ಹನೂರು ಶೂಟೌಟ್ ಪ್ರಕರಣ: "ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿ ನ್ಯಾಯ, ಸೂಕ್ತ ಬೆಂಬಲ ಒದಗಿಸಲಿ"
ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ನಿಯೋಗ ಆಗ್ರಹ

ಬೆಂಗಳೂರು, ಆ.31: ಚಾಮರಾಜನಗರ ಹನೂರು ಶೂಟೌಟ್ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಮತ್ತು ಸೂಕ್ತ ಬೆಂಬಲ ಒದಗಿಸಬೇಕು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ನಿಯೋಗವು ಆಗ್ರಹಿಸಿದೆ.
ಇತ್ತೀಚೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ನೇತೃತ್ವದಲ್ಲಿ ವಿಭಾಗದ ಸದಸ್ಯರು ಮೈಸೂರಿನ ಬಿಷಪ್ ಅವರನ್ನು ಭೇಟಿ ಮಾಡಿ, ಹನೂರಿನಲ್ಲಿ ನಡೆದ ದೌರ್ಜನ್ಯಗಳ ಕುರಿತು ಚರ್ಚಿಸಿತು. ಆ ಬಳಿಕ ಸಂತ್ರಸ್ತ ಕುಟುಂಬಗಳನ್ನು ಖುದ್ದು ಭೇಟಿ ಮಾಡಿದ ನಿಯೋಗವು, ಅಲ್ಲಿನ ಸಂತ್ರಸ್ತರು ತೀವ್ರ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಯಾರಿಗೂ ಸ್ವಂತ ಕೃಷಿ ಭೂಮಿ ಇಲ್ಲ ಮತ್ತು ಹೆಚ್ಚಿನ ಕುಟುಂಬಗಳು ಪರಸ್ಪರ ನಿಕಟ ಸಂಬಂಧಿಕರಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಡೆಯಿಂದ ಗಂಭೀರ ಲೋಪಗಳು ಕಂಡುಬರುತ್ತಿವೆ ಎಂದು ಹೇಳಿದೆ.
ಸಂತ್ರಸ್ತರ ಮೇಲೆ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ ಮತ್ತು ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಕುರಿತು ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ರಾಜ್ಯ ಸರಕಾರ ಐದು ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ. ಆದರೆ ಸಂತ್ರಸ್ತ ಕುಟುಂಬಗಳಿಗೆ ಸರಕಾರಿ ಉದ್ಯೋಗದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ನಿಯೋಗವು ಆಕ್ಷೇಪಿಸಿದೆ.
ಹಕ್ಕೊತ್ತಾಯ:
*ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು.
• ಕುಟುಂಬಗಳಿಗೆ, ವಿಶೇಷವಾಗಿ ಚಿಕ್ಕ ಮಕ್ಕಳಿರುವ ಕಾರಣ, ಸರಕಾರಿ ಉದ್ಯೋಗ ಅಥವಾ ಸೂಕ್ತ ಜೀವನೋಪಾಯದ ಬೆಂಬಲವನ್ನು ಒದಗಿಸುವುದು.
• ಅವರು ಸುಸ್ಥಿರ ಜೀವನೋಪಾಯವನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಭೂಮಿಯನ್ನು ಮಂಜೂರು ಮಾಡುವುದು.
• ಅತ್ಯಂತ ಮುಖ್ಯವಾಗಿ, ಪ್ರಮುಖ ಸಾಕ್ಷಿಯಾಗಿರುವ ಮತ್ತು ಸತ್ಯವನ್ನು ಹೊರತರುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾದ ನಾಲ್ಕನೇ ವ್ಯಕ್ತಿಗೆ ತಕ್ಷಣದ ರಕ್ಷಣೆ ನೀಡಬೇಕು ಎಂದು ನಿಯೋಗದಲ್ಲಿದ್ದ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಂಥೋನಿ ವಿಕ್ರಮ್ ಆಗ್ರಹಿಸಿದ್ದಾರೆ.






