ಪ್ರೊ.ರವಿವರ್ಮ ಕುಮಾರ್ ಸಹಿತ 15 ಮಂದಿಗೆ ‘ಬಸವ ಪುರಸ್ಕಾರ’

ಪ್ರೊ.ರವಿವರ್ಮ ಕುಮಾರ್
ಬೆಂಗಳೂರು : ಬಸವ ಪರಿಷತ್ ವತಿಯಿಂದ ನೀಡುವ ‘ಬಸವ ಪುರಸ್ಕಾರ-2025’ ಪ್ರಶಸ್ತಿಗೆ ಮಾಜಿ ಅಡ್ವೊಕೇಟ್ ಜನರಲ್, ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್, ನಟಿ ಉಮಾಶ್ರೀ, ಮಾಜಿ ಸಚಿವ ಎಸ್.ಆರ್.ಪಾಟೀಲ್ ಸಹಿತ 15 ಮಂದಿ ಸಾಧಕರನ್ನು ಆಯ್ಕೆ ಮಾಡಿದ್ದು, ಆ.9ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ನ ಅಧ್ಯಕ್ಷೆ ರೇಖಾ ಮಹಾಂತೇಶ ಹಿರೇಮಠ ತಿಳಿಸಿದ್ದಾರೆ.
ಬುಧವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸತತ ನಾಲ್ಕು ವರ್ಷಗಳಿಂದ ‘ಬಸವ ಪುರಸ್ಕಾರ’ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಬಾರಿಯೂ ಪ್ರಶಸ್ತಿಗೆ 15 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದರು.
ನ್ಯಾಯಾಂಗ ವಿಭಾಗದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಚಲನಚಿತ್ರ ವಿಭಾಗದಲ್ಲಿ ನಟಿ ಉಮಾಶ್ರೀ, ಪರಿಸರ ರಕ್ಷಣೆ ವಿಭಾಗದಲ್ಲಿ ಪರಿಸರವಾದಿ ಅಲ್ಮಿತ್ರಾ ಪಟೇಲ್, ಸಹಕಾರ ಮಹಿಳಾ ಸಬಲೀಕರಣ ವಿಭಾಗದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಎ.ಎಸ್. ಕಿರಣ್ ಕುಮಾರ್, ಸಮಾಜಸೇವೆ ಕ್ಷೇತ್ರದಲ್ಲಿ ಬಸವರಾಜ ಎಸ್.ದೇಶಮುಖ, ಮಾನಂದಿ ರಮೇಶ್, ಡಾ.ಎಸ್.ಪಿ. ದಯಾನಂದ್, ಡಾ.ವಿ.ಎಸ್.ವಿ.ಪ್ರಸಾದ್, ರವಿಕುಮಾರ ಸ್ವಾಮಿ ಹಿರೇಮಠ, ಬಸವರಾಜ ಧನ್ನೂರ, ಶಿಕ್ಷಣ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ್, ಶಾಮನೂರು ಎಸ್.ಗಣೇಶ್, ಸರಕಾರಿ ಸೇವೆ ವಿಭಾಗದಲ್ಲಿ ವಿಜಯಪುರದ ಡಿವೈಎಸ್ಪಿ ಬಸವರಾಜ ಯಲಿಗಾರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಆ.9ರಂದು ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿವೃತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ್ ಅವರನ್ನು ಅಭಿನಂದಿಸಲಾಗುವುದು ಎಂದು ಅವರು ತಿಳಿಸಿದರು. ಪರಿಷತ್ನ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಎಸ್.ಹಿರೇಮಠ ಉಪಸ್ಥಿತರಿದ್ದರು.







