561 ಮಂದಿಗೆ ಸ್ಥಳದಲ್ಲೆ ವರ್ಗಾವಣೆ ಆದೇಶ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಸೆ.10: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿಶೇಷ ಪ್ರಕರಣಗಳಿಗೆ (ವಿಶೇಷಚೇತನರು, ಗಂಭೀರ ಅನಾರೋಗ್ಯ ಹಾಗೂ ಪತಿ-ಪತ್ನಿ ಪ್ರಕರಣಗಳು) ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ನಡೆಸಿದ ಕೌನ್ಸಿಲಿಂಗ್ ವರ್ಗಾವಣೆ ಸಂಪನ್ನಗೊಂಡಿದ್ದು, 561 ಮಂದಿಗೆ ಸ್ಥಳದಲ್ಲೆ ವರ್ಗಾವಣೆ ಆದೇಶ ನೀಡಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಾನದಂಡಗಳಂತೆ ಅಂಗವಿಕಲ ಸೌಲಭ್ಯಕ್ಕೆ ಅರ್ಹರಾದ 61 ಮಂದಿ ಕೌನ್ಸ್ಸಿಲಿಂಗ್ ವರ್ಗಾವಣೆ ಲಾಭ ಪಡೆದಿದ್ದು, ಗಂಭೀರ ಕಾಯಿಲೆ ಎದುರಿಸುತ್ತಿರುವ 29 ಮಂದಿ ವರ್ಗಾವಣೆಗೊಂಡಿದ್ದಾರೆ, ಹಾಗೆಯೆ 56 ಒಂಟಿ ಮಹಿಳೆಯರು ಸ್ಥಾನ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಪತಿ-ಪತ್ನಿ ಪ್ರಕರಣಗಳಲ್ಲಿ 213 ಮಂದಿಗೆ ವರ್ಗಾವಣೆ ಸೌಲಭ್ಯ ನೀಡಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮೂರು ಮಂದಿ ವರ್ಗಾವಣೆಗೆ ಅರ್ಹರಾಗಿದ್ದಾರೆ. ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದ 199 ಮಂದಿ ಪಿಡಿಒಗಳನ್ನು ಅವರ ಆಯ್ಕೆಗೆ ಅನುಗುಣವಾಗಿ ಕಡ್ಡಾಯ ವರ್ಗಾವಣೆಗೆ ಒಳಪಡಿಸಲಾಗಿದೆ. ನಾಳೆಯಿಂದ 10 ದಿನಗಳ ಕಾಲ ಸಾಮಾನ್ಯ ಕೌನ್ಸಿಲಿಂಗ್ ವರ್ಗಾವಣೆಗಳು ಆರಂಭಗೊಳ್ಳಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





