ʼಆಂಧ್ರ, ತೆಲಂಗಾಣ ಮಾದರಿಯಲ್ಲಿ ಮದ್ಯದಂಗಡಿ ಪರವಾನಗಿ ಶುಲ್ಕʼ | ಈಡಿಗ-ಬಿಲ್ಲವರಿಗೆ ಶೇ.50ರಷ್ಟು ರಿಯಾಯಿತಿ ನೀಡಲು ಸಿಎಂಗೆ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ‘ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಮದ್ಯದಂಗಡಿ ಪರವಾನಗಿ ಶುಲ್ಕದಲ್ಲಿ ಈಡಿಗ ಮತ್ತು ಬಿಲ್ಲವ ಸಮುದಾಯದವರಿಗೆ ಶೇ.50ರಷ್ಟು ರಿಯಾಯಿತಿ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ನೇತೃತ್ವದ ಈಡಿಗ-ಬಿಲ್ಲವ ಸಮುದಾಯದ ಮುಖಂಡರ ನಿಯೋಗ ಮನವಿ ಮಾಡಿದೆ.
ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ನಿಯೋಗವು ಮನವಿಯನ್ನು ಸಲ್ಲಿಸಿತು. ‘ಸೇಂದಿ ಮತ್ತು ಸಾರಾಯಿ ಉತ್ಪಾದನೆ ಹಾಗೂ ಮಾರಾಟವನ್ನೇ ಕುಲ ಕಸುಬನ್ನಾಗಿ ಹೊಂದಿದ್ದ ಈಡಿಗ, ಬಿಲ್ಲವ ಮತ್ತು 26 ಉಪಜಾತಿಗಳ ಜನರು ಇದೀಗ ಸಂಕಷ್ಟದಲ್ಲಿದ್ದಾರೆ. ಕರ್ನಾಟಕದಲ್ಲಿ ಸೇಂದಿ ಹಾಗೂ ಸಾರಾಯಿ ಉತ್ಪಾದನೆ, ಮಾರಾಟ ನಿಷೇಧಿಸಿದ ಬಳಿಕ ಈ ಉದ್ಯಮವನ್ನೆ ನೆಚ್ಚಿಕೊಂಡಿದ್ದ ಈಡಿಗ, ಬಿಲ್ಲವ ಸಮುದಾಯದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಸೇಂದಿ ಮತ್ತು ಸಾರಾಯಿ ನಿಷೇಧದ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಳ್ಳುವ ಈಡಿಗ ಹಾಗೂ ಅದರ ಉಪಜಾತಿಗಳ ಜನರ ಪುನರ್ವಸತಿ ವಿಷಯದಲ್ಲಿ ಸರಕಾರ ನೀಡಿದ್ದ ಯಾವ ಭರವಸೆಗಳೂ ಈಡೇರಿಲ್ಲ. ಇದರಿಂದಾಗಿ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬದುಕನ್ನೇ ಕಳೆದುಕೊಂಡಿದ್ದಾರೆ. ಆದರೆ, ಸರಕಾರದ ತೀರ್ಮಾನಕ್ಕೆ ತಲೆಬಾಗಿದ ಸಮುದಾಯದ ಜನರು ಪಾನೀಯ ನಿಗಮದಿಂದ ಮದ್ಯ ಖರೀದಿಸಿ, ಮಾರಾಟ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
‘ಮದ್ಯ ಮಾರಾಟದ ಮೇಲಿನ ಲಾಭಾಂಶದಲ್ಲಿ ಶೇ.20ರಷ್ಟನ್ನು ಮದ್ಯದಂಗಡಿಗಳ ಮಾಲಕರಿಗೆ ನೀಡಲಾಗುತ್ತಿತ್ತು. ಅದನ್ನು ಶೇ.10ಕ್ಕೆ ಇಳಿಸಿರುವುದರಿಂದ ಮದ್ಯ ಮಾರಾಟಗಾರರು ನಷ್ಟ ಅನುಭವಿಸುತ್ತಿದ್ದಾರೆ. ಸೇಂದಿ, ಸಾರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡ ಈಡಿಗ, ಬಿಲ್ಲವ ಜನರಿಗೆ ಇದರಿಂದ ಇನ್ನಷ್ಟು ತೊಂದರೆ ಆಗಿದೆ. ರಾಜ್ಯ ಸರಕಾರವು ಮದ್ಯದಂಗಡಿಗಳ ಪರವಾನಗಿ ಶುಲ್ಕವನ್ನು ದುಪ್ಪಟ್ಟು ಮಾಡಿ ಆದೇಶ ಹೊರಡಿಸಿದೆ. ಇದರಿಂದ ಸಮುದಾಯದ ಜನರು ಮದ್ಯ ವ್ಯಾಪಾರದಿಂದಲೂ ಹೊರ ಹೋಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.
