ಫೆ.9ಕ್ಕೆ ಫ್ರೀಡಂ ಪಾರ್ಕ್ನಲ್ಲಿ ವಾಹನ ಚಾಲಕರ ಧರಣಿ
ಬೆಂಗಳೂರು: ಚಾಲಕ ವಿರೋಧಿಯಾಗಿರುವ ಭಾರತೀಯ ನ್ಯಾಯ ಸಂಹಿತೆ-2023ರ ಕೆಲ ಸೆಕ್ಷನ್ಗಳನ್ನು ಕೇಂದ್ರ ಸರಕಾರ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಫೆ.9ಕ್ಕೆ ಇಲ್ಲಿನ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಸಲಾಗುವುದು ಎಂದು ಆಲ್ ಇಂಡಿಯಾ ರೋಡ್ ಟ್ರಾನ್ಸ್ ಪೋರ್ಟ್ ವರ್ಕರ್ಸ್ ಫೆಡರೇಷನ್ ಸಂಚಾಲಕ ಕೆ. ಪ್ರಕಾಶ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಲಕರಿಗೆ ಮರಣ ಶಾಸನವಾಗಿರುವ ‘ಹಿಟ್ ಅಂಡ್ ರನ್’ ಭಾರತೀಯ ನ್ಯಾಯ ಸಂಹಿತೆ-23ಅಡಿ ತಪ್ಪಿತಸ್ಥ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 7 ಲಕ್ಷ ದಂಡ ವಿಧಿಸುವ ಅಂಶವನ್ನು ರದ್ದುಗೊಳಿಸಬೇಕು. ಅಪಘಾತಗಳನ್ನು ಅಪರಾಧೀಕರಿಸುವಂತೆ ಮಾಡುವ ಅಂಶಗಳನ್ನು ವಾಪಸ್ಸು ಪಡೆಯಬೇಕು ಎಂದು ಹೇಳಿದರು.
ರಾಜ್ಯ ಸರಕಾರವು ಚಾಲಕರ ವಿರೋಧಿಯಾಗಿರುವ ಈ ಕಾಯ್ದೆಗೆ ನಿಯಮಾವಳಿಗಳನ್ನು ರೂಪಿಸುವುದಿಲ್ಲ ಮತ್ತು ಜಾರಿಗೊಳಿಸುವುದಿಲ್ಲ ಎಂಬ ನಿರ್ಣಯವನ್ನು ಅಂಗೀಕರಿಸಬೇಕು. ರ್ಯಾಪಿಡೋ ಬೈಕ್ ವ್ಯವಸ್ಥೆಯನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿನ ಜಾತಿವಾರು ನಿಗಮಗಳಿಂದ ನಿರುದ್ಯೋಗಿ ಚಾಲಕರಿಗೆ ನೇರ ಸಾಲ ಯೋಜನೆಯಲ್ಲಿ ಆಟೋ, ಟ್ಯಾಕ್ಸಿ ಕೊಳ್ಳಲು ಸಾಲ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ.ಮಂಜುನಾಥ್, ಜಾಗೋ ಕರ್ನಾಟಕ ಯೂತ್ ಮತ್ತು ವುಮೆನ್ಸ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಮೊಹಮದ್ ಸಜ್ಜಾದ್ ಸೇಠ್, ಸಿ.ಎನ್. ಶ್ರಿನಿವಾಸ್ ಸೇರಿದಂತೆ ಮತ್ತಿರರು ಇದ್ದರು.







