‘ರಾಷ್ಟ್ರೀಯ ಯುವ ಹಬ್ಬ’ದಲ್ಲಿ ಕರ್ನಾಟಕದ 78 ಮಂದಿ ಭಾಗಿ : ಅಶೋಕ್ ಕುಮಾರ್ ದಾಸ್

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ‘ರಾಷ್ಟ್ರೀಯ ಯುವ ಹಬ್ಬ’ದ ವಿವಿಧ ಕಾರ್ಯಕ್ರಮಗಳಲ್ಲಿ ಕರ್ನಾಟಕದಿಂದ 78 ಮಂದಿ ಯುವಕರು ಭಾಗವಹಿಸಲಿದ್ದಾರೆ ಎಂದು ಮೇರಾ ಯುವ ಭಾರತ್ನ ಕರ್ನಾಟಕದ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ದಾಸ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಪ್ರತಿ ವರ್ಷದಂತೆ ಈ ವರ್ಷವು ಜ.9ರಿಂದ ಜ.12ರವರೆಗೆ ಹೊಸದಿಲ್ಲಿಯ ಭಾರತ್ ಮಂಟಪಂನಲ್ಲಿ ‘ರಾಷ್ಟ್ರೀಯ ಯುವ ಹಬ್ಬ’ವನ್ನು ಆಚರಿಸುತ್ತಿದೆ. ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ರಾಜ್ಯದ 78 ಮಂದಿ ಭಾಗವಹಿಸಲಿದ್ದಾರೆ ಎಂದರು.
ವಿಕಾಸಿತ್ ಭಾರತ್ ಯಂಗ್ ಲೀಡರ್ಸ್ ಡಯಲಾಗ್ ಕಾರ್ಯಕ್ರಮದಲ್ಲಿ 45 ಮಂದಿ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ 30 ಮಂದಿ, ನೂತನ ಆವಿಷ್ಕಾರ ವಿಭಾಗದಲ್ಲಿ 3 ಮಂದಿ ಸೇರಿ 78 ಮಂದಿ ಭಾಗವಹಿಸಲಿದ್ದಾರೆ. ಈ ಯುವಕರೊಂದಿಗೆ 5 ಮಂದಿ ಅಧಿಕಾರಿಗಳು ‘ರಾಷ್ಟ್ರೀಯ ಯುವ ಹಬ್ಬ’ದಲ್ಲಿ ಹೊಸದಿಲ್ಲಿಗೆ ಹೋಗಲಿದ್ದಾರೆ ಎಂದು ಅವರು ವಿವರಿಸಿದರು.