ಪ್ರವಾಸೋದ್ಯಮ ಉತ್ತೇಜನದ ಹೆಸರಿನಲ್ಲಿ ನೀಡುತ್ತಿರುವ ಹೊಸ ಪರವಾನಗಿಗಳಿಂದಲೂ ಸಮುದಾಯದ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ. ಮದ್ಯ ಮಾರಾಟದಲ್ಲಿ ಹಿಂದಿನಂತೆ ಶೇ.20ರಷ್ಟು ಲಾಭಾಂಶವನ್ನು ಮದ್ಯ ಮಾರಾಟಗಾರರಿಗೆ ನೀಡಬೇಕು. ಮದ್ಯ ಮಾರಾಟದಿಂದ ರಾಜ್ಯ ಸರಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಲು ರಾಜ್ಯ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ಸ್ ಮೂಲಕ ನೀಡಿರುವ ಸಲಹೆಯನ್ನು ಪರಿಗಣಿಸಬೇಕು ಎಂದು ಕೋರಿದ್ದಾರೆ.
ಆಂಧ್ರ ಸರಕಾರವು ಅಲ್ಲಿನ ಒಟ್ಟು ಮದ್ಯದಂಗಡಿಗಳ ಪರವಾನಗಿಗಳಲ್ಲಿ ಶೇ.10ರಷ್ಟನ್ನು ಈಡಿಗ ಸಮುದಾಯಕ್ಕೆ ಮೀಸಲಿರಿಸಿದೆ. ಈಡಿಗ ಸಮುದಾಯದ ಮದ್ಯದಂಗಡಿಗಳ ಮಾಲಕರಿಗೆ ಮದ್ಯದಂಗಡಿಗಳ ಪರವಾನಗಿ ಶುಲ್ಕದಲ್ಲಿ ಶೇ.50ರಷ್ಟು ರಿಯಾಯ್ತಿ ನೀಡಿದೆ. ಈ ಎರಡೂ ವಿಷಯಗಳ ಕುರಿತು ಅಧ್ಯಯನ ನಡೆಸಿ, ರಾಜ್ಯದಲ್ಲೂ ಅದೇ ರೀತಿಯ ಸೌಲಭ್ಯವನ್ನು ಒದಗಿಸಬೇಕು. ತೆಲಂಗಾಣದಲ್ಲಿ ಮದ್ಯ ಮಾರಾಟದಲ್ಲಿ ತೊಡಗಿರುವ ಈಡಿಗರೇ ಆಗಿರುವ ಗೌಡ್ ಸಮುದಾಯದ ವ್ಯಾಪಾರಿಗಳಿಗೆ ವ್ಯಾವಹಾರಿಕ ಲಾಭಾಂಶ ನೀಡುವ ಮೂಲಕ ಕುಲ ಕಸುಬುದಾರರಿಗೆ ಪ್ರೋತ್ಸಾಹ ನೀಡುತ್ತಿದೆ. ಅದೇ ಮಾದರಿಯಲ್ಲಿ ವ್ಯಾವಹಾರಿಕ ಲಾಭಾಂಶ ನೀಡುವ ಪ್ರೋತ್ಸಾಹಕ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಓಂನಾರಾಯಣ್, ಕಲಬುರಗಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಅಶೋಕ್ ಗುತ್ತೇದಾರ್, ಸಮುದಾಯದ ಮುಖಂಡರಾದ ಕೆ.ಗೋಪಿ, ಗುರುರಾಜ್, ಮೋಹನ್ ರಾಜ್, ಶಿವಕುಮಾರ್ ನಿಯೋಗದಲ್ಲಿ ಪಾಲ್ಗೊಂಡಿದ್ದರು.







