ವಿಜಯಪುರದಲ್ಲಿ 17 ಸಾವಿರ ಕೋಟಿ ರೂ.ಹೂಡಿಕೆ ಪ್ರಸ್ತಾಪ : ಎಂಬಿ ಪಾಟೀಲ್

ಬೆಂಗಳೂರು : ತಂಪು ಪಾನೀಯ, ಧಾನ್ಯ ಸಂಸ್ಕರಣೆ, ಪವನ ವಿದ್ಯುತ್ ಬ್ಲೇಡ್ ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯದ ಉದ್ಯಮ ಸಮೂಹಗಳು ವಿಜಯಪುರ ಜಿಲ್ಲೆ ಒಂದರಲ್ಲಿಯೇ ಒಟ್ಟು 17 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲು ಮುಂದೆ ಬಂದಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸೋಮವಾರ ನಗರದ ಖನಿಜ ಭವನದಲ್ಲಿ ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಉದ್ದೇಶಿತ ಹೂಡಿಕೆ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ರಿಲಯನ್ಸ್ ಸಮೂಹದ ಭಾಗವಾಗಿರುವ ಕ್ಯಾಂಪಾಕೋಲಾದ ತಂಪು ಪಾನೀಯ ಮತ್ತು ಬಾಟ್ಲಿಂಗ್ ಘಟಕದ ಸ್ಥಾಪನೆಗಾಗಿ 1,622 ಕೋಟಿ ರೂ. ಮೊತ್ತದ ಹೂಡಿಕೆಗೆ ಅನುಮೋದನೆ ಕೊಡಲಾಗಿದೆ ಎಂದು ತಿಳಿಸಿದರು.
ತಂಪು ಪಾನೀಯ, ಕುಡಿಯುವ ನೀರು ಮತ್ತು ಬಾಟ್ಲಿಂಗ್ ಚಟುವಟಿಕೆಗಳಿಗೆ ಕ್ಯಾಂಪಾಕೋಲಾ ಹೂಡಿಕೆಯಿಂದ 1,200 ಜನರಿಗೆ ನೇರ ಉದ್ಯೋಗ ಸಿಗಲಿದೆ. ಈ ಯೋಜನೆಗಾಗಿ ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದ 2ನೆ ಹಂತದ ವ್ಯಾಪ್ತಿಯಲ್ಲಿ 100 ಎಕರೆ ನೀಡಲು ಅಧಿಕೃತ ಆದೇಶ ಕೂಡ ಆಗಿದೆ ಎಂದು ಅವರು ವಿವರಿಸಿದರು.
ತೊಗರಿ ಸೇರಿದಂತೆ ಇತರ ಧಾನ್ಯ ಸಂಸ್ಕರಣೆಗೆ ಹೆಸರಾಗಿರುವ ವಿಂಗ್ಸ್ ವಿಟೆರಾ ಕಂಪೆನಿಯು 350 ಕೋಟಿ ರೂ, ಪವನ ವಿದ್ಯುತ್ ಕ್ಷೇತ್ರದಲ್ಲಿ ಬೇಕಾಗುವ ದೈತ್ಯ ಅಲಗುಗಳ (ಬ್ಲೇಡ್) ತಯಾರಿಕೆಗೆ ಹೆಸರಾಗಿರುವ ಸುಜ್ಲಾನ್ ಕಂಪೆನಿ 360 ಕೋಟಿ ರೂ. ಹೂಡಿಕೆ ಮಾಡಲಿದೆ. ಅಲ್ಲದೆ, ಮೆಲ್ಸ್ಟಾರ್ ಕಂಪೆನಿಯು ವಿಜಯಪುರದಲ್ಲಿ ಸದ್ಯದಲ್ಲೇ ವಿಮಾನ ನಿಲ್ದಾಣ ಆರಂಭವಾಗಲಿರುವುದನ್ನು ಪರಿಗಣಿಸಿ ವಿಮಾನ ಹಾರಾಟ ತರಬೇತಿ ಶಾಲೆ ಪ್ರಾರಂಭಿಸಲು ಮುಂದೆ ಬಂದಿದೆ ಎಂದು ಅವರು ಉಲ್ಲೇಖಿಸಿದರು.
ರಾಜ್ಯದಲ್ಲಿ ಹೂಡಿಕೆ: ಫಾರ್ಮಾ ಕ್ಷೇತ್ರದಲ್ಲಿ ಜೆನ್ಫೋಲ್ಡ್ ಬಯೋಸೈನ್ಸಸ್ 490 ಕೋಟಿ ರೂ., ಬಣ್ಣ ಮತ್ತು ಅಡ್ಹೆಸೀವ್ ತಯಾರಿಸುವ ಆಸ್ಟ್ರಾಲ್ ಕೋಟಿಂಗ್ಸ್ 174.79 ಕೋಟಿ ರೂ. ಮತ್ತು ವಿಪ್ರೊ ಹೈಡ್ರಾಲಿಕ್ಸ್ ಕಂಪೆನಿ 499 ಕೋಟಿ ರೂ. ಬಂಡವಾಳವನ್ನು ರಾಜ್ಯದಲ್ಲಿ ಹೂಡಲಿದ್ದು, ಇದಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಜೆನ್ಫೋಲ್ಡ್ ಕಂಪೆನಿಯು ಫಾರ್ಮಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಿಣ್ವಗಳ (ಎಂಝೈಮ್ಸ್) ತಯಾರಿಕಾ ಘಟಕ ಆರಂಭಿಸಲಿದ್ದು, ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 60 ಎಕರೆ ಜಮೀನು ನೀಡಲಾಗಿದೆ. ಇದರಿಂದ 226 ಉದ್ಯೋಗಗಳು ಸೃಷ್ಟಿಯಾಗಲಿವೆ. ಬಣ್ಣ ಮತ್ತು ಅಡ್ಹೆಸೀವ್ ತಯಾರಿಸುವ ಆಸ್ಟ್ರಾಲ್ ಕೋಟಿಂಗ್ಸ್ ಕಂಪೆನಿಯು ವೇಮಗಲ್ನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಿದ್ದು, ಇದಕ್ಕಾಗಿ 20 ಎಕರೆ ಕೊಡಲಾಗಿದೆ. ವಿಪ್ರೋ ಹೈಡ್ರಾಲಿಕ್ಸ್ ತಾಮ್ರದ ಲ್ಯಾಮಿನೇಟ್ ತಯಾರಿಕಾ ಘಟಕ ಆರಂಭಿಸಲಿದ್ದು, ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿಯಲ್ಲಿ 19 ಎಕರೆ ಭೂಮಿ ಕೊಡಲಾಗಿದೆ. ಇದರಿಂದ 365 ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎಂ.ಮಹೇಶ್, ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಸೇರಿದಂತೆ ಪ್ರಮುಖರಿದ್ದರು.







