ರಾಜ್ಯದಲ್ಲಿ ಬಿಸಿಗಾಳಿ ಹೆಚ್ಚಳ: ‘ಕರ್ನಾಟಕ ಶಾಖ ಕ್ರಿಯಾ ಯೋಜನೆ-2026’ ಅನುಷ್ಟಾನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಮೇ 7: ಕರ್ನಾಟಕದಲ್ಲಿ ಬಿಸಿಗಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ‘ಕರ್ನಾಟಕ ಶಾಖ ಕ್ರಿಯಾ ಯೋಜನೆ 2026’ ಅನ್ನು ರೂಪಿಸಿ, ಕಾರ್ಯಗತಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಇಂಧನ ಮತ್ತು ಶಿಕ್ಷಣ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್ ಮೋಹನದಾಸ್ ಹೆಡ್ಗೆ ಅವರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಿದ್ದ ‘ಕರ್ನಾಟಕ ಹೀಟ್ವೇವ್ ರೆಸಿಲಿಯನ್ಸ್ ಅಂಡ್ ಇಂಟಿಗ್ರೇಟೆಡ್ ಹೀಟ್ ಆಕ್ಷನ್ ಮ್ಯಾನೇಜ್ಮೆಂಟ್ ಫ್ರೇಮ್ವರ್ಕ್ 2026’ ಎಂಬ ಪ್ರಸ್ತಾವವಕ್ಕೆ ಉತ್ತರಿಸಿರುವ ಅವರು, ರಾಜ್ಯಾದ್ಯಂತ ಬಿಸಿ ಗಾಳಿಯ ಪರಿಸ್ಥಿತಿಗೆ ಅನುಗುಣವಾಗಿ ಪೂರ್ವಭಾವಿ ಮತ್ತು ಸಂಘಟಿತ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಲಾಗಿದೆ ಎಂದಿದ್ದಾರೆ.
ವೃದ್ದರು, ಮಕ್ಕಳು ಮತ್ತು ಗರ್ಭಿಣಿಯರು, ಹೊರಾಂಗಣ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರುವ ಸೂಚನೆ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಕಚೇರಿ ಮತ್ತು ಶಾಲಾ ಸಮಯದ ಮಾರ್ಪಾಡು ಮಾಡಲಾಗಿದೆ. ಟ್ರಾಫಿಕ್ ಜಂಕ್ಷನ್ಗಳಲ್ಲಿ ನೆರಳಿನ ಪ್ರದೇಶಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ. ಶಾಖದ ಹೊಡೆತಕ್ಕೆ ಒಳಗಾದವರಿಗೆ ಆಸ್ಪತ್ರೆಯ ಬೆಡ್ಗಳನ್ನು ಮೀಸಲಿಡಲಾಗಿದೆ. ಬಸ್ ನಿಲ್ದಾಣದ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.






