ದಕ್ಷಿಣ ಭಾಗದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ 50 ರೂ. ಶೀಘ್ರದಲ್ಲೇ ಜಮೆ : ಮುಖ್ಯಮಂತ್ರಿ

ಬೆಂಗಳೂರು, ಮೇ 12: ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಇದರ ಬೆನ್ನಲ್ಲೇ 7 ಸಕ್ಕರೆ ಕಾರ್ಖಾನೆಗಳು ರೈತರ ಖಾತೆ ವಿವರವನ್ನು ನೀಡಿದ್ದು, ಶೀಘ್ರದಲ್ಲೇ ರೈತರಿಗೆ ಸರಕಾರದ ಪಾಲಿನ 50 ರೂ. ಪ್ರೋ ತ್ಸಾಹ ಧನ ಜಮೆಯಾಗಲಿದೆ. ಇನ್ನು ರೈತರ ಖಾತೆಗಳಿಗೆ ಹಣ ಜಮೆ ಮಾಡುವಂತೆ ಖಜಾನೆಗೆ ಜಿಲ್ಲಾಧಿಕಾರಿಗಳು ವಿವರಗಳನ್ನು ನೀಡಿದ್ದಾರೆ.
2025-26ನೆ ಹಂಗಾಮಿನ ಕಬ್ಬು ಬೆಳೆಗಾರರ ಬಾಕಿ ಪ್ರೋ ತ್ಸಾಹಧನ ಪಾವತಿ, ರೈತರ ಬ್ಯಾಂಕ್ ಖಾತೆ ವಿವರಗಳನ್ನು ನೀಡಲು ನಿರಾಕರಿಸುತ್ತಿರುವ ಹಾಗೂ ಸರಕಾರದ ಆದೇಶ ಉಲ್ಲಂಘಿಸುತ್ತಿರುವ ದಕ್ಷಿಣ ಕರ್ನಾಟಕದ 7 ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಬಗ್ಗೆ ದಿನೇಶ್ ಗೂಳಿಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಇದರ ಬೆನ್ನಲ್ಲೇ ಸಕ್ಕರೆ ಕಾರ್ಖಾನೆಗಳು ರೈತರ ಖಾತೆ ವಿವರವನ್ನು ನೀಡಿವೆ. ಆದರೆ, ತಮ್ಮ ಪಾಲಿನ 50 ರೂ. ನೀಡಲು ಹಿಂದೇಟು ಹಾಕಿದ್ದು, ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದು, ಸದ್ಯ ಪ್ರಕರಣ ವಿಚಾರಣಾ ಹಂತದಲ್ಲಿದೆ.
ಲೈಸೆನ್ಸ್ ರದ್ದುಗೊಳಿಸಲೂ ಮನವಿ: ರೈತರಿಗೆ ಬಾಕಿ ನೀಡದ ಹಾಗೂ ಸರಕಾರದ ನಿಯಮ ಪಾಲಿಸದ ಈ 7 ಕಾರ್ಖಾನೆಗಳ ‘ಕ್ರಶಿಂಗ್ ಲೈಸೆನ್ಸ್’ ಅನ್ನು ಮುಂಬರುವ ಹಂಗಾಮಿಗೆ ನವೀಕರಿಸಬಾರದು. ಸರಕಾರವು ಹೈಕೋರ್ಟ್ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಡ್ವೊಕೇಟ್ ಜನರಲ್ ಅವರ ಮೂಲಕ ಬಲವಾದ ವಾದ ಮಂಡಿಸಬೇಕು ಎಂದು ದಿನೇಶ್ ಗೂಳಿಗೌಡ ಕೋರಿದ್ದರು.
ಅಲ್ಲದೆ, ಮುಂಗಾರು ಹಂಗಾಮು ಆರಂಭವಾಗುವ ಮುನ್ನವೇ ಮುಖ್ಯಮಂತ್ರಿ ನೇತೃತ್ವದಲ್ಲಿ ಈ ಕಾರ್ಖಾನೆ ಮಾಲಕರ ತುರ್ತು ಸಭೆ ಕರೆದು, ರೈತರ ಹಣ ಬಿಡುಗಡೆ ಮಾಡದಿದ್ದರೆ ಕಾರ್ಖಾನೆಗಳನ್ನು ಸರಕಾರದ ವಶಕ್ಕೆ ಪಡೆಯುವ ಬಗ್ಗೆ ಎಚ್ಚರಿಕೆ ನೀಡಬೇಕು ಎಂದು ಅವರು ಮನವಿ ಮಾಡಿದ್ದರು.
ರೈತರಿಗೆ 50 ರೂ. ನೀಡದ ದಕ್ಷಿಣ ಕರ್ನಾಟಕದ 7 ಸಕ್ಕರೆ ಕಾರ್ಖಾನೆಗಳು: ಬನ್ನಾರಿ ಅಮ್ಮನ್ ಶುಗರ್ಸ್, ಕುಂತೂರು, ಕೊಳ್ಳೇಗಾಲ ತಾಲೂಕು, ಚಾಮರಾಜನಗರ ಜಿಲ್ಲೆ, ಚಾಮುಂಡೇಶ್ವರಿ ಶುಗರ್ಸ್ ಲಿ. ಚನ್ನರಾಯಪಟ್ಟಣ, ಹಾಸನ ಜಿಲ್ಲೆ, ಕೋರಮಂಡಲ ಶುಗರ್ಸ್, ಕೆ.ಆರ್.ಪೇಟೆ ತಾಲೂಕು, ಮಂಡ್ಯ ಜಿಲ್ಲೆ, ಚಾಮುಂಡೇಶ್ವರಿ ಶುಗರ್ಸ್ ಲಿ. ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ, ಎಂಆರ್ ಎನ್ ಕೇನ್ ಪವರ್ ಅಂಡ್ ಬೈಯೋರಿಪೈನರಿಸ್ ಪ್ರೈ.ಲಿ. ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ, ಎನ್ ಎಸ್ ಎಲ್ ಶುಗರ್ಸ್ ಲಿ. ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ ಹಾಗೂ ಬನ್ನಾರಿ ಅಮ್ಮನ್ ಶುಗರ್ಸ್ ಲಿ. ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ.






