ರಾಜ್ಯದಲ್ಲಿ 14.18 ಲಕ್ಷ ಅಂತರ್ಜಲ ಯೋಜನೆ; 38,960 ಜಲಮೂಲಗಳ ಗಣತಿ ಪೂರ್ಣ : ಸಚಿವ ಡಾ.ಅಜಯ್ ಧರ್ಮಸಿಂಗ್
"ಬರ ನಿರ್ವಹಣೆಗೆ ನೆರವಾಗಲಿದೆ ಜಲಗಣತಿ ದತ್ತಾಂಶ"

ಬೆಂಗಳೂರು: ರಾಜ್ಯದ ಜಲಸಂಪನ್ಮೂಲಗಳ ವಾಸ್ತವ ಸ್ಥಿತಿಗತಿಯನ್ನು ಅರಿತು, ಭವಿಷ್ಯದ ನೀರಾವರಿ ಹಾಗೂ ಜಲಸಂರಕ್ಷಣಾ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲು ಮಹತ್ವದ್ದಾಗಿರುವ 7ನೇ ಸಣ್ಣ ನೀರಾವರಿ ಗಣತಿ ಹಾಗೂ 2ನೇ ಜಲಮೂಲಗಳ ಗಣತಿ ಕ್ಷೇತ್ರಕಾರ್ಯವನ್ನು ಕರ್ನಾಟಕ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ 2023-24ನೇ ಸಾಲನ್ನು ಆಧಾರ ವರ್ಷವನ್ನಾಗಿಟ್ಟುಕೊಂಡು ಕೈಗೊಂಡ ಈ ಬೃಹತ್ ಗಣತಿಯ ಕ್ಷೇತ್ರಕಾರ್ಯವು 2026ರ ಆಗಸ್ಟ್ನಲ್ಲಿ ಪೂರ್ಣಗೊಂಡಿದೆ. ಗಣತಿಯಲ್ಲಿ ರಾಜ್ಯದಾದ್ಯಂತ 14,18,894 ಅಂತರ್ಜಲ ಯೋಜನೆಗಳು, 77,573 ಮೇಲ್ಮೈ ಜಲ ಯೋಜನೆಗಳು ಹಾಗೂ 38,960 ಜಲಮೂಲಗಳು ದಾಖಲಾಗಿವೆ.
ರಾಜ್ಯದ 30,671 ಗ್ರಾಮಗಳು, 300 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 7,128 ನಗರ ವಾರ್ಡ್ಗಳನ್ನು ಗಣತಿ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ಜಲಸಂಪನ್ಮೂಲಗಳ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ.
ಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಜಯ್ ಧರ್ಮಸಿಂಗ್, ರಾಜ್ಯ ಎದುರಿಸುತ್ತಿರುವ ಬರ, ಅಂತರ್ಜಲ ಮಟ್ಟ ಕುಸಿತ ಹಾಗೂ ಹವಾಮಾನ ಬದಲಾವಣೆಯಂತಹ ಸವಾಲುಗಳ ನಡುವೆ ನಿಖರವಾದ ಜಲ ದತ್ತಾಂಶ ಅತ್ಯಂತ ಮಹತ್ವದ್ದಾಗಿದೆ. ಯಾವ ಪ್ರದೇಶದಲ್ಲಿ ಎಷ್ಟು ಜಲಮೂಲಗಳಿವೆ, ಅಂತರ್ಜಲ ಹಾಗೂ ಮೇಲ್ಮೈ ಜಲ ಯೋಜನೆಗಳ ಸ್ಥಿತಿಗತಿ ಏನು ಎಂಬ ಸ್ಪಷ್ಟ ಮಾಹಿತಿ ಲಭ್ಯವಾದರೆ, ಮುಂದಿನ ನೀರಾವರಿ ಮತ್ತು ಜಲಸಂರಕ್ಷಣಾ ಯೋಜನೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಹಾಗೂ ವೈಜ್ಞಾನಿಕವಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಣ್ಣ ನೀರಾವರಿ ಗಣತಿಯಲ್ಲಿ 2,000 ಹೆಕ್ಟೇರ್ವರೆಗೆ ನೀರಾವರಿ ಸಾಮರ್ಥ್ಯ ಹೊಂದಿರುವ ಯೋಜನೆಗಳ ಮಾಹಿತಿಯನ್ನು ದಾಖಲಿಸಲಾಗಿದ್ದು, ಜಲಮೂಲಗಳ ಗಣತಿಯಲ್ಲಿ ಕೆರೆ, ಕಟ್ಟೆ ಸೇರಿದಂತೆ ವಿವಿಧ ಜಲಮೂಲಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
“ಈ ಅಂಕಿಅಂಶಗಳು ಕೇವಲ ಗಣತಿ ವರದಿಗೆ ಸೀಮಿತವಾಗಬಾರದು. ಬರಪೀಡಿತ ಪ್ರದೇಶಗಳಲ್ಲಿ ಜಲಭದ್ರತೆ ಕಲ್ಪಿಸುವುದು, ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣ, ಚೆಕ್ ಡ್ಯಾಂಗಳ ನಿರ್ಮಾಣ ಹಾಗೂ ಕೆರೆ ತುಂಬಿಸುವ ಯೋಜನೆಗಳಿಗೆ ಆದ್ಯತೆ ನಿಗದಿಪಡಿಸಲು ಈ ದತ್ತಾಂಶವನ್ನು ಪರಿಣಾಮಕಾರಿಯಾಗಿ ಬಳಸಬೇಕು. ದತ್ತಾಂಶ ಆಧಾರಿತ ಯೋಜನೆ ಮತ್ತು ತಂತ್ರಜ್ಞಾನದ ಬಳಕೆಯ ಮೂಲಕ ರಾಜ್ಯದ ಜಲಸಂಪನ್ಮೂಲಗಳ ಸಮರ್ಥ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ತಿಳಿಸಿದರು.
ರಾಜ್ಯದ ಪ್ರತಿಯೊಂದು ಭಾಗದ ಜಲಸಂಪನ್ಮೂಲಗಳ ಸ್ಥಿತಿಗತಿಯನ್ನು ಅರಿತು, ಎಲ್ಲಿ ಜಲಸಂರಕ್ಷಣಾ ಕ್ರಮಗಳ ಅಗತ್ಯ ಹೆಚ್ಚಿದೆ, ಎಲ್ಲಿ ಅಂತರ್ಜಲ ಮರುಪೂರಣಕ್ಕೆ ಆದ್ಯತೆ ನೀಡಬೇಕು ಹಾಗೂ ಯಾವ ಪ್ರದೇಶಗಳಲ್ಲಿ ಸಣ್ಣ ನೀರಾವರಿ ಮೂಲಸೌಕರ್ಯವನ್ನು ಬಲಪಡಿಸಬೇಕು ಎಂಬುದನ್ನು ನಿರ್ಧರಿಸಲು ಈ ಗಣತಿಯ ದತ್ತಾಂಶ ನೆರವಾಗಲಿದೆ ಎಂದು ಅವರು ಹೇಳಿದರು.
ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡು ನಿಗದಿತ ಅವಧಿಯಲ್ಲಿ ಯಶಸ್ವಿಯಾಗಿ ಕಾರ್ಯ ಪೂರ್ಣಗೊಳಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ ಡಾ. ಅಜಯ್ ಧರ್ಮಸಿಂಗ್, “ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಉತ್ತಮ ಆಡಳಿತದ ಭಾಗ. ರಾಜ್ಯದಾದ್ಯಂತ ನಡೆದ ಈ ಬೃಹತ್ ಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯ ಶ್ರಮ ಅಭಿನಂದನಾರ್ಹ” ಎಂದು ಹೇಳಿದರು.






