ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿ ಬಿಜೆಪಿಯಿಂದ ರಸ್ತೆ ತಡೆ

ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚದೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದ ಎಂದು ಆರೋಪಿಸಿ ಮಹಾಲಕ್ಷ್ಮೀ ಲೇಔಟ್ ನ ಕಂಠೀರವ ಸ್ಟುಡಿಯೋ ಬಳಿ ಬಿಜೆಪಿ ವತಿಯಿಂದ ಬುಧವಾರ ರಸ್ತೆ ತಡೆ ನಡೆಸಲಾಯಿತು.
ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ರಾಜ್ಯ ಮಾಧ್ಯಮ ಪ್ರಕೋಷ್ಠದ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ ಮತ್ತು ಪಕ್ಷದ ಕಾರ್ಯರ್ತರು ಉಪಸ್ಥಿತರಿದ್ದರು.
ನೆ.ಲ. ನರೇಂದ್ರಬಾಬು ಮಾತನಾಡಿ, ನಗರದಲ್ಲಿ 10 ಸಾವಿರ ಗುಂಡಿಗಳಿವೆ ಎಂದು ಡಿಸಿಎಂ ಶಿವಕುಮಾರ್ ಅವರೇ ಹೇಳಿದ್ದಾರೆ. ಕೇವಲ ಹೇಳಿಕೆಗಷ್ಟೇ ಗುಂಡಿ ಮುಚ್ಚುವ ಕಾರ್ಯ ಸೀಮಿತವಾಗದಿರಲಿ. ಅಧಿಕಾರಿಗಳು ಮತ್ತು ಇಂಜಿನಿಯರ್ ಗಳು ಎ.ಸಿ. ರೂಮಿನಿಂದ ಹೊರಬಂದು ಜನರ ಪ್ರಾಣ ಉಳಿಸಬೇಕೆಂದು ಆಗ್ರಹಿಸಿದರು.
ಎಸ್. ಹರೀಶ್ ಮಾತನಾಡಿ, 28 ಕ್ಷೇತ್ರಗಳಲ್ಲಿ ಗುಂಡಿ ಮುಚ್ಚಲು ಕಾಂಗ್ರೆಸ್ ಸರಕಾರದ ಬಳಿ ದುಡ್ಡಿಲ್ಲ. ಗುಂಡಿ ಮುಚ್ಚಲು 1100 ಕೋಟಿ ರೂ. ಬಿಡುಗಡೆ ಮಾಡಿದ್ದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾವ ಗುಂಡಿ ಮುಚ್ಚಿದ್ದೀರಿ? ಎಲ್ಲಿ ಮುಚ್ಚಿದ್ದೀರಿ ಎಂದು ಪ್ರಶ್ನಿಸಿದರು. 1,100 ಕೋಟಿ ರೂ. ಮೊತ್ತದ ಲೆಕ್ಕ ಕೊಡಿ ಎಂದು ಒತ್ತಾಯಿಸಿದರು.





