ಜಿಎಎಫ್ಎಕ್ಸ್ 2024 : ʼರಾಜ್ಯ ಶಿಕ್ಷಣ ನೀತಿ’ ವಿದ್ಯಾರ್ಥಿಗಳಲ್ಲಿ ಕೌಶಲ್ಯವಾಗಿ ಸೃಜನಶೀಲತೆ ಬೆಳೆಸಬೇಕು: ಎಂ.ಸಿ.ಸುಧಾಕರ್
ಬೆಂಗಳೂರು: ಅನಿಮೇಷನ್, ವಿಶ್ಯುವಲ್ ಎಫೆಕ್ಟ್, ಗೇಮಿಂಗ್ ಹಾಗೂ ಕಾಮಿಕ್ (ಎವಿಜಿಸಿ) ಕ್ಷೇತ್ರದಲ್ಲಿ ಯಶಸ್ವಿಯಾಗಲು ಕೃತಕ ಬುದ್ಧಿಮತ್ತೆ(ಎಐ)ಯಂತಹ ತಂತ್ರಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಬೆಳೆಸಿ ಪ್ರೋತ್ಸಾಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಐಟಿ-ಬಿಟಿ ಇಲಾಖೆ ಆಯೋಜಿಸಿರುವ ಜಿಎಎಫ್ಎಕ್ಸ್ 2024ರ ಐದನೇ ಆವೃತ್ತಿಯಲ್ಲಿ ಮಂಗಳವಾರ ನಡೆದ ‘ಎವಿಜಿಸಿನಲ್ಲಿ ಶಿಕ್ಷಣದ ಭವಿಷ್ಯ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಸೃಜನಶೀಲತೆಯ ಕೌಶಲ್ಯವನ್ನು ಬೆಳೆಸುವುದನ್ನು ರಾಜ್ಯ ಶಿಕ್ಷಣ ನೀತಿಯಲ್ಲಿ ಅಳವಡಿಸಬೇಕು ಎಂದು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ದೇಶವು ವಿಷಯ ರಚನೆ, ಶಿಲ್ಪಕಲೆ, ಚಿತ್ರಕಲೆ ಮತ್ತು ಉದ್ಯಮಕ್ಕೆ ಅಗತ್ಯವಿರುವ ಇತರ ಸೃಜನಶೀಲ ಕಲೆಗಳಲ್ಲಿ ಉತ್ತಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಿದರೆ ಮಾತ್ರ ಎವಿಜಿಸಿ ವಲಯವು 2025ರ ವೇಳೆಗೆ 26 ಶತಕೋಟಿ ಡಾಲರ್ ಆದಾಯವನ್ನು ತಲುಪುತ್ತದೆ ಎಂದು ಹೇಳಿದರು.
ನಮ್ಮಲ್ಲಿ ಉತ್ಕೃಷ್ಟ ಚಿಂತನೆಯ ಉದ್ಯೋಗಿಗಳಿದ್ದಾರೆ ಮತ್ತು ಭಾರತ ವಿಶ್ವದಲ್ಲಿ ಸೃಷ್ಟಿಯ ಮಂಚೂಣಿಯಲ್ಲಿರುವಂತಾಗಬೇಕು. ನಾವು ಕಥೆಗಳನ್ನು ಸೃಷ್ಟಿಸುವ ಮತ್ತು ಜಗತ್ತಿಗೆ ಕಥೆಗಳನ್ನು ಹೇಳುವ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಶ್ರೇಣಿ 2 ಮತ್ತು 3 ನಗರಗಳಲ್ಲಿ ಎವಿಜಿಸಿ ಪ್ರತಿಭೆಯನ್ನು ಅಭಿವೃದ್ಧಿಪಡಿಸುವಂತಹ ವಾತಾವರಣ ನಿರ್ಮಿಸಲು ರಾಜ್ಯ ಸರಕಾರ ಉದ್ದೇಶಿಸಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮ ತಜ್ಞರಾದ ಆಶಿಶ್ ಕುಲಕರ್ಣಿ, ಅರುಳ್ ಮೂರ್ತಿ, ಸಂಸ್ಥಾಪಕ ಡಾವಿನ್ಸಿ, ಮಾಧ್ಯಮ ಕಾಲೇಜು ಮತ್ತು ಆಪ್ಟೆಕ್ನ ಹಿರಿಯ ಉಪಾಧ್ಯಕ್ಷ ಈಸೋ ಥಂಪಿ ಮ್ಯಾಥ್ಯೂ, ಎವಿಜಿಸಿ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲ ಕೌಶಲ್ಯಗಳನ್ನು ಬೆಳೆಸುವತ್ತ ಗಮನಹರಿಸಬೇಕು ಎಂದು ಒತ್ತಿ ಹೇಳಿದರು. ಜೊತೆಗೆ, ಡಿಜಿಟಲ್ ಉಪಕರಣಗಳನ್ನು ಬಳಸುವ ಮೊದಲು ಡಿಜಿಟಲ್ ಯುಗದಲ್ಲಿ ಮೂಲಭೂತ ಅಂಶಗಳನ್ನು ಬಿಡದೇ ಡಿಜಿಟಲ್ ಉಪಕರಣಗಳ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆ ಮಾನವ ಪ್ರತಿಭೆಯನ್ನು ಬದಲಿಸಲು ಸಾಧ್ಯವಿಲ್ಲ, ಬದಲಿಗೆ ವಿದ್ಯಾರ್ಥಿಗಳ ಸೃಜನಶೀಲ ಕೌಶಲ್ಯಗಳನ್ನು ಹೆಚ್ಚಿಸಲು ಬಳಸಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೈನ್ ಸ್ಕೂಲ್ ಆಫ್ ಮೀಡಿಯಾದ ಸಿಇಒ ಸತೀಶ್ ನಾರಾಯಣನ್ ಮತ್ತು ಪರ್ಲ್ ಅಕಾಡೆಮಿಯ ಡೀನ್ ಸಿ.ಬಿ.ಅರುಣ್ ಕುಮಾರ್, ಅರೆನಾ ಅನಿಮೇಷನ್ನ ನಿರ್ದೇಶಕ ಬಿ.ಎಸ್.ಶ್ರೀನಿವಾಸ್ ಸೇರಿದಂತೆ ಇತರ ಭಾಷಣಕಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.