ಕುವೆಂಪು ರಚಿತ ನಾಡಗೀತೆಗೆ ನೂರರ ಸಂಭ್ರಮ; ಮೈಸೂರು ವಿವಿ ಆವರಣದಲ್ಲಿ ಸಾವಿರಾರು ಸ್ವರಗಳ ಸಂಭ್ರಮ

ಮೈಸೂರು, ಸೆ.23 : ಕುವೆಂಪು ರಚಿತ ನಾಡಗೀತೆಗೆ ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ರಾಜ್ಯ ಸರಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೊತೆಗೆ ವಿಶ್ವವಿಖ್ಯಾತಿ ಪಡೆದ ಏಳೆಂಟು ಮಂದಿ ಕವಿಗಳನ್ನು ಕರೆಯಿಸಿ ದಸರಾ ಕವಿಗೋಷ್ಠಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಖ್ಯಾತ ಚಿಂತಕ, ಲೇಖಕ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ.
ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಮಂಗಳವಾರ ನಾಡಗೀತೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಗೀತೆಗೆ ನೂರು ವರ್ಷ ತುಂಬಿರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿಯವರು ಮತ್ತು ಮುಖ್ಯಮಂತ್ರಿ ಚರ್ಚಿಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಲ್ಲದೆ ದಸರಾ ಸಂದರ್ಭದಲ್ಲಿ ನಾವು ವಿಶ್ವವಿಖ್ಯಾತ ಕವಿಗೋಷ್ಠಿಯನ್ನು ಆಯೋಜಿಸಿ ಐದಾರು ಭಾಷಿಗ ಕವಿಗಳನ್ನು ಆಹ್ವಾನಿಸುತ್ತೇವೆ. ಆದರೆ ಬೇರೆ ಬೇರೆ ದೇಶದ ಏಳೆಂಟು ಕವಿಗಳನ್ನು ಆಹ್ವಾನಿಸಿ ವಿಶ್ವಮಟ್ಟದ ಕವಿಗೋಷ್ಠಿ ಆಯೋಜಿಸಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ನಾಡಗೀತೆಗೆ ಸಂಬಂಧಿಸಿದಂತೆ ಸಾಕಷ್ಟು ವಾಗ್ವಾದ, ಭಿನ್ನಾಭಿಪ್ರಾಯಗಳಿವೆ. ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೂ ಇರುತ್ತವೆಯೋ ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿದ್ದಾರೆ. ಕೆಲವರು ಈ ಹಾಡಿನಲ್ಲಿ ಮಹಿಳೆಯರ ಹೆಸರು ಬರಬೇಕು ಎಂದರೆ, ಮತ್ತೆ ಕೆಲವರು ಬುದ್ಧರ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ. ಕೇಳಿ ಬಂದ ಪದಗಳನ್ನೆಲ್ಲಾ ಸೇರಿಸುತ್ತ ಹೋದರೆ ಅದು ಸ್ತುತಿ ಗೀತೆಯಾಗುತ್ತದೆ ಎಂದರು.
ಕುವೆಂಪು ಅವರು ಜೈನರುದ್ಯಾನ ಎಂದು ಬಳಸುವ ಮುನ್ನ ಬೌದ್ಧರುದ್ಯಾನ ಎಂದು ಬಳಸಿದ್ದರು. ಆದರೆ 70ರ ದಶಕದಲ್ಲಿ ಆ ಶಬ್ದವನ್ನು ಹಾಡಿನಿಂದ ಯಾವ ಕಾರಣಕ್ಕೆ ಕೈಬಿಟ್ಟರೋ ಗೊತ್ತಿಲ್ಲ. ಆದರೆ ಆ ಶಬ್ದವನ್ನು ಇದರ ಜತೆಗೆ ಜೋಡಿಸುವುದರಿಂದ ನಾಡಿಗೂ ಗೌರವವಾಗುತ್ತದೆ ಮತ್ತು ನಾಡಿನ ಸಂಕೇತಕ್ಕೆ ಸೂಚಕವಾಗಿ ನಿಂತುಕೊಳ್ಳುತ್ತೆ. ಹೀಗಾಗಿ ಬೌದ್ಧ ಎನ್ನುವ ಹೆಸರನ್ನು ಸೇರ್ಪಡೆ ಮಾಡುವುದರಿಂದ ಹಾಡಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಬೌದ್ಧ ಹೆಸರನ್ನು ನಾಡಗೀತೆಗೆ ಸೆರ್ಪಡೆ ಮಾಡಬೇಕು ಅವರು ಮನವಿ ಮಾಡಿದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಮೈಸೂರು ದಸರಾ ಕನ್ನಡ ನಾಡಿನ ಹೆಮ್ಮೆಯ ಸಂಕೇತ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತರುವ ಈ ಹಬ್ಬಕ್ಕೆ ವಿಶೇಷವಾದ ಇತಿಹಾಸವಿದೆ. ಇದರ ಜತೆಗೆ ದೀಪಾಲಂಕಾರ, ಜಂಬೂ ಸವಾರಿ, ಫಲಪುಷ್ಪಪ್ರದರ್ಶನ ದಸರಾ ಕವಿಗೋಷ್ಠಿಗೆ ಮತ್ತಷ್ಟು ಮೆರಗನ್ನು ನೀಡಿದೆ. ಕನ್ನಡ ನಾಡಗೀತೆಗೆ ನೂರು ವರ್ಷ ತುಂಬಿರುವುದು ಕನ್ನಡ ನಾಡಿಗೆ ಸಂಭ್ರಮದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಕವಿ ಕವಿರಾಜ್, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ, ಡಿ. ರವಿಶಂಕರ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಸವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ, ಎಡಿಸಿ ಡಾ.ಶಿವರಾಜ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಇತರರು ಉಪಸ್ಥಿತರಿದ್ದರು.







