಗುವ ಪ್ರಾತಿನಿಧಿಕ ಸಂಸ್ಥೆಯಾಗಬೇಕಿದೆ. ಬೈಲಾ ನಿಬಂಧನೆಗಳ ತಿದ್ದುಪಡಿ ಮಾಡಲು ನಿಯಂತ್ರಣ ಇರಬೇಕು ಎಂದು ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಲೇಖಕಿ ಡಾ.ವಸುಂಧರಾ ಭೂಪತಿ ಮಾತನಾಡಿ, 112 ವರ್ಷದ ಪರಿಷತ್ತಿನ ಇತಿಹಾಸದಲ್ಲಿ ನೂರು ವರ್ಷ ಪರಿಷತ್ತು ಮೂಲ ಆಶಯದಂತೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಿತು. ಇತ್ತೀಚೆಗೆ ಅಧ್ಯಕ್ಷ ಸ್ಥಾನವು ಅಧಿಕಾರದ ದರ್ಪಕ್ಕೆ ಬಳಕೆಯಾಗಿದೆ. ಚುನಾವಣೆಗಳಲ್ಲಿ ಪಕ್ಷ ರಾಜಕಾರಣದ ಪ್ರವೇಶ ಆಗಿದೆ. ಮಹಿಳೆಯರು, ದಲಿತರು, ಹಿಂದುಳಿದವರು ಅಧ್ಯಕ್ಷರಾಗುವ ಅವಕಾಶ ಇಲ್ಲವಾಗಿದೆ. ಹೀಗಾಗಿ, ಬೈಲಾದಲ್ಲಿ ತಿದ್ದುಪಡಿಯಾಗಿ ಸರದಿಯಾಗಿ ಮೀಸಲು ಅವಕಾಶ ಕೊಡಬೇಕು ಎಂದು ನುಡಿದರು.
ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಡಾ. ಕರೀಗೌಡ ಬೀಚನಹಳ್ಳಿ, ಡಾ.ವಸುಂಧರಾ ಭೂಪತಿ, ಡಾ.ಎಚ್.ಎಲ್.ಪುಷ್ಪಾ, ಆರ್.ಜೆ.ಹಳ್ಳಿ ನಾಗರಾಜ್, ಪತ್ರಕರ್ತರಾದ ನಂಜುಂಡಪ್ಪ ವಿ., ಪಾರ್ವತೀಶ ಬಿಳಿದಾಳೆ, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಹೋರಾಟಗಾರ ಸಿ.ಕೆ. ರಾಮೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.






