ಫೆ.17ಕ್ಕೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ | ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪುನರ್ ಆಯ್ಕೆ ಬೇಡ : ಉಬೇದುಲ್ಲಾ ಶರೀಫ್

ಬೆಂಗಳೂರು : ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಫೆ.17ರಂದು ಚುನಾವಣೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಭೂ ಒತ್ತುವರಿ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷರ ಪುನರ್ ಆಯ್ಕೆಯಾಗಬಾರದು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಆಯೋಗ, ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ವೇಳೆ ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ಹೇಳಿದರು.
ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನೆ ಆಯ್ಕೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಬೋರ್ಡ್ನ ಸದಸ್ಯರು ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ, ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಸ್ಥಾನಕ್ಕೆ ಮತದಾನ ಮಾಡಲಿ ಎಂದು ಅವರು ಹೇಳಿದರು.
ಶಾಸಕರ ಭವನದಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರ ಕೊಠಡಿಯಲ್ಲಿ ಕೂತು ಆಪಾದಿತ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಸಲು ಸಚಿವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಉಬೇದುಲ್ಲಾ ಶರೀಫ್ ಆರೋಪಿಸಿದರು.
ವಕ್ಫ್ ಬೋರ್ಡ್ ಇತ್ತೀಚೆಗೆ ಸದಸ್ಯರೊಬ್ಬರನ್ನು ನಾಮನಿರ್ದೇಶನ ಮಾಡಿರುವುದು ತಪ್ಪು ನಿರ್ಧಾರವಾಗಿದೆ. ಪಕ್ಷದ ಶಾಸಕರು ಯಾಕೆ ಮೌನವಾಗಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಣಾಮ ಅನುಭವಿಸಬಹುದು ಎಂದು ಅವರು ಎಚ್ಚರಿಸಿದರು.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ, ವಕ್ಫ್ ಬೋರ್ಡ್ ಸದಸ್ಯರ ವಿರುದ್ಧದ ಆಪಾದನೆಗಳ ದಾಖಲೆಗಳು ಇವೆ. ಅವುಗಳೆಲ್ಲವೂ ಮುಂದಿನ ದಿನಗಳಲ್ಲಿ ಹೊರಗೆ ಬರಲಿವೆ. ಭೂ ಒತ್ತುವರಿ ಆರೋಪ, ಲೋಕಾಯುಕ್ತದಲ್ಲಿ ಪ್ರಕರಣ ಎದುರಿಸುತ್ತಿರುವವರನ್ನು ಯಾವುದೇ ಕಾರಣಕ್ಕೂ ಆಯ್ಕೆ ಮಾಡಬಾರದು ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಸೈಯದ್ ಅಶ್ರಫ್ ಮಾತನಾಡಿ, ಚಿತ್ರದುರ್ಗದ ಅನ್ವರ್ ಬಾಷಾ ಅವರನ್ನೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ಸಚಿವ ಝಮೀರ್ ಅಹ್ಮದ್ ಮಾತುಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವಕ್ಫ್ ಬೋರ್ಡ್ ಸಚಿವರ ವೈಯಕ್ತಿಕ ಆಸ್ತಿಯಲ್ಲ. ಚಿತ್ರದುರ್ಗದ ಅಗಸನಕಲ್ಲು ಗ್ರಾಮದಲ್ಲಿ ಮುಸ್ಲಿಮರ ಖಬರಸ್ಥಾನಕ್ಕಾಗಿ 1986ರಲ್ಲಿ ಆರು ಎಕರೆ ಮಂಜೂರು ಆಗಿ, 1987ರಲ್ಲಿ ಅದನ್ನು ವಕ್ಫ್ ಬೋರ್ಡ್ಗೆ ನೀಡಲಾಗಿತ್ತು ಎಂದು ಹೇಳಿದರು. ಆದರೆ, ಇದೀಗ ಆ ಜಮೀನಿನಲ್ಲಿ ಸುಮಾರು ಒಂದೂವರೆ ಎಕರೆಯಷ್ಟು ಜಾಗವನ್ನು ಅನ್ವರ್ ಬಾಷಾ ಒತ್ತುವರಿ ಮಾಡಿಕೊಂಡು ಅವರ ಮನೆ ಹಾಗೂ ಕಾಲೇಜು ನಿರ್ಮಿಸಿದ್ದಾರೆ ಎಂಬ ಆಪಾದನೆ ಇದೆ ಎಂದು ಸೈಯದ್ ಅಶ್ರಫ್ ತಿಳಿಸಿದರು.
ನಾನು ಖಾಸಗಿ ಸರ್ವೆಯರ್ಗಳ ಮೂಲಕ ಆ ಜಾಗದ ಸರ್ವೇ ಮಾಡಿಸುತ್ತೇನೆ. ಒಂದು ವೇಳೆ ಒತ್ತುವರಿ ಆಗಿದ್ದರೆ ಆ ಭೂಮಿಯನ್ನು ವಕ್ಫ್ ಬೋರ್ಡ್ಗೆ ವಾಪಸ್ ಪಡೆಯಲು ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇನೆ. ಹಿಂದಿನ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅವರ ಕೊಡುಗೆ ಏನು? ಎಂದು ಅವರು ಪ್ರಶ್ನಿದರು.
2022ರಲ್ಲಿ ಆ ಜಾಗದ ಸರ್ವೇ ಮಾಡಿಸಿದ್ದಾರೆ. ವರದಿಯಲ್ಲಿ ಜಮೀನು ಒತ್ತುವರಿ ಯಾಗಿಲ್ಲ ಎಂದಷ್ಟೇ ಹೇಳಿದ್ದಾರೆ. ಆದರೆ, ಒಟ್ಟಾರೆ ಜಮೀನಿನ ವಿಸ್ತೀರ್ಣ ಎಷ್ಟು ಎಂಬುದನ್ನು ಉಲ್ಲೇಖಿಸಿಲ್ಲ. ಆ ವರದಿಯನ್ನು ಕಚೇರಿಯಲ್ಲಿ ಕೂತು ಸಿದ್ಧಪಡಿಸಿರುವಂತಿದೆ ಎಂದು ಸೈಯದ್ ಅಶ್ರಫ್ ದೂರಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ನಮ್ಮ ಸಂಸ್ಥೆಗಳಿಗೆ ತಂದು ನೇಮಕ ಮಾಡಲಾಗುತ್ತಿದೆ. ಮುಸ್ಲಿಮ್ ಮಕ್ಕಳಿಗೆ 2 ‘ಬಿ’ ಪ್ರಮಾಣ ಪತ್ರ ಸಿಗುತ್ತಿಲ್ಲ. ಇದರಿಂದ ಅವರು ಸರಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಮತ ಕ್ಷೇತ್ರ ಶಿಗ್ಗಾಂವಿಯಲ್ಲಿರುವ ಮುಸ್ಲಿಮರ ಕಾಲನಿಗಳ ಅಭಿವೃದ್ಧಿಗೆ 10ಕೋಟಿ ರೂ.ಅನುದಾನ ಮಂಜೂರು ಮಾಡಿಸಿದ್ದರು. ಈ ಪೈಕಿ ಮೂರು ಕೋಟಿ ರೂ.ಗಳನ್ನು ಝಮೀರ್ ಅಹ್ಮದ್ ಚಿತ್ರದುರ್ಗಕ್ಕೆ ವರ್ಗಾಯಿಸಿದ್ದಾರೆ. ಈಗಾಗಲೇ ಪರಿಷತ್ ಸದಸ್ಯರ ಅನುದಾನದಿಂದ ಕೆಲಸ ಮುಗಿದಿರುವ ಕಾಮಗಾರಿಗೆ ಆ ಹಣ ಬಳಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಹಣದ ವಿವರಣೆ ಸರಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉರ್ದು ಅಕಾಡಮಿ ಮಾಜಿ ಅಧ್ಯಕ್ಷ ಮುಬೀನ್ ಮುನವ್ವರ್ ಉಪಸ್ಥಿತರಿದ್ದರು.







